ಅರಿಸ್ಟಾಟಲ್ (Greek: Ἀριστοτέλης , ಅರಿಸ್ಟಾಟೆಲೆಸ್ ) (384 BC – 322 BC) ಒಬ್ಬ ಗ್ರೀಕ್ ದಾರ್ಶನಿಕ ಮಾತ್ರವಲ್ಲದೆ, ಪ್ಲೇಟೋನ ಓರ್ವ ವಿದ್ಯಾರ್ಥಿ ಹಾಗೂ ಅಲೆಕ್ಸಾಂಡರ್ನ ಗುರುವಾಗಿದ್ದ.
ಭೌತಶಾಸ್ತ್ರ, ತತ್ತ್ವಮೀಮಾಂಸೆ, ಕವಿತೆ, ರಂಗಭೂಮಿ, ಸಂಗೀತ, ತರ್ಕಶಾಸ್ತ್ರ, ಭಾಷಣಶಾಸ್ತ್ರ, ರಾಜಕಾರಣ, ಸರ್ಕಾರ, ನೀತಿಶಾಸ್ತ್ರ, ಜೀವಶಾಸ್ತ್ರ, ಮತ್ತು ಪ್ರಾಣಿಶಾಸ್ತ್ರ ಇವೇ ಮೊದಲಾದವನ್ನು ಒಳಗೊಂಡಂತೆ ಅನೇಕ ವಿಷಯಗಳ ಕುರಿತು ಆತ ಬರೆದ. ಪ್ಲೇಟೋನ ಗುರುವಾದ ಸಾಕ್ರಟಿಸ್ ಮತ್ತು ಪ್ಲೇಟೋನ ಜೊತೆಜೊತೆಗೆ, ಪಾಶ್ಚಿಮಾತ್ಯ ತತ್ತ್ವಶಾಸ್ತ್ರದಲ್ಲಿನ ಅತಿ ಪ್ರಮುಖ ಪ್ರಸಿದ್ಧ ಸಂಸ್ಥಾಪಕರಲ್ಲಿ ಅರಿಸ್ಟಾಟಲ್ ಕೂಡಾ ಒಬ್ಬನಾಗಿದ್ದಾನೆ. ಪಾಶ್ಚಿಮಾತ್ಯ ತತ್ತ್ವಶಾಸ್ತ್ರದ ಒಂದು ವ್ಯಾಪಕವಾದ ಪದ್ಧತಿಯನ್ನು ಸೃಷ್ಟಿಸುವಲ್ಲಿ ಆತ ಮೊದಲಿಗನಾಗಿದ್ದು, ನೀತಿಶಾಸ್ತ್ರ ಮತ್ತು ಸೌಂದರ್ಯ ಮೀಮಾಂಸೆ, ತರ್ಕಶಾಸ್ತ್ರ ಮತ್ತು ವಿಜ್ಞಾನ, ರಾಜಕಾರಣ ಮತ್ತು ತತ್ತ್ವಮೀಮಾಂಸೆ ಇವೇ ಮೊದಲಾದವುಗಳನ್ನು ಈ ಪದ್ಧತಿಯು ಒಳಗೊಂಡಿದೆ. ಭೌತಿಕ ವಿಜ್ಞಾನಗಳ ಕುರಿತಾದ ಅರಿಸ್ಟಾಟಲ್ನ ದೃಷ್ಟಿಕೋನಗಳು ಮಧ್ಯಯುಗದ ಪಾಂಡಿತ್ಯಕ್ಕೆ ಗಾಢವಾದ ಸ್ವರೂಪವನ್ನು ನೀಡಿದವು. ಅಂತಿಮವಾಗಿ ಅವು ನ್ಯೂಟನ್ನನ ಭೌತಶಾಸ್ತ್ರದಿಂದ ಸ್ಥಾನಪಲ್ಲಟಗೊಂಡರೂ ಸಹ, ಅವುಗಳ ಪ್ರಭಾವವು ನವೋದಯ ಕಾಲಕ್ಕೂ ವಿಸ್ತರಿಸಿತು ಎಂದು ಹೇಳಬಹುದು. ಜೈವಿಕ ವಿಜ್ಞಾನಗಳಲ್ಲಿನ ಆತನ ಕೆಲವೊಂದು ವೀಕ್ಷಣೆಗಳು ತುಂಬಾ ನಿಖರವಾಗಿವೆ ಎಂದು ಕೇವಲ ಹತ್ತೊಂಬತ್ತನೇ ಶತಮಾನದಲ್ಲಿ ದೃಢೀಕರಿಸಲ್ಪಟ್ಟವು. ಅತಿ ಮುಂಚಿನದು ಎಂದು ಹೇಳಲಾದ ತರ್ಕಶಾಸ್ತ್ರದ ಔಪಚಾರಿಕ ಅಧ್ಯಯನವು ಆತನ ಕೃತಿಗಳಲ್ಲಿ ಸೇರಿಕೊಂಡಿದ್ದು, ಅದನ್ನು ಹತ್ತೊಂಬತ್ತನೇ ಶತಮಾನದ ಅಂತ್ಯದ ವೇಳೆಗೆ ಆಧುನಿಕ ಔಪಚಾರಿಕ ತರ್ಕಶಾಸ್ತ್ರದೊಳಗೆ ಅಳವಡಿಸಲಾಯಿತು. ತತ್ತ್ವಮೀಮಾಂಸೆಗೆ ಸಂಬಂಧಿಸಿ ಹೇಳುವುದಾದರೆ, ಮಧ್ಯ ಯುಗಗಳಲ್ಲಿನ ಇಸ್ಲಾಂ ಹಾಗೂ ಯೆಹೂದೀಯ ಸಂಪ್ರದಾಯಗಳಲ್ಲಿರುವ ತತ್ವಶಾಸ್ತ್ರದ ಮತ್ತು ದೇವತಾಶಾಸ್ತ್ರದ ಚಿಂತನಾ ಲಹರಿಗಳ ಮೇಲೆ ಅರಿಸ್ಟಾಟಲ್ ಸಿದ್ಧಾಂತವು ವ್ಯಾಪಕವಾದ ಪ್ರಭಾವವನ್ನು ಹೊಂದಿತ್ತು. ಇದು ಇಷ್ಟಕ್ಕೇ ನಿಲ್ಲದೇ, ಕ್ರೈಸ್ತ ದೇವತಾಶಾಸ್ತ್ರದ, ಅದರಲ್ಲೂ ವಿಶೇಷವಾಗಿ ಪೌರಸ್ತ್ಯ ಸಾಂಪ್ರದಾಯಿಕ ದೇವತಾಶಾಸ್ತ್ರ, ಮತ್ತು ಕೆಥೊಲಿಕ್ ಚರ್ಚ್ನ ವಿದ್ವತ್ಪೂರ್ಣ ಸಂಪ್ರದಾಯದ ಮೇಲೂ ಪ್ರಭಾವವನ್ನು ಬೀರುತ್ತಿದೆ. ಆತನ ನೀತಿಶಾಸ್ತ್ರ ಯಾವಾಗಲೂ ಪ್ರಭಾವಶಾಲಿಯಾಗಿದ್ದರೂ ಸಹ, ಆಧುನಿಕ ಸದ್ಗುಣ ನೀತಿಶಾಸ್ತ್ರದ ಉದಯವಾಗುವುದರೊಂದಿಗೆ ಹೊಸಚೈತನ್ಯದೊಂದಿಗಿನ ಆಸಕ್ತಿಯನ್ನು ಗಳಿಸಿದವು. ಅರಿಸ್ಟಾಟಲ್ನ ತತ್ತ್ವಶಾಸ್ತ್ರದ ಎಲ್ಲಾ ಮಗ್ಗುಲುಗಳೂ, ವಿದ್ವತ್ಪೂರ್ಣವಾದ ಅಥವಾ ಪ್ಲೇಟೋವಿನ ತಾತ್ವಿಕ ಪಂಥಕ್ಕೆ ಸಂಬಂಧಿಸಿದ ಇಂದಿನ ಕ್ರಿಯಾಶೀಲ ಅಧ್ಯಯನದ ಕೇಂದ್ರವಸ್ತುವಾಗಿಯೇ ಮುಂದುವರಿದುಕೊಂಡು ಬಂದಿವೆ. ಸುಸಂಸ್ಕೃತವಾದ ಅನೇಕ ಪ್ರಕರಣ ಗ್ರಂಥಗಳು ಹಾಗೂ ಸಂಭಾಷಣಾ ರೂಪದ ಗ್ರಂಥಗಳನ್ನು ಅರಿಸ್ಟಾಟಲ್ ಬರೆದನಾದರೂ, (ಆತನ ಸಾಹಿತ್ಯಿಕ ಶೈಲಿಯನ್ನು "ಬಂಗಾರದ ಒಂದು ನದಿ" ಎಂದು ಸಿಸೆರೊ ವರ್ಣಿಸಿದ್ದಾನೆ), ಆತನ ಬಹುಪಾಲು ಬರಹಗಳು ಈಗ ಇಲ್ಲವಾಗಿವೆ ಮತ್ತು ಆತನ ಮೂಲಕೃತಿಗಳ ಪೈಕಿ ಕೇವಲ ಮೂರನೇ ಒಂದು ಭಾಗ ಮಾತ್ರವೇ ಸದ್ಯಕ್ಕೆ ಲಭ್ಯವಿವೆ ಎಂಬ ಅಭಿಪ್ರಾಯವೂ ಚಾಲ್ತಿಯಲ್ಲಿದೆ.
ಜನನ | 384 BC ಸ್ಟಾಗಿರ, Chalcidice |
---|---|
ಮರಣ | 322 BC ಯೂಬಿಯ |
ಕಾಲಮಾನ | Ancient philosophy |
ಪ್ರದೇಶ | Western philosophy |
ಪರಂಪರೆ | Peripatetic school Aristotelianism |
ಮುಖ್ಯ ಹವ್ಯಾಸಗಳು | ಭೌತಶಾಸ್ತ್ರ, Metaphysics, ಕಾವ್ಯ, ರಂಗಭೂಮಿ, ಸಂಗೀತ, Rhetoric, ರಾಜಕಾರಣ, ಸರಕಾರ, ಮೌಲ್ಯ, ಜೀವಶಾಸ್ತ್ರ, Zoology |
ಗಮನಾರ್ಹ ಚಿಂತನೆಗಳು | Golden mean, Reason, Logic, Passion |
ಪ್ರಭಾವಕ್ಕೋಳಗಾಗು
| |
ಪ್ರಭಾವ ಬೀರು
|
ಇಂದಿನ ಥೆಸ್ಸಾಲೊನಿಕಿಯ ಸುಮಾರು[8] ಪೂರ್ವದಿಕ್ಕಿನಲ್ಲಿರುವ ಚಾಲ್ಸಿಡೈಸ್ನ ಸ್ಟಾಗೈರಾದಲ್ಲಿ, 384 BCಯಲ್ಲಿ, ಅರಿಸ್ಟಾಟಲ್ ಹುಟ್ಟಿದ. ಆತನ ತಂದೆ ನಿಕೊಮ್ಯಾಕಸ್, ಮೆಸೆಡಾನ್ನ ರಾಜ ಅಮಿಂಟಾಸ್ನಿಗೆ ಖಾಸಗಿ ವೈದ್ಯನಾಗಿದ್ದ. ಕುಲೀನ ವರ್ಗದ ಓರ್ವ ಸದಸ್ಯನಂತೆ ಅರಿಸ್ಟಾಟಲ್ಗೆ ತರಬೇತಿ ಮತ್ತು ಶಿಕ್ಷಣವನ್ನು ನೀಡಲಾಯಿತು. ಸುಮಾರು ಹದಿನೆಂಟರ ವರ್ಷದವನಾಗಿದ್ದಾಗ, ಪ್ಲೇಟೋನ ವಿದ್ಯಾಸಂಸ್ಥೆಯಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಲು ಆತ ಅಥೆನ್ಸ್ಗೆ ತೆರಳಿದ. ಸುಮಾರು ಇಪ್ಪತ್ತು ವರ್ಷಗಳ ಕಾಲ ಅರಿಸ್ಟಾಟಲ್ ಸದರಿ ವಿದ್ಯಾಸಂಸ್ಥೆಯಲ್ಲಿಯೇ ಉಳಿದಿದ್ದ.ಕ್ರಿ.ಶ.347 ಯಲ್ಲಿ ಪ್ಲೇಟೋನ ಸಾವು ಸಂಭವಿಸಿದ ನಂತರವೂ ಆತ ಜಾಗವನ್ನು ತೆರವುಗೊಳಿಸಲಿಲ್ಲ. ನಂತರ, ಕ್ಸೀನೋಕ್ರೇಟ್ಸ್ನೊಂದಿಗೆ ಏಷ್ಯಾ ಮೈನರ್ನಲ್ಲಿನ ಅಟಾರ್ನಿಯಸ್ನ ಹರ್ಮಿಯಾಸ್ ಎಂಬ ತನ್ನ ಸ್ನೇಹಿತನ ಆಸ್ಥಾನಕ್ಕೆ ಆತ ಪಯಣಿಸಿದ. ಏಷ್ಯಾದಲ್ಲಿರುವಾಗ, ಥಿಯೋಫ್ರಾಸ್ಟಸ್ನೊಂದಿಗೆ ಲೆಸ್ಬೋಸ್ ದ್ವೀಪಕ್ಕೆ ಅರಿಸ್ಟಾಟಲ್ ಪಯಣಿಸಿದ. ಅಲ್ಲಿ ಅವರಿಬ್ಬರೂ ಸದರಿ ದ್ವೀಪದ ಸಸ್ಯಶಾಸ್ತ್ರ ಮತ್ತು ಜೀವಶಾಸ್ತ್ರದ ಕುರಿತಾಗಿ ಒಟ್ಟಿಗೇ ಸಂಶೋಧನೆ ನಡೆಸಿದರು. ಹರ್ಮಿಯಾಸ್ನ ದತ್ತುಪುತ್ರಿ (ಅಥವಾ ಸೋದರ ಮಗಳು/ಸೊಸೆ) ಪೈಥಿಯಾಸ್ಳನ್ನು ಅರಿಸ್ಟಾಟಲ್ ಮದುವೆಯಾದ. ಆಕೆ ಅವನಿಗೊಂದು ಮಗುವನ್ನು ನೀಡಿದಳು. ಪೈಥಿಯಾಸ್ ಎಂದು ಆ ಮಗುವಿಗೆ ನಾಮಕರಣ ಮಾಡಲಾಯಿತು. ಹರ್ಮಿಯಾಸ್ನ ಮರಣದ ನಂತರ, 343 B.C.ಯಲ್ಲಿ ಮೆಕೆಡಾನ್ನ IIನೇ ಫಿಲಿಪ್ನಿಂದ ಅರಿಸ್ಟಾಟಲ್ಗೆ ಆಹ್ವಾನ ಬಂತು. ತನ್ನ ಮಗ ಅಲೆಕ್ಸಾಂಡರ್ ಮಹಾಶಯನಿಗೆ ಅರಿಸ್ಟಾಟಲ್ ಬೋಧಕನಾಗಿ ಕಾರ್ಯನಿರ್ವಹಿಸಬೇಕು ಎನ್ನುವುದು ಫಿಲಿಪ್ನ ಬಯಕೆಯಾಗಿತ್ತು.
ಮೆಕೆಡಾನ್ನ ರಾಯಲ್ ಅಕೆಡೆಮಿಯ ಮುಖ್ಯಸ್ಥನಾಗಿ ಅರಿಸ್ಟಾಟಲ್ನನ್ನು ನೇಮಿಸಲಾಯಿತು. ಆ ಅವಧಿಯಲ್ಲಿ ಅಲೆಕ್ಸಾಂಡರ್ಗೆ ಮಾತ್ರವಲ್ಲದೆ ಟೊಲೆಮಿ ಮತ್ತು ಕೆಸ್ಸಾಂಡರ್ ಎಂಬ ಇತರಿಬ್ಬರು ಭವಿಷ್ಯದ ರಾಜರಿಗೂ ಸಹ ಆತ ಪಾಠಗಳನ್ನು ಹೇಳಿಕೊಟ್ಟ. ಉಳಿದೆಲ್ಲ ನಾಗರಿಕರೆಲ್ಲರ ಒಟ್ಟು ಮಾಡಿದ ಸದ್ಗುಣದೊಂದಿಗೆ ತುಲನೆ ಮಾಡಿನೋಡಿದಾಗ, ರಾಜ ಮತ್ತವನ ಕುಟುಂಬದ ಸದ್ಗುಣ ಪ್ರಮಾಣವು ಹೆಚ್ಚಾಗಿ ಕಂಡುಬಂದಲ್ಲಿ, ಕೇವಲ ಅದು ಮಾತ್ರವೇ ರಾಜಪ್ರಭುತ್ವವನ್ನು ಸಮರ್ಥಿಸಬಲ್ಲದು ಎಂದು ಪಾಲಿಟಿಕ್ಸ್ ಎಂಬ ತನ್ನ ಕೃತಿಯಲ್ಲಿ ಅರಿಸ್ಟಾಟಲ್ ಹೇಳುತ್ತಾನೆ. ಯುವ ರಾಜಕುಮಾರ ಮತ್ತು ಅವನ ತಂದೆಯನ್ನು ಚಾಕಚಕ್ಯತೆಯಿಂದ ಅಥವಾ ಸಮಯಸ್ಫೂರ್ತಿಯಿಂದ ಆ ವರ್ಗದಲ್ಲಿ ಅವನು ಸೇರಿಸಿದ. ಪೌರಸ್ತ್ಯ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಅರಿಸ್ಟಾಟಲ್ ಅಲೆಕ್ಸಾಂಡರ್ನನ್ನು ಪ್ರೇರೇಪಿಸಿದ, ಮತ್ತು ಪರ್ಷಿಯಾದೆಡೆಗಿನ ಅವನ ವರ್ತನೆ ಅಥವಾ ದೃಷ್ಟಿಕೋನವು ಜನಾಂಗಕೇಂದ್ರಿತವಾಗಿತ್ತು ಎಂದು ನಿಸ್ಸಂಕೋಚವಾಗಿ ಹೇಳಬಹುದು. ’ಗ್ರೀಕರಿಗೆ ಓರ್ವ ನಾಯಕನಾಗಿ ಮತ್ತು ಗ್ರೀಕೇತರರಿಗೆ ಅಥವಾ ಅನ್ಯದೇಶೀಯರಿಗೆ ಓರ್ವ ನಿರಂಕುಶ ಪ್ರಭುವಾಗಿರುವಂತೆ, ಸ್ನೇಹಿತರು ಮತ್ತು ಸಂಬಂಧಿಗಳ ನಂತರದ ಸ್ಥಾನದಲ್ಲಿ ಗ್ರೀಕರನ್ನು ನೋಡಿಕೊಳ್ಳುವಂತೆ, ಹಾಗೂ ಪಶುಗಳ ಅಥವಾ ಗಿಡಗಳೊಂದಿಗೆ ವರ್ತಿಸುವ ರೀತಿಯಲ್ಲಿ ಅನ್ಯದೇಶೀಯರೊಂದಿಗೆ ನಡೆದುಕೊಳ್ಳುವಂತೆ’ ಒಂದು ಪ್ರಖ್ಯಾತ ನಿದರ್ಶನದಲ್ಲಿ ಅಲೆಕ್ಸಾಂಡರ್ಗೆ ಆತ ಹಿತವಚನವನ್ನು ನೀಡುತ್ತಾನೆ. 335 BCಯ ಹೊತ್ತಿಗಾಗಲೇ ಆತ ಅಥೆನ್ಸ್ಗೆ ಹಿಂದಿರುಗಿದ್ದ. ಲೈಸಿಯಂ ಎಂಬ ಹೆಸರಿನ ತನ್ನದೇ ಸ್ವಂತ ಶಾಲೆಯನ್ನು ಅಲ್ಲಿ ಆತ ಸ್ಥಾಪಿಸಿದ. ಮುಂದಿನ ಹನ್ನೆರಡು ವರ್ಷಗಳವರೆಗೆ ಆ ಶಾಲೆಯಲ್ಲಿ ಅರಿಸ್ಟಾಟಲ್ ತರಗತಿಗಳನ್ನು ನಡೆಸಿದ. ಅಥೆನ್ಸ್ನಲ್ಲಿರುವಾಗ ಆತನ ಹೆಂಡತಿ ಪೈಥಿಯಾಸ್ ತೀರಿಕೊಂಡಳು ಮತ್ತು ಸ್ಟಾಗೈರಾದ ಹರ್ಪೈಲಿಸ್ಳಿಗೆ ಅರಿಸ್ಟಾಟಲ್ ಒಡನಾಡಿಯಾದ. ಆಕೆ ಗಂಡುಮಗುವೊಂದಕ್ಕೆ ಜನ್ಮ ನೀಡಿದಳು ಮತ್ತು ತನ್ನ ತಂದೆಯ ಹೆಸರಾದ ನಿಕೊಮ್ಯಾಕಸ್ ಎಂಬ ಹೆಸರನ್ನೇ ಆ ಮಗುವಿಗೂ ಅರಿಸ್ಟಾಟಲ್ ಇಟ್ಟ. ಸೂಡಾದ ಪ್ರಕಾರ, ಅಬೈಡಸ್ನ ಪಾಲಿಫೇಟಸ್ಗೆ ಸೇರಿದ ಇರೊಮಿನಸ್ ಎಂಬುವವಳ ಜೊತೆಗೂ ಆತನ ಒಡನಾಟವಿತ್ತು. 335 ರಿಂದ 323 BCವರೆಗೆ ಅಥೆನ್ಸ್ನಲ್ಲಿದ್ದ ಆ ಅವಧಿಯಲ್ಲೇ ಅರಿಸ್ಟಾಟಲ್ ತನ್ನ ಬಹುಪಾಲು ಕೃತಿಗಳನ್ನು ರಚಿಸಿರಬಹುದೆಂದು ನಂಬಲಾಗಿದೆ. ಅರಿಸ್ಟಾಟಲ್ ಅನೇಕ ಸಂಭಾಷಣಾ ರೂಪದ ಗ್ರಂಥಗಳನ್ನು ಬರೆದಿದ್ದು, ಅವುಗಳಲ್ಲಿ ಅವಶಿಷ್ಟ ಭಾಗಗಳಷ್ಟೇ ಉಳಿದಿವೆ. ಹೀಗೆ ಉಳಿದುಕೊಂಡ ಭಾಗಗಳು ಪ್ರಕರಣ ಗ್ರಂಥದ ಸ್ವರೂಪದಲ್ಲಿದ್ದು, ಅವುಗಳ ಬಹುತೇಕ ಭಾಗವು ವ್ಯಾಪಕವಾಗಿ ಪ್ರಕಟವಾಗುವ ಉದ್ದೇಶವನ್ನು ಹೊಂದಿರಲಿಲ್ಲ. ಏಕೆಂದರೆ, ಈ ಭಾಗಗಳು ಆತನ ವಿದ್ಯಾರ್ಥಿಗಳಿಗಾಗಿ ಮೀಸಲಿಡಲಾಗಿದ್ದ ಬೋಧನಾ ಸಾಮಗ್ರಿಗಳಾಗಿವೆ ಎಂದು ಸಾಮಾನ್ಯವಾಗಿ ಭಾವಿಸಲಾಗಿತ್ತು. ಆತನ ಅತಿ ಪ್ರಮುಖ ಪ್ರಕರಣ ಗ್ರಂಥಗಳಲ್ಲಿ ಫಿಸಿಕ್ಸ್ , ಮೆಟಾಫಿಸಿಕ್ಸ್ , ನಿಕೋಮೇಕಿಯನ್ ಎಥಿಕ್ಸ್ , ಪಾಲಿಟಿಕ್ಸ್ , ಡಿ ಅನಿಮಾ (ಆನ್ ದಿ ಸೋಲ್) ಮತ್ತು ಪೊಯೆಟಿಕ್ಸ್ ಇವೇ ಮೊದಲಾದವು ಸೇರಿವೆ. ಆ ಸಮಯದಲ್ಲಿ ಕಾರ್ಯಸಾಧ್ಯವಾದ ಸರಿಸುಮಾರು ಎಲ್ಲ ವಿಷಯಗಳ ಅಧ್ಯಯನವನ್ನು ಮಾತ್ರವೇ ಅರಿಸ್ಟಾಟಲ್ ಮಾಡಲಿಲ್ಲ. ಅದರ ಜೊತೆಗೆ, ಅವುಗಳಲ್ಲಿ ಬಹುತೇಕ ವಿಷಯಗಳ ಕುರಿತಾಗಿ ಗಮನಾರ್ಹವಾದ ಕೊಡುಗೆಗಳನ್ನು ಸಲ್ಲಿಸಿದ್ದಾನೆ. ಭೌತಿಕ ವಿಜ್ಞಾನದಲ್ಲಿ, ಅಂಗರಚನಾ ಶಾಸ್ತ್ರ, ಖಗೋಳ ವಿಜ್ಞಾನ, ಅರ್ಥಶಾಸ್ತ್ರ, ಭ್ರೂಣಶಾಸ್ತ್ರ, ಭೂಗೋಳ, ಭೂವಿಜ್ಞಾನ, ಪವನಶಾಸ್ತ್ರ, ಭೌತಶಾಸ್ತ್ರ ಮತ್ತು ಜೀವಶಾಸ್ತ್ರಗಳನ್ನು ಅರಿಸ್ಟಾಟಲ್ ಅಧ್ಯಯನಮಾಡಿದ. ತತ್ತ್ವಶಾಸ್ತ್ರದಲ್ಲಿ, ಸೌಂದರ್ಯ ಮೀಮಾಂಸೆ, ನೀತಿಶಾಸ್ತ್ರ, ಸರ್ಕಾರ, ತತ್ತ್ವಮೀಮಾಂಸೆ, ರಾಜಕಾರಣ, ಮನೋವಿಜ್ಞಾನ, ಭಾಷಣಶಾಸ್ತ್ರ ಮತ್ತು ದೇವತಾಶಾಸ್ತ್ರಗಳ ಕುರಿತಾಗಿ ಆತ ಕೃತಿಗಳನ್ನು ರಚಿಸಿದ. ಶಿಕ್ಷಣ, ವಿದೇಶಿ ಸುಂಕಗಳು, ಸಾಹಿತ್ಯ ಮತ್ತು ಕವಿತೆ ಇವೇ ಮೊದಲಾದ ವಿಷಯಗಳನ್ನೂ ಆತ ಅಧ್ಯಯನ ಮಾಡಿದ. ಆತನ ಸಂಯೋಜಿತ ಕೃತಿಗಳು ಗ್ರೀಕ್ ಜ್ಞಾನಸಾಗರದ ಒಂದು ವಸ್ತುತಃ ವಿಶ್ವಕೋಶವೇ ಆಗಿ ಮೈದಳೆದಿವೆ. ತಾನು ಬದುಕಿದ್ದ ಕಾಲದ ಅವಧಿಯಲ್ಲಿ ಏನೇನನ್ನು ತಿಳಿದುಕೊಂಡಿರಬೇಕಿತ್ತೋ ಅವೆಲ್ಲವನ್ನೂ ತಿಳಿದುಕೊಂಡವರಲ್ಲಿ ಪ್ರಾಯಶಃ ಅರಿಸ್ಟಾಟಲ್ ಕೊನೆಯ ವ್ಯಕ್ತಿ ಎಂದು ಹೇಳುವುದು ವಾಡಿಕೆಯಾಗಿದೆ. ಅಲೆಕ್ಸಾಂಡರ್ನ ಬದುಕಿನ ಕೊನೆಯ ದಿನಗಳು ಸಮೀಪಿಸುತ್ತಿದ್ದಂತೆ, ತನ್ನ ವಿರುದ್ಧ ಸಂಚುಗಳು ನಡೆಯುತ್ತಿವೆ ಎಂದು ಶಂಕಿಸಲು ಪ್ರಾರಂಭಿಸಿದ ಅಲೆಕ್ಸಾಂಡರ್, ಪತ್ರಗಳ ಮೂಲಕ ಅರಿಸ್ಟಾಟಲ್ನನ್ನು ಬೆದರಿಸಿದ. ಅಲೆಕ್ಸಾಂಡರನ ದೇವಮಾನವನ ಸೋಗು ಅಥವಾ ಡೋಂಗಿಯ ಕುರಿತಾಗಿ ತನಗಿರುವ ತಾತ್ಸಾರವನ್ನು ಅರಿಸ್ಟಾಟಲ್ ಎಂದೂ ಮುಚ್ಚಿಟ್ಟರಲಿಲ್ಲ, ಮತ್ತು ಅರಿಸ್ಟಾಟಲ್ನ ಸೋದರ ಮೊಮ್ಮಗ ಕ್ಯಾಲಿಸ್ಥೆನ್ಸಸ್ನನ್ನು ಓರ್ವ ದೇಶದ್ರೋಹಿಯೆಂದು ರಾಜನು ಗಲ್ಲಿಗೇರಿಸಿದ್ದ. ಅಲೆಕ್ಸಾಂಡರ್ನ ಮರಣದಲ್ಲಿ ಅರಿಸ್ಟಾಟಲ್ ಪಾತ್ರ ವಹಿಸುತ್ತಿದ್ದಾನೆ ಎಂದು ಪ್ರಾಚೀನರಲ್ಲಿನ ಒಂದು ವ್ಯಾಪಕ ಸಂಪ್ರದಾಯವು ಶಂಕಿಸಿತಾದರೂ, ಈ ಕುರಿತು ಯಾವುದೇ ಚಿಕ್ಕ ಸಾಕ್ಷ್ಯವೂ ಸಿಕ್ಕಿಲ್ಲ. ಅಲೆಕ್ಸಾಂಡರ್ನ ಮರಣಾನಂತರ ಅಥೆನ್ಸ್ನಲ್ಲಿ ಮೆಕೆಡಾನೀಯರ-ವಿರೋಧಿ ಭಾವನೆಯು ಮತ್ತೊಮ್ಮೆ ಭುಗಿಲೆದ್ದಿತು. ದೇವರುಗಳಲ್ಲಿ ಗೌರವ ತೋರದಿದ್ದುದಕ್ಕಾಗಿ ದೀಕ್ಷಾಗುರುವಾದ ಯುರಿಮೆಡಾನ್ ಅರಿಸ್ಟಾಟಲ್ನನ್ನು ಬಹಿರಂಗವಾಗಿ ಉಗ್ರವಾಗಿ ಟೀಕಿಸಿದ. ನಗರವನ್ನು ಏಕಾಏಕಿ ಬಿಟ್ಟು ಪಲಾಯನ ಮಾಡಿದ ಅರಿಸ್ಟಾಟಲ್, ಚಾಲ್ಸಿಸ್ನಲ್ಲಿನ ತನ್ನ ತಾಯಿಯ ಕುಟುಂಬದ ತೋಟಕ್ಕೆ ತೆರಳಿದ. ಹೀಗೆ ಹೋಗುವಾಗ ಆತ, "ತತ್ತ್ವಶಾಸ್ತ್ರದ ವಿರುದ್ಧವಾಗಿ ಎರಡುಸಲ ಪಾಪವೆಸಗಲು ನಾನು ಅಥೆನ್ಸಿನ ಜನರಿಗೆ ಅವಕಾಶ ಮಾಡಿಕೊಡುವುದಿಲ್ಲ" ಎಂದು ಹೇಳಿರುವುದು ಅಥೆನ್ಸ್ನ ಇದಕ್ಕೂ ಮುಂಚಿನ, ಸಾಕ್ರಟಿಸ್ನ ವಿಚಾರಣೆ ಮತ್ತು ಗಲ್ಲಿಗೇರಿಸುವಿಕೆಗೆ ಒಂದು ಉಲ್ಲೇಖವಾಗಿದೆ. ಆದಾಗ್ಯೂ, ಆ ವರ್ಷದೊಳಗೆ (322 BCಯಲ್ಲಿ) ಯುಬಿಯಾದಲ್ಲಿ ಆತ ಸ್ವಾಭಾವಿಕವಾಗಿ ಮರಣ ಹೊಂದಿದ. ತನ್ನ ವಿದ್ಯಾರ್ಥಿ ಆಂಟಿಪೇಟರ್ನನ್ನು ಮುಖ್ಯ ಕಾರ್ಯನಿರ್ವಾಹಕನನ್ನಾಗಿ ನೇಮಿಸಿದ ಅರಿಸ್ಟಾಟಲ್, ತನ್ನ ಹೆಂಡತಿಯ ಗೋರಿಯ ಪಕ್ಕದಲ್ಲೇ ತನ್ನನ್ನೂ ಸಮಾಧಿ ಮಾಡಬೇಕು ಎಂದು ನಮೂದಿಸಿದ್ದ ಉಯಿಲು ಒಂದನ್ನು ಬಿಟ್ಟುಹೋದ.
ಪ್ರಯರ್ ಅನಲಿಟಿಕ್ಸ್ ಕೃತಿಯ ಕಾರಣದಿಂದಾಗಿ, ಬಹಳ ಮುಂಚೆಯೇ ಔಪಚಾರಿಕ ತರ್ಕಶಾಸ್ತ್ರದ ಅಧ್ಯಯನವನ್ನು ನಡೆಸಿದ ಕೀರ್ತಿ ಅರಿಸ್ಟಾಟಲ್ಗೆ ಸಲ್ಲುತ್ತದೆ. 19ನೇ ಶತಮಾನದಲ್ಲಿ ಕರಾರುವಾಕ್ಕಾದ ತರ್ಕಶಾಸ್ತ್ರದಲ್ಲಿ ಪ್ರಗತಿಯು ಕಾಣುವವರೆಗೂ, ಔಪಚಾರಿಕ ತರ್ಕಶಾಸ್ತ್ರದ ಕುರಿತಾದ ಆತನ ಪರಿಕಲ್ಪನೆಯು ಪಾಶ್ಚಿಮಾತ್ಯ ತರ್ಕಶಾಸ್ತ್ರದ ಪ್ರಭಾವಿ ಸ್ವರೂಪವಾಗಿತ್ತು. ಅರಿಸ್ಟಾಟಲ್ನ ತರ್ಕಶಾಸ್ತ್ರದ ಸಿದ್ಧಾಂತವು ಅನುಮಾನಾತ್ಮಕ ತೀರ್ಮಾನದ ಮುಖ್ಯಸಾರಕ್ಕೆ ಸಂಪೂರ್ಣವಾಗಿ ಸಮಜಾಯಿಷಿ ನೀಡಿದೆ ಎಂದು ಕ್ರಿಟೀಕ್ ಆಫ್ ಪ್ಯೂರ್ ರೀಸನ್ ಎಂಬ ಕೃತಿಯಲ್ಲಿ ಕ್ಯಾಂಟ್ ಅಭಿಪ್ರಾಯಪಟ್ಟಿದ್ದಾನೆ.
'ತಾರ್ಕಿಕ ವಿಧಾನದ ವಿಷಯಕ್ಕೆ ಸಂಬಂಧಿಸಿದಂತೆ, ಹಿಂದಿನ ಕಾಲದ್ದರ ಕುರಿತಾಗಿ ಮಾತಾಡಲು ತನಗೇನೂ ಉಳಿದಿರಲಿಲ್ಲ' ಎಂದು ಅರಿಸ್ಟಾಟಲ್ ಹೇಳುತ್ತಾನೆ. ಆದಾಗ್ಯೂ, ಪದಗಳ ಸೂಕ್ತ ಬಳಕೆಯ ಕುರಿತು ಕಾಳಜಿಯನ್ನು ಹೊಂದಿದ್ದ ಸಿಯೋಸ್ನ ಪ್ರೋಡಿಯಸ್ನಿಂದ ರೂಪಿಸಲ್ಪಟ್ಟ ವಾಕ್ಯರಚನಾ ಸೂತ್ರಗಳನ್ನು ಅವನ ಮುಂದೆ ಪ್ರಸ್ತುತಪಡಿಸಲಾಯಿತು ಎಂದು ಪ್ಲೇಟೋ ಹೇಳುತ್ತಾನೆ. ತತ್ತ್ವಜಿಜ್ಞಾಸೆಗಳಿಂದ ತರ್ಕಶಾಸ್ತ್ರವು ಹೊರಹೊಮ್ಮಿತು ಎಂದು ತೋರುತ್ತದೆ; ಇದಕ್ಕೂ ಹಿಂದಿನ ದಾರ್ಶನಿಕರು ತಮ್ಮ ಚರ್ಚೆಗಳಲ್ಲಿ ರಿಡಕ್ಟಿಯೊ ಅಡ್ ಅಬ್ಸರ್ಡಮ್ ನಂತಹ ಪರಿಕಲ್ಪನೆಯನ್ನು ಅನೇಕ ಸಲ ಬಳಸಿದ್ದರೂ, ನಿಜವಾದ ಅರ್ಥದಲ್ಲಿ ತಾರ್ಕಿಕವಾದ ಅಂತರಾರ್ಥಗಳನ್ನು ಅವರೆಂದೂ ಅರ್ಥಮಾಡಿಕೊಂಡಿರಲಿಲ್ಲ. ತರ್ಕಶಾಸ್ತ್ರವನ್ನು ಅರ್ಥೈಸಿಕೊಳ್ಳುವಲ್ಲಿ ಪ್ಲೇಟೋ ಕೂಡಾ ಬಿಕ್ಕಟ್ಟುಗಳನ್ನು ಎದುರಿಸಿದ್ದ; ಅನುಮಾನಾತ್ಮಕ ಪದ್ಧತಿಯೊಂದರ ಒಂದು ಸಮಂಜಸವಾದ ಪರಿಕಲ್ಪನೆಯನ್ನು ಆತ ಹೊಂದಿದ್ದನಾದರೂ, ವಾಸ್ತವವಾಗಿ ಅಂಥಾದ್ದೊಂದನ್ನು ರೂಪಿಸಲು ಅವನಿಗೆ ಸಾಧ್ಯವಾಗಲೇ ಇಲ್ಲ ಮತ್ತು ಅದರ ಬದಲಿಗೆ ಆತ ತನ್ನ ತತ್ತ್ವಜಿಜ್ಞಾಸೆಯನ್ನೇ ನೆಚ್ಚಿಕೊಳ್ಳಬೇಕಾಗಿ ಬಂತು. ಕಾರಣಪೂರ್ವಕ ಊಹನವು ಪ್ರಮೇಯದಿಂದ ಅಥವಾ ಆಧಾರವಾಕ್ಯದಿಂದ ಹಾಗೆಯೇ ಅನುಸರಿಸಿಕೊಂಡು ಬರುತ್ತದೆ ಎಂದು ಪ್ಲೇಟೋ ನಂಬಿದ್ದ. ಹೀಗಾಗಿ, ತರ್ಕಸರಣಿಯ ಫಲಿತಾಂಶವು ತಾರ್ಕಿಕವಾಗಿ ಅನುಸರಿಸಲು ಅನುವು ಮಾಡಿಕೊಡುವ ಬಲವಾದ ಪ್ರಮೇಯಗಳನ್ನು ಕಾಯ್ದುಕೊಂಡು ಬರುವ ಕಡೆಗೆ ಆತ ಗಮನಕೊಟ್ಟ. ಇದರ ಪರಿಣಾಮವಾಗಿ, ತರ್ಕಸರಣಿಯ ಫಲಿತಾಂಶಗಳನ್ನು ಅಥವಾ ತೀರ್ಮಾನಗಳನ್ನು ಪಡೆಯುವುದಕ್ಕಾಗಿರುವ ಒಂದು ವಿಧಾನವು ಅತಿ ಪ್ರಯೋಜನಕಾರಿಯಾಗಿರುತ್ತದೆ ಎಂಬುದನ್ನು ಪ್ಲೇಟೋ ಮನವರಿಕೆ ಮಾಡಿಕೊಂಡ. ಇಂಥದೊಂದು ವಿಧಾನವನ್ನು ರೂಪಿಸುವಲ್ಲಿ ಆತ ಎಂದಿಗೂ ಯಶಸ್ವಿಯಾಗದಿದ್ದರೂ, ಆತನ ಅತ್ಯುತ್ತಮ ಪ್ರಯತ್ನವು ಸೋಫಿಸ್ಟ್ ಎಂಬ ಆತನ ಪುಸ್ತಕದಲ್ಲಿ ಪ್ರಕಟಗೊಂಡಿತು. ಈ ಪುಸ್ತಕದಲ್ಲಿ ಆತ ತನ್ನ ವರ್ಗೀಕರಣ ವಿಧಾನವನ್ನು ಪರಿಚಯಿಸಿದ್ದಾನೆ.
ಅರಿಸ್ಟಾಟಲ್ನ ತರ್ಕಶಾಸ್ತ್ರ ಎಂದು ಇಂದು ನಾವು ಏನನ್ನು ಕರೆಯುತ್ತೇವೋ, ಅರಿಸ್ಟಾಟಲ್ ಆಗಿದ್ದರೆ ಸ್ವತಃ ಅದಕ್ಕೆ "ವಿಶ್ಲೇಷಣ ಶಾಸ್ತ್ರ" ಎಂದು ಹೆಸರಿಟ್ಟಿರುತ್ತಿದ್ದ. "ತರ್ಕಶಾಸ್ತ್ರ" ಎಂಬ ಪದವನ್ನು ಆತ ತತ್ತ್ವಜಿಜ್ಞಾಸೆಗಳು ಎಂಬುದನ್ನು ಅರ್ಥೈಸಲು ಮೀಸಲಾಗಿಟ್ಟಿದ್ದ. ಅರಿಸ್ಟಾಟಲ್ನ ಕೃತಿಯ ಬಹುಭಾಗವು ಪ್ರಾಯಶಃ ತನ್ನ ಮೂಲ ಸ್ವರೂಪದಲ್ಲಿ ಇಲ್ಲ. ಏಕೆಂದರೆ ವಿದ್ಯಾರ್ಥಿಗಳಿಂದ ಮತ್ತು ನಂತರ ಉಪನ್ಯಾಸಕರಿಂದ ಅದು ಪರಿಷ್ಕರಣೆಗೆ ಒಳಗಾಗಿರುವ ಸಾಧ್ಯತೆಗಳಿವೆ. ಮೊದಲನೇ ಶತಮಾನದ ADಯ ಸುಮಾರಿನಲ್ಲಿ ಅರಿಸ್ಟಾಟಲ್ನ ತಾರ್ಕಿಕ ಕೃತಿಗಳು ಆರು ಪುಸ್ತಕಗಳಾಗಿ ಸಂಕಲಿಸಲ್ಪಟ್ಟವು. ಅವುಗಳೆಂದರೆ:
ಪುಸ್ತಕಗಳ (ಅಥವಾ ಅವು ಯಾವುದರಿಂದ ರೂಪಿಸಲ್ಪಟ್ಟವೋ ಆ ಬೋಧನೆಗಳ) ಅನುಕ್ರಮವು ನಿಶ್ಚಿತವಾಗಿಲ್ಲವಾದರೂ, ಅರಿಸ್ಟಾಟಲ್ನ ಬರಹಗಳ ವಿಶ್ಲೇಷಣೆಯಿಂದ ಈ ಪಟ್ಟಿಯನ್ನು ರೂಪಿಸಲಾಯಿತು. ಇದು ಮೂಲದಿಂದ ಹೊರಡುತ್ತದೆ, ಅಂದರೆ, ಕ್ಯಾಟಿಗರೀಸ್ ನಲ್ಲಿನ ಸರಳ ಪದಗಳ ವಿಶ್ಲೇಷಣೆ, ಆನ್ ಇಂಟರ್ಪ್ರಿಟೇಷನ್ ನಲ್ಲಿನ ಪ್ರತಿಪಾದನೆಗಳು ಹಾಗೂ ಅವುಗಳ ಪ್ರಾಥಮಿಕ ಸಂಬಂಧಗಳ ವಿಶ್ಲೇಷಣೆಯಿಂದ ಹೊರಟು ತರ್ಕವಾಕ್ಯಗಳು (ಅನಲಿಟಿಕ್ಸ್ ನಲ್ಲಿ) ಮತ್ತು ತತ್ತ್ವಜಿಜ್ಞಾಸೆಗಳು (ಟಾಪಿಕ್ಸ್ ಮತ್ತು ಸಾಫಿಸ್ಟಿಕಲ್ ರೆಫ್ಯುಟೇಷನ್ಸ್ ನಲ್ಲಿ) ಇವೇ ಮೊದಲಾದ ಅತಿ ಸಂಕೀರ್ಣ ಸ್ವರೂಪಗಳ ಅಧ್ಯಯನದ ಕಡೆಗೆ ಇದು ಸಾಗುತ್ತದೆ. ಮೊದಲ ಮೂರು ಪ್ರಕರಣ ಗ್ರಂಥಗಳು ಸ್ಟ್ರಿಕ್ಟೊ ಸೆನ್ಸು ಎಂಬ ತಾರ್ಕಿಕ ಸಿದ್ಧಾಂತದ ಮುಖ್ಯಸಾರವನ್ನು ರೂಪಿಸುತ್ತವೆ: ಇದು ತರ್ಕಶಾಸ್ತ್ರದ ಭಾಷೆಯ ವ್ಯಾಕರಣ ಮತ್ತು ತಾರ್ಕಿಕ ವಿಧಾನದ ಯಥಾರ್ಥ ನಿಯಮಗಳನ್ನು ಒಳಗೊಂಡಿದೆ. ಆರ್ಗನಾನ್ ನಲ್ಲಿ ಕಂಡುಬರದ, ತರ್ಕಶಾಸ್ತ್ರಕ್ಕೆ ಸಂಬಂಧಿಸಿದ ಅರಿಸ್ಟಾಟಲ್ನ ಒಂದು ಸಂಪುಟವಿದೆ. ಅದೇ ಮೆಟಾಫಿಸಿಕ್ಸ್ ನ ನಾಲ್ಕನೇ ಪುಸ್ತಕ.
ತನ್ನ ಗುರು ಪ್ಲೇಟೋನಂತೆಯೇ, ಅರಿಸ್ಟಾಟಲ್ನ ತತ್ತ್ವಶಾಸ್ತ್ರವೂ ಸಾರ್ವತ್ರಿಕ ಕಲ್ಪನೆಯ ಕಡೆಗೆ ಗುರಿಯಿಟ್ಟುಕೊಂಡಿದೆ. ಆದರೂ, ನಿರ್ದಿಷ್ಟ ವಸ್ತುಗಳಲ್ಲಿ ಸಾರ್ವತ್ರಿಕ ಕಲ್ಪನೆಯನ್ನು ಕಂಡುಕೊಂಡ ಅರಿಸ್ಟಾಟಲ್ ಅದನ್ನು ವಸ್ತುಗಳ ಪರಮಸತ್ವ ಎಂದು ಕರೆದ. ಆದರೆ, ಪ್ಲೇಟೋನ ಚಿಂತನೆ ಇದಕ್ಕಿಂತ ಭಿನ್ನವಾಗಿತ್ತು. ನಿರ್ದಿಷ್ಟ ವಸ್ತುಗಳಿಗೆ ಹೊರತಾಗಿ ಸಾರ್ವತ್ರಿಕ ಕಲ್ಪನೆಯ ಅಸ್ತಿತ್ವವಿದೆ, ಮತ್ತು ಇದು ಅವುಗಳೊಂದಿಗೆ ಅವುಗಳ ಮೂಲಮಾದರಿ ಅಥವಾ ಮೇಲ್ಪಂಕ್ತಿಯ ಸ್ವರೂಪದಲ್ಲಿ ಸಂಬಂಧಹೊಂದಿರುತ್ತವೆ ಎಂಬುದನ್ನು ಪ್ಲೇಟೋ ಕಂಡುಕೊಂಡಿದ್ದಾನೆ. ಆದ್ದರಿಂದ, ನಿರ್ದಿಷ್ಟ ವಿದ್ಯಮಾನದ ಅಧ್ಯಯನದಿಂದ ಪರಮಸತ್ವಗಳ ಜ್ಞಾನವನ್ನು ಪಡೆಯುವುದಕ್ಕಾಗಿರುವ ಆರೋಹಣ ಅಥವಾ ಸೋಪಾನವಾಗಿ ಅರಿಸ್ಟಾಟಲ್ಗೆ ತತ್ತ್ವಶಾಸ್ತ್ರದ ವಿಧಾನವು ಕಂಡಿದ್ದರೆ, ಸಾರ್ವತ್ರಿಕ ಕಲ್ಪನೆಯ ಸ್ವರೂಪಗಳ (ಅಥವಾ ಪರಿಕಲ್ಪನೆಗಳ) ಅರಿವಿನಿಂದ ಇವುಗಳ ನಿರ್ದಿಷ್ಟ ಅನುಕರಣೆಗಳ ಚಿಂತನೆಯೊಂದರೆಡೆಗಿನ ಅವರೋಹಣವಾಗಿ ತತ್ತ್ವಶಾಸ್ತ್ರದ ವಿಧಾನವು ಪ್ಲೇಟೋಗೆ ಕಂಡಿದೆ. ಅರಿಸ್ಟಾಟಲ್ಗೆ, "ಸ್ವರೂಪ" ಎನ್ನುವುದು ವಿದ್ಯಮಾನದ ಬೇಷರತ್ತಾದ ಆಧಾರವಾಗಿಯೂ ಕಂಡಿದ್ದು, ಅದು ನಿರ್ದಿಷ್ಟ ವಸ್ತುವೊಂದರಲ್ಲಿ "ದೃಷ್ಟಾಂತೀಕರಿಸಲ್ಪಟ್ಟಿದೆ" ಅಥವಾ ನಿದರ್ಶನದ ಮೂಲಕ ನಿರೂಪಿಸಲ್ಪಟ್ಟಿದೆ (ಕೆಳಗೆ ನೀಡಿರುವ ಯುನಿವರ್ಸಲ್ಸ್ ಅಂಡ್ ಪರ್ಟಿಕ್ಯುಲರ್ಸ್ ನ್ನು ನೋಡಿ) ಒಂದು ನಿರ್ದಿಷ್ಟ ಅರ್ಥದಲ್ಲಿ ಹೇಳುವುದಾದರೆ, ಅರಿಸ್ಟಾಟಲ್ನ ವಿಧಾನವು ಆಧಾರವುಳ್ಳ ಮತ್ತು ಅನುಮಾನಾತ್ಮಕ ಸ್ವರೂಪಗಳೆರಡನ್ನೂ ಹೊಂದಿದ್ದರೆ, ಪ್ಲೇಟೋನ ವಿಧಾನವು ಅತ್ಯಾವಶ್ಯಕವಾಗಿ ಎ ಪ್ರೈಯರಿ ತತ್ತ್ವಗಳಿಂದ ಪಡೆದ ಅನುಮಾನಾತ್ಮಕ ಸ್ವರೂಪವನ್ನು ಹೊಂದಿದೆ. ಅರಿಸ್ಟಾಟಲ್ನ ಪರಿಭಾಷೆಯಲ್ಲಿ, "ಭೌತಿಕ ತತ್ತ್ವಶಾಸ್ತ್ರ" ಎಂಬುದು ತತ್ತ್ವಶಾಸ್ತ್ರದ ಒಂದು ಶಾಖೆಯಾಗಿದ್ದು, ಭೌತಿಕ ಪ್ರಪಂಚದ ವಿದ್ಯಮಾನವನ್ನು ಅದು ಅವಲೋಕಿಸುತ್ತದೆ, ಮತ್ತು ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಇತರ ನಿಸರ್ಗ ವಿಜ್ಞಾನಗಳೆಂದು ಇಂದು ಕರೆಯಲ್ಪಡುತ್ತಿರುವ ಅನೇಕ ಕ್ಷೇತ್ರಗಳನ್ನು ಅದು ಒಳಗೊಂಡಿದೆ. ಆಧುನಿಕ ಕಾಲದಲ್ಲಿ, ತತ್ತ್ವಶಾಸ್ತ್ರ ದ ವ್ಯಾಪ್ತಿಯು ನೀತಿಶಾಸ್ತ್ರ ಮತ್ತು ತತ್ತ್ವಮೀಮಾಂಸೆಯಂಥ ಅತಿ ಸಾರ್ವತ್ರಿಕ ಅಥವಾ ಅಮೂರ್ತ ವಿಚಾರಣೆಗಳಿಗೆ ಸೀಮಿತವಾಗಿದ್ದು, ಅವುಗಳಲ್ಲಿ ತರ್ಕಶಾಸ್ತ್ರವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂದಿನ ತತ್ತ್ವಶಾಸ್ತ್ರವು ವೈಜ್ಞಾನಿಕ ವಿಧಾನದ ಮೂಲಕ ಭೌತಿಕ ಪ್ರಪಂಚದ ಅನುಭವಾತ್ಮಕ ಅಧ್ಯಯನವನ್ನು ಹೊರಗಿಡುವ ಪ್ರವೃತ್ತಿಯನ್ನು ಹೊಂದಿದೆ. ಇದಕ್ಕೆ ಪ್ರತಿಯಾಗಿ, ಅರಿಸ್ಟಾಟಲ್ನ ತತ್ವಶಾಸ್ತ್ರದ ಸಾಹಸಗಳು ಬೌದ್ಧಿಕ ವಿಚಾರಣೆಯ ಎಲ್ಲಾ ಮುಖಗಳನ್ನೂ ವಸ್ತುತಃ ಸುತ್ತುವರಿದಿವೆ. ಪ್ರಪಂಚದ ವಿಶಾಲಾರ್ಥದಲ್ಲಿ, ತಾರ್ಕಿಕ ವಿಧಾನದೊಂದಿಗೆ ಸಮವ್ಯಾಪಕವಾಗಿರುವಂತೆ ತತ್ತ್ವಶಾಸ್ತ್ರವನ್ನು ರೂಪಿಸುವ ಅರಿಸ್ಟಾಟಲ್, ಅದನ್ನು "ವಿಜ್ಞಾನ" ಎಂಬಂತೆಯೂ ವಿವರಿಸುತ್ತಾನೆ. ಆದರೂ, ಆತನ ವಿಜ್ಞಾನ ಎಂಬ ಪದದ ಬಳಕೆಯು, "ವೈಜ್ಞಾನಿಕ ವಿಧಾನ" ಎಂಬ ಪದಗುಚ್ಛದಿಂದ ಆವರಿಸಲ್ಪಟ್ಟಿರುವ ಅರ್ಥಕ್ಕಿಂತ ಬೇರೆಯದೇ ಆದ ಅರ್ಥವನ್ನು ಹೊರುತ್ತದೆ ಎಂಬುದನ್ನು ಗಮನಿಸಬೇಕು. ಅರಿಸ್ಟಾಟಲ್ನಿಗೆ, "ಎಲ್ಲಾ ವಿಜ್ಞಾನವೂ (ಡಯನೋಯ ) ಒಂದೋ ಕಾರ್ಯಸಾಧ್ಯವಾದುದಾಗಿರಬೇಕು, ಛಂದೋಬದ್ಧವಾಗಿರಬೇಕು ಇಲ್ಲವೇ ಸೈದ್ಧಾಂತಿಕವಾಗಿರಬೇಕು" (ಮೆಟಾಫಿಸಿಕ್ಸ್ 1025ಬಿ25). ಅವನ ಪ್ರಕಾರ ಕಾರ್ಯಸಾಧ್ಯ ವಿಜ್ಞಾನ ಎಂದರೆ, ನೀತಿಶಾಸ್ತ್ರ ಮತ್ತು ರಾಜಕಾರಣ ಎಂದರ್ಥ; ಛಂದೋಬದ್ಧ ವಿಜ್ಞಾನ ಎಂದರೆ, ಕವಿತೆ ಮತ್ತು ಇತರ ಲಲಿತಕಲೆಗಳ ಅಧ್ಯಯನ ಎಂದರ್ಥ; ಸೈದ್ಧಾಂತಿಕ ವಿಜ್ಞಾನ ಎಂದರೆ, ಭೌತಶಾಸ್ತ್ರ, ಗಣಿತಶಾಸ್ತ್ರ ಮತ್ತು ತತ್ತ್ವ ಮೀಮಾಂಸೆ ಎಂದರ್ಥ. ಒಂದು ವೇಳೆ ತರ್ಕಶಾಸ್ತ್ರವನ್ನು (ಅಥವಾ "ವಿಶ್ಲೇಷಣ ಶಾಸ್ತ್ರ"ವನ್ನು) ತತ್ತ್ವಶಾಸ್ತ್ರಕ್ಕೆ ಪೂರ್ವಭಾವಿಯಾಗಿರುವ ಅಧ್ಯಯನ ಎಂದು ಪರಿಗಣಿಸಿದರೆ, ಅರಿಸ್ಟಾಟಲ್ನ ತತ್ತ್ವಶಾಸ್ತ್ರದ ವರ್ಗೀಕರಣ ಅಥವಾ ವಿಭಾಗಗಳಲ್ಲಿ ಇವು ಸೇರುತ್ತವೆ: (1) ತರ್ಕಶಾಸ್ತ್ರ; (2) ತತ್ತ್ವಮೀಮಾಂಸೆ, ಭೌತಶಾಸ್ತ್ರ, ಗಣಿತಶಾಸ್ತ್ರಗಳನ್ನು ಒಳಗೊಂಡ ಸೈದ್ಧಾಂತಿಕ ತತ್ತ್ವಶಾಸ್ತ್ರ, (3) ಕಾರ್ಯಸಾಧ್ಯ ತತ್ತ್ವಶಾಸ್ತ್ರ ಮತ್ತು (4) ಛಂದೋಬದ್ಧ ತತ್ತ್ವಶಾಸ್ತ್ರ. ಅಥೆನ್ಸ್ನಲ್ಲಿ ಆತನ ಎರಡು ತಂಗುವಿಕೆಗಳ ನಡುವಿನ ಅವಧಿಯಲ್ಲಿ, ಅಂದರೆ ಪ್ಲೇಟೋನ ವಿದ್ಯಾಸಂಸ್ಥೆ ಮತ್ತು ಲೈಸಿಯಂನಲ್ಲಿನ ಅವನ ಕಾಲಘಟ್ಟಗಳಲ್ಲಿ, ಬಹುಪಾಲು ವೈಜ್ಞಾನಿಕ ಚಿಂತನೆ ಹಾಗೂ ಸಂಶೋಧನೆಯನ್ನು ಅರಿಸ್ಟಾಟಲ್ ನಡೆಸಿದ್ದು, ಈ ಕಾರಣದಿಂದಾಗಿಯೇ ಆತ ಇಂದಿಗೂ ಹೆಸರಾಗಿದ್ದಾನೆ. ವಾಸ್ತವವಾಗಿ, ತನ್ನ ಜೀವನದ ಬಹುಪಾಲನ್ನು ನಿಸರ್ಗ ವಿಜ್ಞಾನದ ವಸ್ತುಗಳ ಅಧ್ಯಯನಕ್ಕೆ ಅರಿಸ್ಟಾಟಲ್ ಮೀಸಲಿಟ್ಟ. ಸಂಖ್ಯೆಗಳ ಸ್ವರೂಪದ ಕುರಿತಾದ ವೀಕ್ಷಣೆಗಳನ್ನು ಅರಿಸ್ಟಾಟಲ್ನ ತತ್ತ್ವಮೀಮಾಂಸೆಯು ಒಳಗೊಂಡಿದ್ದರೂ, ಆತ ಗಣಿತಶಾಸ್ತ್ರಕ್ಕೆ ಯಾವುದೇ ಮೂಲ ಕೊಡುಗೆಗಳನ್ನು ಕೊಡಲಿಲ್ಲ. ಆದಾಗ್ಯೂ, ಸಸ್ಯಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ, ಖಗೋಳ ವಿಜ್ಞಾನ, ರಸಾಯನ ಶಾಸ್ತ್ರ, ಪವನಶಾಸ್ತ್ರ, ಮತ್ತು ಹಲವಾರು ಇತರ ವಿಜ್ಞಾನಗಳನ್ನು ಒಳಗೊಂಡಂತೆ ನಿಸರ್ಗ ವಿಜ್ಞಾನಗಳಲ್ಲಿ ಆತ ಮೂಲ ಸಂಶೋಧನೆಯನ್ನು ನಡೆಸಿದ. ವಿಜ್ಞಾನ ವಿಷಯದ ಕುರಿತಾದ ಅರಿಸ್ಟಾಟಲ್ನ ಬರಹಗಳು ಪರಿಮಾಣಾತ್ಮಕ ಸ್ವರೂಪಕ್ಕೆ ತದ್ವಿರುದ್ಧವಾಗಿ, ಹೆಚ್ಚಿನ ರೀತಿಯಲ್ಲಿ ಗುಣಾತ್ಮಕವಾಗಿವೆ. ಹದಿನಾರನೇ ಶತಮಾನದ ಆರಂಭದಲ್ಲಿ, ವಿಜ್ಞಾನಿಗಳು ಗಣಿತಶಾಸ್ತ್ರವನ್ನು ಭೌತಿಕ ವಿಜ್ಞಾನಗಳಿಗೆ ಅನ್ವಯಿಸಲು ಪ್ರಾರಂಭಿಸಿದರು, ಮತ್ತು ಈ ಕ್ಷೇತ್ರದಲ್ಲಿನ ಅರಿಸ್ಟಾಟಲ್ನ ಕಾರ್ಯವು ತೃಪ್ತಿಕರವಾಗಿಲ್ಲ ಎಂದು ಪರಿಗಣಿಸಲಾಯಿತು. ದ್ರವ್ಯರಾಶಿ, ವೇಗ, ಬಲ ಮತ್ತು ತಾಪಮಾನದಂತಹ ಪರಿಕಲ್ಪನೆಗಳು ಇಲ್ಲದಿದ್ದುದೇ ಆತನ ವೈಫಲ್ಯಕ್ಕೆ ಪ್ರಮುಖ ಕಾರಣಗಳಾಗಿದ್ದವು. ಚಲನೆಯ ಗತಿ ಮತ್ತು ತಾಪಮಾನದ ಕುರಿತು ಅವನಿಗೊಂದು ಕಲ್ಪನಾಶಕ್ತಿಯಿದ್ದರೂ ಅವುಗಳ ಪರಿಮಾಣಾತ್ಮಕ ಗ್ರಹಿಕೆ ಅವನಿಗಿರಲಿಲ್ಲ. ಗಡಿಯಾರಗಳು ಮತ್ತು ಉಷ್ಣತಾಮಾಪಕಗಳಂಥ ಮೂಲ ಪ್ರಾಯೋಗಿಕ ಉಪಕರಣಗಳೇ ಅವನ ಬಳಿ ಇರದಿದ್ದುದು ಇದಕ್ಕೆ ಭಾಗಶಃ ಕಾರಣವಾಗಿತ್ತು. ಅವನ ಬರಹಗಳು ಅನೇಕ ವೈಜ್ಞಾನಿಕ ವೀಕ್ಷಣೆಗಳ ಒಂದು ವಿವರಣೆಯಾಗಿದ್ದು, ಅದು ಅಕಾಲಪ್ರೌಢಿಮೆಯ ನಿಖರತೆ ಮತ್ತು ಕುತೂಹಲಕಾರಿ ತಪ್ಪುಗಳ ಒಂದು ಮಿಶ್ರಣವಾಗಿದೆ. ಉದಾಹರಣೆಗೆ, ತನ್ನ ಹಿಸ್ಟರಿ ಆಫ್ ಅನಿಮಲ್ಸ್ ಕೃತಿಯಲ್ಲಿ, ಮಾನವ ಪುರುಷರು ಮಹಿಳೆಯರಿಗಿಂತ ಹೆಚ್ಚು ಹಲ್ಲುಗಳನ್ನು ಹೊಂದಿದ್ದಾರೆ ಎಂದು ಆತ ಸಮರ್ಥಿಸುತ್ತಾನೆ, ಮತ್ತು ಜನರೇಷನ್ ಆಫ್ ಅನಿಮಲ್ಸ್ ಕೃತಿಯಲ್ಲಿ, ಆಕಾರಗೆಟ್ಟ ಒಂದು ಪುರುಷನ ರೂಪವೇ ಮಹಿಳೆ ಎಂದು ಆತ ಹೇಳಿದ್ದಾನೆ. ಇದೇ ಧಾಟಿಯಲ್ಲಿ, ಭಾರವಾದ ವಸ್ತುವೊಂದು ಹಗುರವಾದ ವಸ್ತುವಿಗಿಂತ ಬೇಗನೇ ಬೀಳುತ್ತದೆ ಎಂಬ ಅರಿಸ್ಟಾಟಲ್ನ ಸಿದ್ಧಾಂತವು ಸರಿಯಲ್ಲ ಎಂಬುದನ್ನು ಜಾನ್ ಫಿಲಾಪೊನಸ್, ಮತ್ತು ನಂತರದಲ್ಲಿ ಗೆಲಿಲಿಯೋ ಸರಳವಾದ ಪ್ರಯೋಗಗಳ ಮೂಲಕ ತೋರಿಸಿದರು. ಮತ್ತೊಂದೆಡೆ, "ಸೂರ್ಯನ ಕಿರಣಗಳು ಭೂಮಿಯ ಮೇಲೆ ಬಿದ್ದು ಉಂಟಾದ ನೆರಳನ್ನು ಪಡೆದ ನಕ್ಷತ್ರಗಳಿಂದ ಕ್ಷೀರಪಥವು ರೂಪುಗೊಳ್ಳುತ್ತದೆ ಎಂಬ ಡೆಮೋಕ್ರೈಟಸ್ನ ಸಮರ್ಥನೆಯನ್ನು ಅರಿಸ್ಟಾಟಲ್ ಅಲ್ಲಗಳೆದ. ಅಂಗೀಕೃತವಾದ "ಪ್ರಸಕ್ತ ಖಗೋಳೀಯ ನಿದರ್ಶನಗಳು" ಹೇಳುವಂತೆ "ಸೂರ್ಯನ ಗಾತ್ರವು ಭೂಮಿಯ ಗಾತ್ರಕ್ಕಿಂತ ತುಂಬಾ ದೊಡ್ಡದಾಗಿದೆ ಮತ್ತು ಭೂಮಿಯಿಂದ ನಕ್ಷತ್ರಗಳಿಗಿರುವ ದೂರವು, ಸೂರ್ಯನಿಂದ ಇರುವ ದೂರಕ್ಕಿಂತ ಹೆಚ್ಚಿನದ್ದಾಗಿದೆ. ಹೀಗಿರುವಾಗ, ಸೂರ್ಯನು ಎಲ್ಲಾ ನಕ್ಷತ್ರಗಳ ಮೇಲೂ ಪ್ರಕಾಶಿಸುತ್ತಾನೆ ಮತ್ತು ಭೂಮಿಯು ಅವ್ಯಾವುದನ್ನೂ ತಡೆಹಿಡಿಯುವುದಿಲ್ಲ ಅಥವಾ ಮರೆಮಾಡುವುದಿಲ್ಲ" ಎಂಬ ಅಂಶವನ್ನು ಸೂಚಿಸುವ ಮೂಲಕ (ಇಂಥ ಒಂದು ತಾರ್ಕಿಕ ವಿಧಾನವು ದೀರ್ಘಕಾಲದವರೆಗೆ ತಳ್ಳಿಹಾಕಲ್ಪಡುವುದರ ಪರಿಮಿತಿಯಲ್ಲಿದ್ದರೂ ಸಹ, ಸರಿಯಾಗಿ) ಡೆಮೋಕ್ರೈಟಸ್ನ ಸಮರ್ಥನೆಯನ್ನು ಆತ ಅಲ್ಲಗಳೆದ. ಸರಳ ವೀಕ್ಷಣೆ ಮತ್ತು ಅತಿಯಾಗಿ-ಹಿಗ್ಗಿಸಿದ ತರ್ಕಶಕ್ತಿಯಿಂದ 'ಸಮಸ್ತ ಸೃಷ್ಟಿಯ ನಿಯಮಗಳನ್ನು' ರೂಪಿಸುವಾಗ, ಅರಿಸ್ಟಾಟಲ್ ಕೆಲವು ಕಡೆಗಳಲ್ಲಿ ತುಂಬಾ ಆಚೆಗೆ ಯೋಚಿಸುತ್ತಾನೆ. ಸಾಕಷ್ಟು ಪ್ರಮಾಣದ ವಾಸ್ತವಾಂಶಗಳಿಲ್ಲದ ಇಂಥ ಆಲೋಚನೆಗಳು ಪರಿಣಾಮಕಾರಿಯಾಗಿರುವುದಿಲ್ಲ ಎಂದು ಇಂದಿನ ವೈಜ್ಞಾನಿಕ ವಿಧಾನವು ಭಾವಿಸುತ್ತದೆ. ಒಬ್ಬರ ಕಲ್ಪಿತ ಸಿದ್ಧಾಂತದ ಸಮಂಜಸತೆ ಅಥವಾ ಸಿಂಧುತ್ವವನ್ನು ಸೂಕ್ಷ್ಮದೃಷ್ಟಿಯಿಂದ ನೋಡಲು, ಅರಿಸ್ಟಾಟಲ್ ತನ್ನ ನಿಯಮಗಳನ್ನು ಬೆಂಬಲಿಸಲು ಬಳಸಿದ್ದಕ್ಕಿಂತ ತುಂಬಾ ಹೆಚ್ಚಿನ ಕಟ್ಟುನಿಟ್ಟಿನ ಪ್ರಯೋಗ ಪರೀಕ್ಷೆಯ ಅಗತ್ಯವಿರುತ್ತದೆ ಎಂದೂ ಸಹ ಇಂದಿನ ವೈಜ್ಞಾನಿಕ ವಿಜ್ಞಾನವು ಭಾವಿಸುತ್ತದೆ. ಅರಿಸ್ಟಾಟಲ್ನಲ್ಲಿಯೂ ಒಂದಷ್ಟು ವೈಜ್ಞಾನಿಕ ಕುರುಡುದಾಣಗಳು ಅಥವಾ ಪೂರ್ವಗ್ರಹಗಳಿದ್ದವು. ಭೂಕೇಂದ್ರೀಯ ವಿಶ್ವವಿಜ್ಞಾನವೊಂದನ್ನು ಆತ ಆಧಾರವಾಗಿ ಗ್ರಹಿಸಿದ್ದು ಇದನ್ನು ಆತನ ಮೆಟಾಫಿಸಿಕ್ಸ್ ಕೃತಿಯ ಆಯ್ದ ಭಾಗಗಳಲ್ಲಿ ನಾವು ಸೂಕ್ಷ್ಮವಾಗಿ ಅರಿಯಬಹುದಾಗಿದೆ. ಈ ಪರಿಕಲ್ಪನೆಯು 1500ರ ದಶಕಗಳವರೆಗೂ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟಿತ್ತು. ಭೂಮಿಯೇ ಈ ವಿಶ್ವದ ಕೇಂದ್ರಬಿಂದು (ಭೂಕೇಂದ್ರೀಯ ತತ್ವ) ಎಂಬ ಪ್ರಬಲ ದೃಷ್ಟಿಕೋನವೇ 3ನೇ ಶತಮಾನದಿಂದ 1500ರ ದಶಕಗಳವರೆಗೂ ಚಾಲ್ತಿಯಲ್ಲಿತ್ತು. ಪ್ರಾಯಶಃ ಆತ, ನವೋದಯ ಯುಗದ ಅವಧಿಯ ಮತ್ತು ನಂತರದಲ್ಲಿನ ಐರೋಪ್ಯ ಚಿಂತಕರಿಂದ ಬಹುವಾಗಿ ಗೌರವಿಸಲ್ಪಡುತ್ತಿದ್ದ ದಾರ್ಶನಿಕನಾಗಿದ್ದರಿಂದ, ಈ ಚಿಂತಕರು ಅರಿಸ್ಟಾಟಲ್ನ ದೋಷಯುಕ್ತ ಪ್ರತಿಪಾದನೆಗಳನ್ನು ಅದಿರುವಂತೆಯೇ ಆಗಾಗ ಸ್ವೀಕರಿಸಿದ್ದು, ಅವು ವಿಜ್ಞಾನವನ್ನು ಈ ಯಗದಲ್ಲಿ ತಡೆದು ನಿಲ್ಲಿಸಿವೆ. ಆದರೂ, ಅನೇಕ ವೈಜ್ಞಾನಿಕ ಕ್ಷೇತ್ರಗಳಲ್ಲಿನ ಆತನ ಮಹಾನ್ ಸಾಧನೆಗಳನ್ನು ಅಥವಾ ಪ್ರಗತಿಗಳನ್ನು ಒಬ್ಬರು ಮರೆಯುವಷ್ಟರ ಮಟ್ಟಿಗೆ, ಅರಿಸ್ಟಾಟಲ್ನ ವೈಜ್ಞಾನಿಕ ನ್ಯೂನತೆಗಳು ಅವರನ್ನು ದಾರಿತಪ್ಪಿಸಬಾರದು. ಇದಕ್ಕೆ ನಿದರ್ಶನವಾಗಿ ಹೇಳುವುದಾದರೆ, ತರ್ಕಶಾಸ್ತ್ರವನ್ನು ಒಂದು ಔಪಚಾರಿಕ ವಿಜ್ಞಾನವಾಗಿ ಸಂಸ್ಥಾಪನೆ ಮಾಡಿದ ಆತ, ಎರಡು ಸಹಸ್ರವರ್ಷಗಳವರೆಗೂ ತೆಗೆದುಹಾಕಲಾಗದ ಬುನಾದಿಗಳನ್ನು ಜೀವಶಾಸ್ತ್ರಕ್ಕಾಗಿ ಸೃಷ್ಟಿಸಿದ್ದಾನೆ. ಎಲ್ಲಕ್ಕಿಂತ ಮಿಗಿಲಾಗಿ, ಬದಲಾವಣೆಗೊಳಗಾಗುವ ವಸ್ತುಗಳಿಂದ ಪ್ರಕೃತಿಯು ರೂಪಿಸಲ್ಪಟ್ಟಿದೆ ಎಂಬ ಮೂಲಭೂತ ಅಭಿಮತವನ್ನು ಆತ ಪರಿಚಯಿಸಿದ್ದು, ಇಂಥ ಬದಲಾವಣೆಗಳನ್ನು ಅಧ್ಯಯನ ಮಾಡುವುದರಿಂದ, ಆಧಾರವಾಗಿರುವ ಸ್ಥಿರ-ಸ್ವರೂಪಗಳ ಕುರಿತಾದ ಪ್ರಯೋಜನಕಾರಿ ಅರಿವು ಉಂಟಾಗುತ್ತದೆ ಎಂಬುದನ್ನೂ ಆತ ತಿಳಿಸಿದ್ದಾನೆ.
ನಾಲ್ಕು ಭೌಮಿಕ ಭೂತಗಳು ಅಥವಾ ಘಟಕಗಳ ಪೈಕಿ ಪ್ರತಿಯೊಂದಕ್ಕೂ ತನ್ನದೇ ಆದ ಸ್ವಾಭಾವಿಕ ಸ್ಥಾನವಿದೆ; ಬ್ರಹ್ಮಾಂಡದ ಕೇಂದ್ರಭಾಗದಲ್ಲಿ ಭೂಮಿ, ನಂತರ ನೀರು, ನಂತರ ಆಕಾಶ, ನಂತರ ಅಗ್ನಿ- ಹೀಗೆ ಅವುಗಳ ಸ್ಥಾನವಿದೆ. ಯಾವಾಗ ಅವು ತಮ್ಮ ಸ್ವಾಭಾವಿಕ ಸ್ಥಾನದಿಂದ ಆಚೆಯಿರುತ್ತವೋ ಯಾವುದೇ ಬಾಹ್ಯ ಕಾರಣವಿಲ್ಲದೆಯೇ ಅವು ಸ್ವಾಭಾವಿಕ ಚಲನೆಯನ್ನು ಹೊಂದಿದ್ದು, ಅದು ಆ ಸ್ಥಾನದ ಕಡೆಯೇ ಇರುತ್ತದೆ. ಹೀಗಾಗಿ ಕಾಯಗಳು ನೀರಿನಲ್ಲಿ ಮುಳುಗುತ್ತವೆ, ಗಾಳಿಯ ಗುಳ್ಳೆಗಳು ಮೇಲೇರುತ್ತವೆ, ಮಳೆ ಬೀಳುತ್ತದೆ, ಜ್ವಾಲೆಯು ಗಾಳಿಯಲ್ಲಿ ಮೇಲೇಳುತ್ತದೆ. ಆಕಾಶದ ಭೂತ ಅಥವಾ ಘಟಕವು ಅನುಗಾಲವೂ ವೃತ್ತಾಕಾರದ ಚಲನೆಯನ್ನು ಹೊಂದಿರುತ್ತದೆ.
ನಡತೆಗೆ ಎಲ್ಲಾ ರೀತಿಯಲ್ಲೂ ಕೊಡುಗೆ ನೀಡುವ ಇಚ್ಛಾಶಕ್ತಿ, ಅಗತ್ಯತೆ, ಪ್ರಚೋದನೆ ಅಥವಾ ಪ್ರೇರಣೆಗಳು, ವೈಚಾರಿಕ, ವಿಚಾರ ರಹಿತ, ನೈತಿಕ, ಮತ್ತು ಎಲ್ಲಾ ಉದ್ದೇಶಗಳಂಥ ಮನೋವೈಜ್ಞಾನಿಕ ಕಾರಣಗಳನ್ನು ಒಳಗೊಂಡಂತೆ, ಮಾನಸಿಕ ಕಾರ್ಯಕಾರಣಸಂಬಂಧದ ಆಧುನಿಕ ಪರಿಕಲ್ಪನೆಗಳನ್ನು ಇದು ಒಳಗೊಳ್ಳುತ್ತದೆ. ಕಠಿಣವಾದ ಕೆಲಸವು ದಾರ್ಢ್ಯತೆಯನ್ನು ಉಂಟುಮಾಡುವಂತೆ ಮತ್ತು ಇದರ ಹಿಮ್ಮುಖ ಸ್ಥಿತಿಯಂತೆ, ಪರಸ್ಪರ ಅನ್ಯೋನ್ಯವಾಗಿ ಉಂಟುಮಾಡುವುದರ ಮೂಲಕ, ವಸ್ತುಗಳು ಒಂದಕ್ಕೆ ಮತ್ತೊಂದರ ಕಾರಣಗಳಾಗಬಲ್ಲವಾಗಿರುತ್ತವೆ. ಇದು ಒಂದೇ ವಿಧಾನ ಅಥವಾ ಕಾರ್ಯದ ರೀತಿಯಲ್ಲಿ ಇರದೇ ಹೋದರೂ, ಒಂದು ಬದಲಾವಣೆಯ ಆರಂಭದಂತೆ ತೋರಿದರೆ, ಮತ್ತೊಂದು ಗುರಿಯಾಗಿ ತೋರುತ್ತದೆ. (ಈ ರೀತಿಯಾಗಿ, ಅನ್ಯೋನ್ಯ ಅಥವಾ ವೃತ್ತಾಕಾರದ ನಿಮಿತ್ತವಾದವನ್ನು ಪರಿಣಾಮದ ಮೇಲಿನ ಪರಸ್ಪರ ಅವಲಂಬನೆ ಅಥವಾ ಕಾರಣದ ಪ್ರಭಾವವಾಗಿ ಅರಿಸ್ಟಾಟಲ್ ಮೊದಲಿಗೆ ಸೂಚಿಸಿದ). ಎಲ್ಲಕ್ಕಿಂತ ಹೆಚ್ಚಾಗಿ, ಇದೇ ವಸ್ತು-ವಿಷಯವು ಪರಸ್ಪರ ವಿರುದ್ಧವಾದ ಪರಿಣಾಮಗಳ ಕಾರಣವಾಗಿರಲು ಸಾಧ್ಯವಿದೆ ಎಂಬುದನ್ನು ಅರಿಸ್ಟಾಟಲ್ ಸೂಚಿಸಿದ; ಇದರ ಹಾಜರಿ ಮತ್ತು ಗೈರುಹಾಜರಿಯು ವೈವಿಧ್ಯಮಯ ಫಲಿತಾಂಶಗಳಿಗೆ ಕಾರಣವಾಗಬಹುದು ಎಂಬುದು ಆತನ ಅಭಿಪ್ರಾಯವಾಗಿತ್ತು. ಸರಳವಾಗಿ ಹೇಳುವುದಾರೆ, ಇದು ಕೇವಲ ಒಂದು ಘಟನೆಯು ಸಂಭವಿಸುವುದಕ್ಕೆ ಕಾರಣವಾಗುವ ಗುರಿ ಅಥವಾ ಉದ್ದೇಶವಾಗಿರುತ್ತದೆ (ಹಾಗಂತ ಇದು ಒಂದು ಮಾನಸಿಕ ಗುರಿಯೇ ಆಗಿರಬೇಕು ಎಂದೇನೂ ಇಲ್ಲ). ನಮ್ಮ ಎರಡು ಆಟದ ಕಾಯಿಗಳನ್ನು ಪರಿಗಣಿಸುವುದಾದರೆ, ಆ ಕಾಯಿಗಳು ಸ್ವತಃ ತಮಗೆ ತಾವೇ ಹೊಡೆದುಕೊಳ್ಳುವುದು ಸಾಧ್ಯವಿಲ್ಲವಾದ್ದರಿಂದ, ಯಾರಾದರೊಬ್ಬರು ಉದ್ದೇಶಪೂರ್ವಕವಾಗಿ ಒಂದರ ಮೇಲೊಂದನ್ನು ಹೊಡೆದು ಅವುಗಳನ್ನು ಉರುಳಿಸಬೇಕಾಗುತ್ತದೆ. ಎರಡು ಬಗೆಯ ಕಾರ್ಯಕಾರಣ ಸಂಬಂಧವನ್ನು ಅರಿಸ್ಟಾಟಲ್ ಸೂಚಿಸಿದ್ದಾನೆ: ಸೂಕ್ತ (ಮುಂಚಿನ) ಕಾರ್ಯಕಾರಣ ಸಂಬಂಧ ಮತ್ತು ಆಕಸ್ಮಿಕವಾದ (ಅವಕಾಶದ) ಕಾರ್ಯಕಾರಣ ಸಂಬಂಧ. ಸೂಕ್ತ ಮತ್ತು ಆಕಸ್ಮಿಕವೇ ಮೊದಲಾದ ಎಲ್ಲಾ ಕಾರಣಗಳನ್ನು ಸಂಭವನೀಯ ಅಥವಾ ವಾಸ್ತವವಾದ, ನಿರ್ದಿಷ್ಟವಾದ ಅಥವಾ ಸರ್ವೇಸಾಮಾನ್ಯವಾದ ಕಾರಣಗಳಂತೆ ಪರಿಗಣಿಸಬಹುದು. ಇದೇ ಪರಿಭಾಷೆಯು ಕಾರಣಗಳ ಪರಿಣಾಮಗಳಿಗೂ ಅನ್ವಯಿಸುತ್ತದೆ. ಹೀಗಾಗಿ, ಸವೇಸಾಮಾನ್ಯವಾದ ಪರಿಣಾಮಗಳಿಗೆ ಸರ್ವೇಸಾಮಾನ್ಯವಾದ ಕಾರಣಗಳನ್ನು, ನಿರ್ದಿಷ್ಟವಾದ ಪರಿಣಾಮಗಳಿಗೆ ನಿರ್ದಿಷ್ಟವಾದ ಕಾರಣಗಳನ್ನು, ವಾಸ್ತವವಾದ ಪರಿಣಾಮಗಳಿಗೆ ಕಾರ್ಯನಿರ್ವಹಣೆಯಲ್ಲಿರುವ ಕಾರಣಗಳನ್ನು ಬೊಟ್ಟುಮಾಡಿ ತೋರಿಸಲಾಗುತ್ತದೆ. ಕಾರಣ ಮತ್ತು ಪರಿಣಾಮದ ನಡುವೆ ಅಗತ್ಯವಾಗಿ ಒಂದು ಅಲ್ಪಕಾಲಿಕ ಸಂಬಂಧ ಇರಬೇಕು ಎಂದೇನೂ ನಿಮಿತ್ತವಾದವು ಸೂಚಿಸುವುದಿಲ್ಲ. ನಿಮಿತ್ತವಾದದ ಮುಂದಿನ ಎಲ್ಲಾ ಕ್ರಮಬದ್ಧ ತನಿಖೆಗಳು ಅನುಕ್ರಮದ ಕಾರಣಗಳ ಮೇಲೆ ಪ್ರಿಯವಾದ ಶ್ರೇಣಿವ್ಯವಸ್ಥೆಗಳ ಹೇರುವಿಕೆಯನ್ನು ಒಳಗೊಳ್ಳುತ್ತವೆ. ಅದು ಅಂತಿಮ > ಸಮರ್ಥ > ಭೌತಿಕ > ಔಪಚಾರಿಕ (ಥಾಮಸ್ ಆಕ್ವಿನಾಸ್) ಈ ಕ್ರಮದಂತೆ ಇರುತ್ತದೆ, ಅಥವಾ ಎಲ್ಲಾ ಕಾರಣತ್ವವನ್ನು ಭೌತಿಕ ಮತ್ತು ಸಮರ್ಥ ಕಾರಣಗಳಿಗೆ ಅಥವಾ ಸಮರ್ಥ ಕಾರಣತ್ವಕ್ಕೆ ಸೀಮಿತಗೊಳಿಸುವುದು (ನಿಯಂತ್ರಣವಾದದ ಅಥವಾ ಆಕಸ್ಮಿಕವಾದದ) ಅಥವಾ ಕೇವಲ ನೈಸರ್ಗಿಕ ವಿದ್ಯಮಾನದ (ಏತಕ್ಕಾಗಿ ಮತ್ತು ಯಾವಕಾರಣದಿಂದ ಎಂಬ ಪ್ರಶ್ನೆಗಳಿಗೆ ವಿವರಣೆ ನೀಡುವುದಕ್ಕೆ ಬದಲಿಗೆ, ಘಟನೆಗಳು ಹೇಗೆ ಸಂಭವಿಸಿತು ಎಂಬುದನ್ನು ನಿಸರ್ಗ ವಿಜ್ಞಾನವು ವಿವರಿಸುತ್ತಿರುವುದು) ಅನುಕ್ರಮಗಳು ಹಾಗೂ ಪರಸ್ಪರ ಸಂಬಂಧಗಳನ್ನು ಕ್ರಮಬದ್ಧಗೊಳಿಸುವುದಕ್ಕಾಗಿ ಇರುತ್ತವೆ.
ತನ್ನ ಸಮಕಾಲೀನರಾದ ಇತರ ದಾರ್ಶನಿಕರಿಗೆ ಹೋಲಿಸಿದಾಗ, ಕೆಲವೊಂದು ದೃಗ್ವಿಜ್ಞಾನ ಪರಿಕಲ್ಪನೆಗಳ ಕುರಿತಾಗಿ ಅರಿಸ್ಟಾಟಲ್ ಹೆಚ್ಚು ನಿಖರವಾದ ಸಿದ್ಧಾಂತಗಳನ್ನು ಮಂಡಿಸಿದ್ದಾನೆ. ಒಂದು ಅಸ್ಪಷ್ಟ ಚಿತ್ರಗ್ರಾಹಿಯ (ಕ್ಯಾಮರಾದ) ಕುರಿತಾದ ಬಹಳ ಮುಂಚಿನ ಬರಹರೂಪದ ಸಾಕ್ಷ್ಯವನ್ನು, ಪ್ರಾಬ್ಲಮೇಟ ಎಂಬ ಕೃತಿಯಲ್ಲಿ ನಮೂದಾಗಿರುವ 350 BCಯಲ್ಲಿನ ಇಂಥದೊಂದು ಉಪಕರಣದ ಕುರಿತಾದ ಅರಿಸ್ಟಾಟಲ್ನ ಸಾಕ್ಷ್ಯಸಂಗ್ರಹದಲ್ಲಿ ಕಾಣಬಹುದು. ಅರಿಸ್ಟಾಟಲ್ನ ಈ ಉಪಕರಣವು ಒಂದು ಕತ್ತಲ ಕೋಶವನ್ನು ಒಳಗೊಂಡಿದ್ದು, ಸೂರ್ಯನ ಬೆಳಕು ತೂರಿಬರಲು ಅವಕಾಶ ಮಾಡಿಕೊಡುವುದಕ್ಕಾಗಿರುವ ಒಂದು ಪುಟ್ಟ ಏಕರಂಧ್ರ, ಅಥವಾ ಬೆಳಕುಕಿಂಡಿಯನ್ನು ಅದು ಹೊಂದಿತ್ತು. ಸೂರ್ಯನ ವೀಕ್ಷಣೆಗಳನ್ನು ಮಾಡಲು ಅರಿಸ್ಟಾಟಲ್ ಈ ಸಾಧನವನ್ನು ಬಳಸುತ್ತಿದ್ದ. ರಂಧ್ರದ ಆಕಾರವೇನೇ ಇರಲಿ, ಒಂದು ದುಂಡನೆಯ ವಸ್ತುವಿನಂತೆಯೇ ಸೂರ್ಯನ ಬಿಂಬವು ನಿಖರವಾಗಿ ಮೂಡುತ್ತಿದ್ದುದನ್ನು ಆತ ಗಮನಿಸಿದ. ಆಧುನಿಕ ಕ್ಯಾಮರಗಳಲ್ಲಿ ಇದು ಸರಂಧ್ರ ಫಲಕಕ್ಕೆ (ಬೆಳಕಿಗೆ ಒಡ್ಡುವ ರಂಧ್ರವನ್ನು ಚಿಕ್ಕದಾಗಿ ಅಥವಾ ದೊಡ್ಡದಾಗಿ ಮಾಡುವ ಸಾಧನ- ಡಯಾಫ್ರ್ಯಾಮ್) ಹೋಲುತ್ತದೆ. ಪುಟ್ಟ ರಂಧ್ರ ಮತ್ತು ಬಿಂಬವು ಮೂಡುವ ಮೇಲ್ಮೈಯ ನಡುವಿನ ಅಂತರವನ್ನು ಹೆಚ್ಚಿಸಿದಾಗ, ಬಿಂಬವು ವರ್ಧಿಸುವುದರ ಕುರಿತಾದ ವೀಕ್ಷಣೆಯನ್ನೂ ಅರಿಸ್ಟಾಟಲ್ ಮಾಡಿದ.
ಸ್ವಯಂಪ್ರೇರಿತ ಕ್ರಿಯೆ ಮತ್ತು ಅವಕಾಶಗಳು, ಪರಿಣಾಮಗಳ ಕಾರಣಗಳಾಗಿವೆ. ಆಕಸ್ಮಿಕ ಘಟನೆಗಳ ಪ್ರಪಂಚದಲ್ಲಿ ಒಂದು ಪ್ರಾಸಂಗಿಕ ಕಾರಣವಾಗಿ ಅವಕಾಶದ ಅಸ್ತಿತ್ವವಿರುತ್ತದೆ. ಇದು "ಯಾವುದು ಸ್ವಯಂಪ್ರೇರಿತವೋ ಅದರಿಂದ" ಬಂದುದಾಗಿದೆ (ಆದರೆ, ಯಾವುದು ಸ್ವಯಂಪ್ರೇರಿತವೋ ಅದು ಅವಕಾಶದಿಂದ ಬರುವುದಿಲ್ಲ ಎಂಬುದನ್ನು ಗಮನಿಸಬೇಕು). ಅರಿಸ್ಟಾಟಲ್ನ ಪರಿಕಲ್ಪನೆಯ "ಅವಕಾಶ"ವನ್ನು ಇನ್ನೂ ಉತ್ತಮರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕೆಂದರೆ, "ಕಾಕತಾಳೀಯತೆ" ಅಥವಾ ಸಹಘಟನೆಯ ಕುರಿತು ಯೋಚಿಸುವುದು ಅಗತ್ಯ: ಒಂದು ವೇಳೆ ವ್ಯಕ್ತಿಯೋರ್ವನು ಒಂದು ವಿಷಯ ಹೀಗೆ ನಡೆಯಬೇಕು ಎಂಬ ಆಶಯದೊಂದಿಗೆ ಉದ್ದೇಶವನ್ನಿಟ್ಟುಕೊಂಡಿದ್ದರೂ, ಮತ್ತೊಂದು ವಿಷಯವು (ಆ ರೀತಿಯ ಉದ್ದೇಶ ಹೊಂದಿಲ್ಲದ) ಸಂಭವಿಸಿದಾಗ, ಅಪ್ರಯತ್ನವಾಗಿ ಅಥವಾ ಅನಿರೀಕ್ಷಿತವಾಗಿ ಏನೋ ಒಂದು ಸಂಗತಿಯು ಸಂಭವಿಸುತ್ತದೆ. ಉದಾಹರಣೆಗೆ: ಓರ್ವ ವ್ಯಕ್ತಿ ದೇಣಿಗೆಗಳನ್ನು ಬಯಸುತ್ತಾನೆ. ಗಣನೀಯ ಮೊತ್ತದ ಹಣವನ್ನು ದಾನಮಾಡಲು ಒಪ್ಪುವ ಮತ್ತೋರ್ವ ವ್ಯಕ್ತಿ ಆ ವ್ಯಕ್ತಿಗೆ ಸಿಗಬಹುದು. ದೇಣಿಗೆಗಳನ್ನು ಬಯಸುತ್ತಿರುವ ವ್ಯಕ್ತಿಯು ಒಂದು ವೇಳೆ ದೇಣಿಗೆ ನೀಡುತ್ತಿರುವ ವ್ಯಕ್ತಿಯನ್ನು ಭೇಟಿ ಮಾಡಿದ್ದರೆ ಮತ್ತು ಆ ಭೇಟಿಯು ದೇಣಿಗೆಗಳನ್ನು ಸಂಗ್ರಹಿಸುವ ಉದ್ದೇಶಕ್ಕೆ ಬದಲಾಗಿ ಮತ್ತೊಂದು ಉದ್ದೇಶವನ್ನು ಹೊಂದಿದ್ದರೆ, ಅಂಥ ಸಂದರ್ಭದಲ್ಲಿ ಆ ನಿರ್ದಿಷ್ಟ ದಾನಿಯಿಂದ ದೇಣಿಗೆಯ ಸಂಗ್ರಹಿಸುವಿಕೆಯನ್ನು ಅರಿಸ್ಟಾಟಲ್ ಅವಕಾಶದ ಪರಿಣಾಮ ಎಂದು ಕರೆಯುತ್ತಾನೆ. ಏನಾದರೊಂದು ಘಟನೆಯು ಅಕಸ್ಮಾತ್ತಾಗಿ ಅಥವಾ ಅನಿರೀಕ್ಷಿತವಾಗಿ ಸಂಭವಿಸಿದರೆ ಅದು ಒಂದು ಅಸಾಮಾನ್ಯ ಅಥವಾ ರೂಢಿಯಲ್ಲದ ಘಟನೆಯಾಗಿರಲೇಬೇಕು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಎಲ್ಲ ಸಮಯದಲ್ಲಿ ಅಥವಾ ಬಹುತೇಕ ಸಮಯದಲ್ಲಿ ಯಾವುದೋ ಒಂದು ಘಟನೆಯು ಸಂಭವಿಸಿದರೆ, ಅದು ಅಕಸ್ಮಾತ್ತಾಗಿ ಸಂಭವಿಸಿತು ಎಂದು ನಾವು ಹೇಳಲಾಗುವುದಿಲ್ಲ. ಅವಕಾಶದ ಒಂದು ಹೆಚ್ಚು ವಿಶಿಷ್ಟವಾದ ಬಗೆಯೂ ಇದ್ದು, ಅರಿಸ್ಟಾಟಲ್ ಅದನ್ನು "ಅದೃಷ್ಟ" ಎಂದು ಕರೆಯುತ್ತಾನೆ. ಆದರೆ, ಇದು ನೈತಿಕ ಕ್ರಿಯೆಗಳ ಕ್ಷೇತ್ರದಲ್ಲಿರುವುದರಿಂದ ಕೇವಲ ಮನುಷ್ಯರಿಗೆ ಮಾತ್ರವೇ ಅನ್ವಯಿಸುತ್ತದೆ. ಅರಿಸ್ಟಾಟಲ್ನ ಪ್ರಕಾರ, ಅದೃಷ್ಟವು ಆಯ್ಕೆಯನ್ನು ಒಳಗೊಳ್ಳಬೇಕು (ಈ ಕಾರಣದಿಂದ ವಿವೇಚನೆಯೂ ಇರಬೇಕು), ಮತ್ತು ಮನುಷ್ಯರು ಮಾತ್ರವೇ ವಿವೇಚನೆ ಮತ್ತು ಆಯ್ಕೆಯ ಗುಣಗಳನ್ನು ವ್ಯಕ್ತಪಡಿಸಬಲ್ಲರು. "ಕ್ರಿಯೆಯನ್ನು ಯಾವುದು ನಡೆಸಲಾರದೋ ಅದು ಅಕಸ್ಮಾತ್ತಾಗಿ ಯಾವುದನ್ನೂ ಮಾಡಲಾರದು".
ತತ್ತ್ವಮೀಮಾಂಸೆಯನ್ನು ಅರಿಸ್ಟಾಟಲ್ ಹೀಗೆ ವ್ಯಾಖ್ಯಾನಿಸುತ್ತಾನೆ: ಅಮೂರ್ತವಾದ ವಸ್ತು-ವಿಷಯದ ಬಗೆಗಿನ ಅರಿವು, ಅಥವಾ "ಅಮೂರ್ತೀಕರಣದ ಉನ್ನತ ಮಟ್ಟದಲ್ಲಿರುವುದು." ತತ್ತ್ವಮೀಮಾಂಸೆಯನ್ನು ಆತ "ಮೊದಲ ತತ್ತ್ವಶಾಸ್ತ್ರ", ಮತ್ತು "ಮತಧರ್ಮ ಶಾಸ್ತ್ರದ ವಿಜ್ಞಾನ" ಎಂಬುದಾಗಿಯೂ ಉಲ್ಲೇಖಿಸುತ್ತಾನೆ.
ವಸ್ತು ಮತ್ತು ಸಾರದ (ಔಸಿಯಾ ) ಪರಿಕಲ್ಪನೆಯನ್ನು ತನ್ನ ಮೆಟಾಫಿಸಿಕ್ಸ್ ನ VIIನೇ ಪುಸ್ತಕದಲ್ಲಿ ಅರಿಸ್ಟಾಟಲ್ ಅವಲೋಕಿಸುತ್ತಾನೆ, ಮತ್ತು ಒಂದು ನಿರ್ದಿಷ್ಟವಾದ ವಸ್ತುವು, ಭೌತದ್ರವ್ಯ ಹಾಗೂ ಸ್ವರೂಪದ ಒಂದು ಸಂಯೋಜನೆ ಎಂಬ ತೀರ್ಮಾನಕ್ಕೆ ಬರುತ್ತಾನೆ. VIIIನೇ ಪುಸ್ತಕಕ್ಕೆ ಅವನು ಬಂದಾಗ, ವಸ್ತುವಿನ ಭೌತದ್ರವ್ಯವು ವಸ್ತುವನ್ನು ರೂಪಿಸಿರುವ ಆಧಾರ ಅಥವಾ ಮೂಲದ್ರವ್ಯವಾಗಿದೆ ಎಂದು ತೀರ್ಮಾನಿಸುತ್ತಾನೆ. ಉದಾಹರಣೆಗೆ , ಇಟ್ಟಿಗೆಗಳು, ಕಲ್ಲುಗಳು, ದಿಮ್ಮಿಗಳು ಇತ್ಯಾದಿಯಾಗಿ, ಅಥವಾ ಪ್ರಬಲವಾದ ಮನೆಯೊಂದನ್ನು ರಚಿಸುವ ಯಾವುದೇ ವಸ್ತುಗಳೂ ಮನೆಯ ಭೌತಿಕ ದ್ರವ್ಯಗಳಾಗಿವೆ. ವಸ್ತುವಿನ ಸ್ವರೂಪವು ವಾಸ್ತವಿಕ ಮನೆಯಾಗಿದ್ದು, ಅದು 'ಕಾಯಗಳು ಮತ್ತು ಚರಾಸ್ತಿಗಳಿಗೆ ಅಥವಾ ಇನ್ನಾವುದೇ ವೈಲಕ್ಷಣ್ಯಗಳಿಗೆ ರಕ್ಷಣೆಯಾಗಿರುತ್ತದೆ' (ಇದನ್ನೂ ನೋಡಿ ವಿಶೇಷಣಗಳು). ಘಟಕಗಳನ್ನು ನೀಡುವ ಸೂತ್ರವು ಭೌತದ್ರವ್ಯದ ಲೆಕ್ಕಾಚಾರವಾಗಿದೆ, ಮತ್ತು ವೈಲಕ್ಷಣ್ಯವನ್ನು ನೀಡುವ ಸೂತ್ರವು ಸ್ವರೂಪದ ಲೆಕ್ಕಾಚಾರವಾಗಿದೆ. ಬದಲಾವಣೆ (ಕೈನೆಸಿಸ್ ) ಮತ್ತು ಅದರ ಈಗಿನ ಕಾರಣಗಳಿಗೆ ಸಂಬಂಧಿಸಿದಂತೆ, ಆತ ತನ್ನ ಫಿಸಿಕ್ಸ್ ಮತ್ತು ಆನ್ ಜನರೇಷನ್ ಅಂಡ್ ಕರಪ್ಷನ್ 319ಬಿ-320ಎನಲ್ಲಿ ವ್ಯಾಖ್ಯಾನಿಸಿರುವಂತೆ, ಬರುವಿಕೆಯು ಇವುಗಳಿಂದ ಆಗಬೇಕು ಎಂದು ಆತ ಗುರುತಿಸುತ್ತಾನೆ: 1) ಪರಿಮಾಣದಲ್ಲಿನ ಬದಲಾವಣೆಯಾಗಿರುವ, ಬೆಳವಣಿಗೆ ಮತ್ತು ಇಳಿಮೆ; 2)ಹರಹು ಅಥವಾ ವಿಸ್ತಾರದಲ್ಲಿನ ಬದಲಾವಣೆಯಾಗಿರುವ ಚಲಿಸುವಿಕೆ; ಮತ್ತು 3) ಗುಣಮಟ್ಟದಲ್ಲಿನ ಬದಲಾವಣೆಯಾಗಿರುವ ಮಾರ್ಪಡಿಸುವಿಕೆ. ಬರಬೇಕಾಗಿರುವುದು ಎಂಬುದು ಒಂದು ಬದಲಾವಣೆಯಾಗಿದ್ದು, ಅದರಲ್ಲಿ ಯಾವುದೂ ಬಹುಕಾಲ ನಿಲ್ಲುವುದಿಲ್ಲ. ಇದರ ಫಲವಾಗಿ ಹೊರಹೊಮ್ಮುವುದೇ ಒಂದು ಆಸ್ತಿಯಾಗುತ್ತದೆ. ಆ ಒಂದು ನಿರ್ದಿಷ್ಟ ಬದಲಾವಣೆಯಲ್ಲಿ, ಭೌತದ್ರವ್ಯ ಹಾಗೂ ಸ್ವರೂಪದ ಜೊತೆಯಲ್ಲಿ, ಸಾಮರ್ಥ್ಯ (ಡೈನಮಿಕ್ಸ್ ) ಮತ್ತು ವಾಸ್ತವತೆ (ಎಂಟಲೆಖಿಯಾ ) ಎಂಬ ಪರಿಕಲ್ಪನೆಯನ್ನು ಆತ ಪರಿಚಯಿಸುತ್ತಾನೆ. ಸಾಮರ್ಥ್ಯಕ್ಕೆ ಸಂಬಂಧಿಸಿ ಹೇಳುವುದಾದರೆ, ಇದು ಏನನ್ನಾದರೂ ಮಾಡಲು ವಸ್ತುವಿಗಿರುವ ಯೋಗ್ಯತೆ ಅಥವಾ ಶಕ್ತಿಯಾಗಿದೆ, ಅಥವಾ ಬೇರೆ ಯಾವುದರಿಂದಲಾದರೂ ತಡೆಯಲ್ಪಡದಿದ್ದರೆ ಅದರ ಮೇಲೆ ಕಾರ್ಯನಿರ್ವಹಿಸಬಹುದಾದ ಯೋಗ್ಯತೆಯಾಗಿದೆ. ಉದಾಹರಣೆಗೆ, ಮಣ್ಣಿನಲ್ಲಿರುವ ಸಸ್ಯವೊಂದರ ಬೀಜವು ಸಂಭಾವ್ಯ (ಡೈನಮಿ ) ಸಸ್ಯವಾಗಿದೆ, ಮತ್ತು ಅದು ಯಾವುದರಿಂದಲೂ ತಡೆಯಲ್ಪಡದಿದ್ದರೆ, ಅದು ಸಸ್ಯವಾಗಿ ರೂಪುಗೊಳ್ಳುತ್ತದೆ. ಸಂಭಾವ್ಯ ಜೀವಿಗಳು ಒಂದೋ 'ವರ್ತಿಸಬಹುದು' (ಪೊಯೀನ್ ) ಅಥವಾ 'ವರ್ತನೆಗೆ ಒಳಗಾಗಬಹುದು' (ಪ್ಯಾಸ್ಕೀನ್ ). ಈ ಸ್ವಭಾವವು ಹುಟ್ಟಿನಿಂದ ಬಂದುದಾಗಿರಬಹುದು ಇಲ್ಲವೇ ರೂಢಿಸಿಕೊಂಡಿರುವುದಾಗಿರಬಹುದು. ಉದಾಹರಣೆಗೆ, ಕಣ್ಣುಗಳು ದೃಷ್ಟಿಯ ಸಾಮರ್ಥ್ಯವನ್ನು ಹೊಂದಿದ್ದರೆ (ಹುಟ್ಟಿನಿಂದ ಬಂದದ್ದು – ವರ್ತನೆಗೆ ಒಳಗಾಗಿರುವಂಥಾದ್ದು), ಕೊಳಲನ್ನು ನುಡಿಸುವ ಸಾಮರ್ಥ್ಯವನ್ನು ರೂಢಿಸಿಕೊಳ್ಳುವುದರಿಂದ, ಅಂದರೆ ಕಲಿಯುವುದರಿಂದ ಹೊಂದಬಹುದಾಗಿದೆ (ವ್ಯಾಯಾಮ – ಅಭಿನಯ). ಸಾಮರ್ಥ್ಯದ ಅಂತ್ಯದ ಈಡೇರಿಸುವಿಕೆಯು ವಾಸ್ತವತೆ ಎನಿಸಿಕೊಳ್ಳುತ್ತದೆ. ಏಕೆಂದರೆ, ಅಂತ್ಯ (ಟೆಲೋಸ್ ) ಎನ್ನುವುದು ಪ್ರತಿಯೊಂದು ಬದಲಾವಣೆಯ ಮೂಲತತ್ವವಾಗಿದೆ, ಮತ್ತು ಅಂತ್ಯದ ಸಲುವಾಗಿ ಸಾಮರ್ಥ್ಯವು ಅಸ್ತಿತ್ವದಲ್ಲಿರುತ್ತದೆ. ಆದ್ದರಿಂದ ವಾಸ್ತವತೆ ಎಂಬುದೇ ಅಂತ್ಯ. ನಮ್ಮ ಹಿಂದಿನ ಉದಾಹರಣೆಗೆ ಸಂಬಂಧಿಸಿ ಹೇಳುವುದಾದರೆ, ಸಸ್ಯದ ಬೀಜವು ಯಾವಾಗ ಒಂದು ಸಸ್ಯವಾಗಿ ರೂಪುಗೊಳ್ಳುವುದೋ ಅದೇ ವಾಸ್ತವತೆ ಎಂದು ಹೇಳಬಹುದು. "ಯಾವುದರ ಸಲುವಾಗಿ ಒಂದು ವಸ್ತುವಿದೆಯೋ ಅದು ಅದರ ಮೂಲತತ್ವವಾಗಿದೆ, ಮತ್ತು ಹಾಗೆ ಆಗಿರುವುದು ಅಂತ್ಯದ ಸಲುವಾಗಿಯೇ; ಮತ್ತು ವಾಸ್ತವತೆಯೇ ಅಂತ್ಯವಾಗಿದೆ, ಮತ್ತು ಇದರ ಸಲುವಾಗಿಯೇ ಸಾಮರ್ಥ್ಯವು ಹೊಂದಲ್ಪಡುತ್ತದೆ. ತಾವು ದೃಶ್ಯವನ್ನು ಹೊಂದಬಹುದಾದ ಕ್ರಮದಲ್ಲಿ ಪ್ರಾಣಿಗಳು ನೋಡುವುದಿಲ್ಲ, ಆದರೆ ಅವು ನೋಡಬಹುದಾದ ದೃಶ್ಯವನ್ನು ಅವು ಹೊಂದಿವೆ." ಉಪಸಂಹಾರದ ರೂಪದಲ್ಲಿ ಹೇಳುವುದಾದರೆ, ಮನೆಯ ಭೌತದ್ರವ್ಯವು ಅದರ ಸಾಮರ್ಥ್ಯವಾಗಿದೆ ಮತ್ತು ಸ್ವರೂಪವು ಅದರ ವಾಸ್ತವತೆಯಾಗಿದೆ. ಸಂಭಾವ್ಯ ಮನೆಯಿಂದ ವಾಸ್ತವದ ಮನೆಯೆಡೆಗಿನ ಬದಲಾವಣೆಯ ಔಪಚಾರಿಕ ಕಾರಣವು (ಐಟಿಯಾ ) ಮನೆ ಕಟ್ಟುವವನ ಉದ್ದೇಶವಾಗಿದ್ದು, ಅಂತಿಮ ಕಾರಣವು ಅಂತ್ಯವಾಗಿದೆ, ಅದು ಮತ್ತಿನ್ನಾವುದೂ ಅಲ್ಲ, ಸ್ವತಃ ಮನೆಯೇ. ಈ ಹಂತದಲ್ಲಿ ಮುಂದುವರಿಯುವ ಅರಿಸ್ಟಾಟಲ್, ಸೂತ್ರದಲ್ಲಿ, ಕಾಲದಲ್ಲಿ ಮತ್ತು ಸ್ಥಿತಿವಂತಿಕೆಯಲ್ಲಿ ವಾಸ್ತವತೆಯು ಸಾಮರ್ಥ್ಯಕ್ಕೆ ಮುಂಚಿತವಾಗಿ ಬರುತ್ತದೆ ಎಂಬ ತೀರ್ಮಾನಕ್ಕೆ ಬರುತ್ತಾನೆ. ನಿರ್ದಿಷ್ಟ ವಸ್ತುವಿನ (ಅಂದರೆ, ಭೌತದ್ರವ್ಯ ಮತ್ತು ಸ್ವರೂಪ) ಈ ವ್ಯಾಖ್ಯಾನದೊಂದಿಗೆ, ಜೀವಿಗಳ ಏಕತೆಯ ಸಮಸ್ಯೆಯನ್ನು ಪರಿಹರಿಸುವ ಕುರಿತು, ಉದಾಹರಣೆಗೆ , ಮನುಷ್ಯನನ್ನು ಏಕಮಾತ್ರನನ್ನಾಗಿ ಮಾಡಿದ್ದು ಏನು? ಎಂಬುದನ್ನು ಕಂಡುಕೊಳ್ಳುವಲ್ಲಿ ಅರಿಸ್ಟಾಟಲ್ ಪ್ರಯತ್ನಿಸುತ್ತಾನೆ. ಪ್ಲೇಟೋನ ಅನುಸಾರವಾಗಿ ಪ್ರಾಣಿ ಮತ್ತು ದ್ವಿಪಾದಿ ಎಂಬ ಎರಡು ಪರಿಕಲ್ಪನೆಗಳು ಇರುವುದರಿಂದ, ಆಗ ಮನುಷ್ಯನದು ಒಂದು ಏಕತ್ವವಾಗಲು ಹೇಗೆ ಸಾಧ್ಯ? ಆದಾಗ್ಯೂ, ಅರಿಸ್ಟಾಟಲ್ನ ಅನುಸಾರ, ಸಂಭಾವ್ಯ ಜೀವಿ (ಭೌತಿಕ ದ್ರವ್ಯ) ಮತ್ತು ವಾಸ್ತವಿಕ ಏಕತ್ವ (ಸ್ವರೂಪ) ಇವು ಎರಡೂ ಒಂದೇ.
ಎಲ್ಲಾ ವಸ್ತುಗಳೂ ಒಂದು ಸಾರ್ವತ್ರಿಕ ಸ್ವರೂಪವನ್ನು ಹೊಂದಿದ್ದು, ಅದು ಒಂದು ಆಸ್ತಿಯಾಗಿರಬಹುದು, ಅಥವಾ ಇತರ ವಸ್ತುಗಳೊಂದಿಗಿನ ಒಂದು ಸಂಬಂಧವಾಗಿರಬಹುದು ಎಂದು ಅರಿಸ್ಟಾಟಲ್ನ ಪೂರ್ವವರ್ತಿಯಾದ ಪ್ಲೇಟೋ ವಾದಿಸಿದ. ಉದಾಹರಣೆಗೆ, ನಾವು ಒಂದು ಸೇಬಿನೆಡೆಗೆ ನೋಡುವಾಗ ನಾವು ಒಂದು ಸೇಬನ್ನು ಕಾಣುತ್ತೇವೆ, ಮತ್ತು ಒಂದು ಸೇಬಿನ ಸ್ವರೂಪವೊಂದನ್ನು ನಾವು ವಿಶ್ಲೇಷಿಸಬಲ್ಲವರೂ ಆಗಿರುತ್ತೇವೆ. ಈ ವೈಲಕ್ಷಣ್ಯದಲ್ಲಿ, ಅಲ್ಲೊಂದು ನಿರ್ದಿಷ್ಟ ಸೇಬು ಇರುತ್ತದೆ ಮತ್ತು ಒಂದು ಸೇಬಿನ ಒಂದು ಸಾರ್ವತ್ರಿಕ ಸ್ವರೂಪವಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಒಂದು ಪುಸ್ತಕದ ಮಗ್ಗುಲಲ್ಲಿ ನಾವು ಒಂದು ಸೇಬನ್ನು ಇಡಬಹುದು. ಹೀಗೆ ಮಾಡುವುದರಿಂದ, ಪುಸ್ತಕ ಹಾಗೂ ಸೇಬು- ಈ ಎರಡೂ ಒಂದರ ಪಕ್ಕದಲ್ಲಿ ಒಂದಿವೆ ಎಂದು ನಾವು ಮಾತನಾಡಬಹುದು. ನಿರ್ದಿಷ್ಟ ವಸ್ತುಗಳ ಒಂದು ಭಾಗವಾಗಿರದ ಒಂದಷ್ಟು ಸಾರ್ವತ್ರಿಕ ಸ್ವರೂಪಗಳು ಅಸ್ತಿತ್ವದಲ್ಲಿವೆ ಎಂದು ಪ್ಲೇಟೋ ವಾದಿಸಿದ. ಉದಾಹರಣೆಗೆ, ನಿರ್ದಿಷ್ಟವಾದ ಒಳ್ಳೆಯದರ ಅಸ್ತಿತ್ವವು ಇಲ್ಲದಿರಲು ಸಾಧ್ಯವಿದೆ, ಆದರೆ "ಒಳ್ಳೆಯದು" ಎಂಬುದು ಈಗಲೂ ಒಂದು ಸೂಕ್ತವಾದ ಸಾರ್ವತ್ರಿಕ ಸ್ವರೂಪವಾಗಿದೆ. ಬರ್ಟ್ರಾಂಡ್ ರಸ್ಸೆಲ್ ಓರ್ವ ಸಮಕಾಲೀನ ದಾರ್ಶನಿಕನಾಗಿದ್ದು, "ದೃಷ್ಟಾಂತೀಕರಿಸದಿರುವ ಸಾರ್ವತ್ರಿಕವಾದವುಗಳ" ಅಸ್ತಿತ್ವದ ಕುರಿತಾದ ಪ್ಲೇಟೋನ ಅಭಿಪ್ರಾಯಗಳಿಗೆ ಆತ ಸಹಮತವನ್ನು ವ್ಯಕ್ತಪಡಿಸಿದ. ಈ ಅಂಶದ ಕುರಿತಾದ ಪ್ಲೇಟೋನ ಅಭಿಪ್ರಾಯಗಳನ್ನು ಒಪ್ಪದ ಅರಿಸ್ಟಾಟಲ್, ಎಲ್ಲಾ ಸಾರ್ವತ್ರಿಕವಾದವುಗಳೂ ದೃಷ್ಟಾಂತೀಕರಿಸಲ್ಪಟ್ಟಿವೆ ಎಂದು ವಾದಿಸಿದ. ಅಸ್ತಿತ್ವದಲ್ಲಿರುವ ವಸ್ತುಗಳೊಂದಿಗೆ ಸಂಬಂಧವನ್ನು ಕಡಿದುಕೊಂಡಿರುವ ಯಾವುದೇ ಸಾರ್ವತ್ರಿಕವಾದವುಗಳು ಇಲ್ಲ ಎಂದು ಅರಿಸ್ಟಾಟಲ್ ವಾದಿಸಿದ. ಅರಿಸ್ಟಾಟಲ್ನ ಪ್ರಕಾರ, ಒಂದು ನಿರ್ದಿಷ್ಟತೆಯ ರೂಪದಲ್ಲಾಗಲೀ ಅಥವಾ ಒಂದು ಸಂಬಂಧದ ರೂಪದಲ್ಲಾಗಲೀ, ಒಂದು ಸಾರ್ವತ್ರಿಕವಾದದ್ದು ಅಸ್ತಿತ್ವದಲ್ಲಿದ್ದರೆ, ಸಾರ್ವತ್ರಿಕವಾದುದನ್ನು ದೃಢವಾಗಿ ಹೇಳುವುದಕ್ಕೆ ಆಧಾರವಾಗಿರುವ ಏನೋ ಒಂದು ಹಿಂದೆ ಇದ್ದಿರಬೇಕು, ಪ್ರಸ್ತುತ ಇರಬೇಕು, ಅಥವಾ ಭವಿಷ್ಯದಲ್ಲಿ ಇರಬಹುದು ಇದರ ಫಲವಾಗಿ, ಒಂದು ವೇಳೆ ಇದು ಒಂದು ಕಾಲದ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ಒಂದು ವಸ್ತುವಿಗೆ ಸಾರ್ವತ್ರಿಕವಾದುದನ್ನು ಅನ್ವಯಿಸುವುದಕ್ಕೆ ಅಥವಾ ಸಾಧಾರಗೊಳಿಸುವುದಕ್ಕೆ ಸಂಬಂಧಿಸಿದ ಪ್ರಕರಣವಾಗಿರದಿದ್ದರೆ, ಆಗ ಅದು ಅಸ್ತಿತ್ವದಲ್ಲೇ ಇರುವುದಿಲ್ಲ ಎಂಬುದು ಅರಿಸ್ಟಾಟಲ್ನ ಅಭಿಮತ. ಇದರ ಜೊತೆಗೆ, ಸಾರ್ವತ್ರಿಕವಾದವುಗಳ ನೆಲೆಯ ಕುರಿತಾದ ಪ್ಲೇಟೋನ ಅಭಿಪ್ರಾಯಕ್ಕೆ ಅರಿಸ್ಟಾಟಲ್ನ ಸಮ್ಮತಿಯಿರಲಿಲ್ಲ. ಎಲ್ಲಾ ಸಾರ್ವತ್ರಿಕ ಸ್ವರೂಪಗಳು ಅಸ್ತಿತ್ವ ಕಂಡುಕೊಂಡಿರುವ ತಾಣವಾದ ಸ್ವರೂಪಗಳ ಪ್ರಪಂಚದ ಕುರಿತಾಗಿ ಪ್ಲೇಟೋ ಪ್ರಸ್ತಾವಿಸಿದ್ದರಿಂದ, ಪ್ರತಿಯೊಂದು ವಸ್ತುವಿನ ಒಳಗಡೆ ಸಾರ್ವತ್ರಿಕವಾದವುಗಳು ನೆಲೆ ಕಂಡುಕೊಂಡಿರುತ್ತವೆ ಮತ್ತು ಈ ವಸ್ತುವಿನ ಆಧಾರದ ಮೇಲೆಯೇ ಸಾರ್ವತ್ರಿಕವಾಗಿರುವ ಪ್ರತಿಯೊಂದನ್ನೂ ಸಾಧಾರಗೊಳಿಸಬಹುದು ಅಥವಾ ದೃಢವಾಗಿ ಹೇಳಬಹುದು ಎಂದು ಅರಿಸ್ಟಾಟಲ್ ಸಮರ್ಥಿಸಿದ. ಆದ್ದರಿಂದ ಅರಿಸ್ಟಾಟಲ್ನ ಪ್ರಕಾರ, ಸೇಬಿನ ಸ್ವರೂಪವು ಸ್ವರೂಪಗಳ ಪ್ರಪಂಚದಲ್ಲಿರುವುದಕ್ಕೆ ಬದಲಾಗಿ ಪ್ರತಿ ಸೇಬಿನ ಒಳಗಡೆಯೇ ಅಸ್ತಿತ್ವ ಕಂಡುಕೊಂಡಿರುತ್ತದೆ.
ಅರಿಸ್ಟಾಟಲ್ನ ಪ್ರತಿಪಾದಿಸಿದ ವಿಜ್ಞಾನದಲ್ಲಿ, ಅದರಲ್ಲೂ ಬಹುವಿಶೇಷವಾಗಿ ಜೀವಶಾಸ್ತ್ರದಲ್ಲಿ, ತನಗೆ ತಾನೇ ಆತ ಕಂಡ ವಸ್ತು-ವಿಷಯಗಳು, ಕಾಲದ ಪರೀಕ್ಷೆಯನ್ನು ಎದುರಿಸಿವೆ. ತಪ್ಪು ಮತ್ತು ಅಂಧಶ್ರದ್ಧೆಯನ್ನು ಒಳಗೊಂಡಿರುವ, ಇತರರು ಅವನ ಕುರಿತಾಗಿ ಮತ್ತೆ ಮತ್ತೆ ಹೇಳಿರುವ ವರದಿಗಳಿಗಿಂದ ಇದು ಉತ್ತಮವಾಗಿದೆ. ಆತ ಪ್ರಾಣಿಗಳ ಅಂಗಛೇದನ ಮಾಡಿದನೇ ಹೊರತು ಮನುಷ್ಯರದ್ದನ್ನಲ್ಲ. ಮಾನವ ಶರೀರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತಾದ ಆತನ ಪರಿಕಲ್ಪನೆಗಳು, ಹೆಚ್ಚೂಕಡಿಮೆ ಸಂಪೂರ್ಣವಾಗಿ ರದ್ದುಗೊಳಿಸಲ್ಪಟ್ಟಿವೆ.
ಅರಿಸ್ಟಾಟಲ್ ಆರಂಭಿಕ ಪ್ರಕೃತಿ ಚರಿತ್ರೆಕಾರನಾಗಿದ್ದು ಆತನ ಕೆಲಸವು ಈಗಲೂ ಒಂದಷ್ಟು ವಿವರದಲ್ಲಿ ಉಳಿದುಕೊಂಡಿದೆ. ಲೆಸ್ಬೋಸ್ನ ಪ್ರಕೃತಿ ಚರಿತ್ರೆ, ಮತ್ತು ಅದನ್ನು ಸುತ್ತುವರೆದಿರುವ ಸಮುದ್ರಗಳು ಹಾಗೂ ನೆರೆಹೊರೆಯ ಪ್ರದೇಶಗಳ ಕುರಿತಾಗಿ ಅರಿಸ್ಟಾಟಲ್ ನಿಸ್ಸಂಶಯವಾಗಿ ಸಂಶೋಧನೆ ನಡೆಸಿದ್ದಾನೆ. ಈ ಸಂಶೋಧನೆಯನ್ನು ಪ್ರತಿಬಿಂಬಿಸುವ ಹಿಸ್ಟರಿ ಆಫ್ ಅನಿಮಲ್ಸ್ , ಜನರೇಷನ್ ಆಫ್ ಅನಿಮಲ್ಸ್ , ಮತ್ತು ಪಾರ್ಟ್ಸ್ ಆಫ್ ಅನಿಮಲ್ಸ್ ನಂತಹ ಆತನ ಕೃತಿಗಳು, ಬಗೆಬಗೆಯ ಮಿಥ್ಯಾಕಲ್ಪನೆಗಳು ಹಾಗೂ ತಪ್ಪುಗಳ ಜೊತೆಗೆ, ಒಂದಷ್ಟು ವೀಕ್ಷಣೆಗಳು ಹಾಗೂ ಅರ್ಥವಿವರಣೆಗಳನ್ನು ಒಳಗೊಂಡಿವೆ. ಅತ್ಯಂತ ಗಮನಸೆಳೆಯುವ ಉದ್ಧೃತಭಾಗಗಳು ಲೆಸ್ಬೋಸ್ ಕುರಿತಾದ ವೀಕ್ಷಣೆಯಿಂದ ಹಾಗೂ ಮೀನುಗಾರರು ಹಿಡಿದಿರುವ ಮೀನಿನ ಪ್ರಮಾಣದಿಂದ ಗೋಚರವಾಗುವ ಸಮುದ್ರ-ಜೀವನದ ಕುರಿತಾಗಿವೆ. ಬೆಕ್ಕುಮೀನು, ವಿದ್ಯುನ್ಮೀನು (ಟಾರ್ಪೆಡೋ ) ಮತ್ತು ಗಾಳದ ಮೀನುಗಳ ಕುರಿತಾದ ಆತನ ವೀಕ್ಷಣೆಗಳು ವಿವರಿಸಲ್ಪಟ್ಟಿವೆ. ಶೀರ್ಷಪಾದಿಗಳ ಕುರಿತಾದ ಆಕ್ಟಪಸ್ , ಸೆಪಿಯಾ (ಕಟ್ಲ್ ಮೀನು) ಮತ್ತು ತೆಳುವಾದ ಶೀರ್ಷಪದಿ (ಆರ್ಗೋನೌಟಾ ಆರ್ಗೋ ) ಎಂಬ ಬರಹಗಳನ್ನು ಆತ ನೀಡಿದ್ದಾನೆ. ಹೆಕ್ಟೋಕಾಟೈಲ್ ಭುಜದ ಕುರಿತಾದ ಆತನ ವಿವರಣೆಯು ಆತನ ಕಾಲಕ್ಕಿಂತ ಸುಮಾರು ಎರಡು ಸಾವಿರ ವರ್ಷಗಳಷ್ಟು ಮುಂದಿತ್ತು, ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ ಅದರ ಮರು-ಆವಿಷ್ಕಾರವಾಗುವವರೆಗೆ ಅದನ್ನು ವ್ಯಾಪಕವಾಗಿ ನಂಬಿರಲಿಲ್ಲ. ಮೀನಿನಿಂದ ಜಲಜೀವಿ ಸಸ್ತನಿಗಳನ್ನು ಆತ ಬೇರ್ಪಡಿಸಿದ, ಮತ್ತು ಷಾರ್ಕ್ಗಳು ಹಾಗೂ ರೇ ಮೀನುಗಳು ಸಿಲಾಕೆ (ಸಿಲಾಕಿಯೈ ಉಪವರ್ಗದ ಮೀನುಗಳು) ಎಂದು ಆತನಿಂದ ಕರೆಸಿಕೊಂಡ ಗುಂಪಿನ ಭಾಗಗಳಾಗಿದ್ದವು ಎಂದು ಆತನಿಗೆ ಗೊತ್ತಿತ್ತು.
ಆತನ ವಿಧಾನಗಳಲ್ಲಿನ ಮತ್ತೊಂದು ಉತ್ತಮ ಉದಾಹರಣೆಯು ಜನರೇಷನ್ ಆಫ್ ಅನಿಮಲ್ಸ್ ಕೃತಿಯಲ್ಲಿ ದೊರೆಯುತ್ತದೆ. ಕಣ್ಣಿಗೆ ಗೋಚರಿಸುವ ರೀತಿಯಲ್ಲಿ ಅಂಗಾಂಗಗಳು ಯಾವಾಗ ಹುಟ್ಟಿಕೊಂಡಿದ್ದವು ಎಂಬುದನ್ನು ವೀಕ್ಷಿಸಲು, ಫಲೀಕರಣಗೊಂಡ ಕೋಳಿಯ ಮೊಟ್ಟೆಗಳನ್ನು ಆಗಾಗ ಒಡೆದು ನೋಡುತ್ತಿದ್ದುದನ್ನು ಈ ಕೃತಿಯಲ್ಲಿ ಅರಿಸ್ಟಾಟಲ್ ವಿವರಿಸಿದ್ದಾನೆ. ಮೆಲುಕು ಹಾಕುವ ಪ್ರಾಣಿಗಳ ನಾಲ್ಕು-ಕೋಣೆಗಳ, ನಾಲ್ಕು-ಜಠರಗಳ ಕರಾರುವಾಕ್ಕಾದ ವರ್ಣನೆಯನ್ನು ಆತ ನೀಡಿದ. ಮಸ್ಟೆಲಸ್ ಮಸ್ಟೆಲಸ್ ಎಂಬ ನಾಯಿಮೀನು ಷಾರ್ಕ್ನ ಅಂಡಜೋತ್ಪಾದಕ ಭ್ರೂಣಶಾಸ್ತ್ರೀಯ ಅಭಿವೃದ್ಧಿಯ ಕುರಿತೂ ಆತ ವಿವರಣೆ ನೀಡಿದ್ದಾನೆ.
ಅರಿಸ್ಟಾಟಲ್ ಮಾಡಿದ ಜೀವಂತ ವಸ್ತುಗಳ ವರ್ಗೀಕರಣವು ಹತ್ತೊಂಬತ್ತನೇ ಶತಮಾನದಲ್ಲೂ ಅಸ್ತಿತ್ವದಲ್ಲಿದ್ದ ಕೆಲವೊಂದು ಘಟಕಗಳನ್ನು ಹೊಂದಿದೆ. ಆಧುನಿಕ ಪ್ರಾಣಿಶಾಸ್ತ್ರಜ್ಞರು ಯಾವುವನ್ನು ಕಶೇರುಕಗಳು ಮತ್ತು ಅಕಶೇರುಕಗಳು ಎಂದು ಕರೆಯುತ್ತಾರೋ ಅವನ್ನೇ 'ರಕ್ತಸಹಿತ ಪ್ರಾಣಿಗಳು' ಮತ್ತು 'ರಕ್ತರಹಿತ ಪ್ರಾಣಿಗಳು' ಎಂದು ಅರಿಸ್ಟಾಟಲ್ ಕರೆದ (ಸಂಕೀರ್ಣ ಸ್ವರೂಪದ ಅಕಶೇರುಕಗಳು ಹಿಮೋಗ್ಲೋಬಿನ್ನ ಬಳಕೆಯನ್ನು ಮಾಡುತ್ತವೆಯಾದರೂ, ಅದು ಕಶೇರುಕಗಳಿಗಿಂತ ವಿಭಿನ್ನ ವಿಧಾನದಲ್ಲಿರುತ್ತದೆ ಎಂದು ಅವನಿಗೆ ತಿಳಿದಿರಲಿಲ್ಲ). ರಕ್ತಸಹಿತ ಪ್ರಾಣಿಗಳನ್ನು ಮರಿ-ಹಾಕುವ (ಮನುಷ್ಯರು ಮತ್ತು ಸಸ್ತನಿಗಳು), ಮತ್ತು ಮೊಟ್ಟೆ-ಇಡುವ (ಪಕ್ಷಿಗಳು ಮತ್ತು ಮೀನು) ಪ್ರಾಣಿಗಳೆಂದು ವಿಭಜಿಸಲಾಯಿತು. ಅಕಶೇರುಕಗಳಲ್ಲಿ ('ರಕ್ತರಹಿತ ಪ್ರಾಣಿಗಳು') ಕೀಟಗಳು, ಕಠಿಣಚರ್ಮಿಗಳು (ಇವನ್ನು ಚಿಪ್ಪು-ರಹಿತ ಪ್ರಾಣಿಗಳು – ಶೀರ್ಷಪದಿಗಳು – ಮತ್ತು ಚಿಪ್ಪುಸಹಿತ ಪ್ರಾಣಿಗಳು ಎಂದು ವಿಭಜಿಸಲಾಗಿದೆ) ಮತ್ತು ಗಟ್ಟಿಚಿಪ್ಪಿನ ಪ್ರಾಣಿಗಳು (ಮೃದ್ವಂಗಿಗಳು) ಸೇರಿವೆ. ಕೆಲವೊಂದು ವಿಷಯಗಳಲ್ಲಿ, ಈ ಅಪೂರ್ಣ ವರ್ಗೀಕರಣವು ಲಿನಿಯಸ್ ಕೈಗೊಂಡ ವರ್ಗೀಕರಣಕ್ಕಿಂತ ಉತ್ತಮವಾಗಿದೆ. ಏಕೆಂದರೆ, ಇನ್ಸೆಕ್ಟಾ ಮತ್ತು ವರ್ಮೆಸ್ (ಹುಳುಗಳು) ಎಂಬ ಎರಡು ಗುಂಪುಗಳೊಳಗೆ ಅಕಶೇರುಕಗಳನ್ನು ಲಿನಿಯಸ್ ಒತ್ತೊತ್ತಾಗಿ ತುಂಬಿಸಿದ್ದ. "ಸ್ಕೇಲಾ ನ್ಯಾಚುರೇ " ಎಂಬ ಒಂದು ಕೃತಿಯಂತೆ, ಜೀವಂತ ವಸ್ತುಗಳ ಸಂಬಂಧಗಳನ್ನು ಪ್ರದರ್ಶಿಸುವಲ್ಲಿನ ಅರಿಸ್ಟಾಟಲ್ನ ಪ್ರಯತ್ನಗಳಿಗಿಂತ ಹೆಚ್ಚು ಗಮನಾರ್ಹವಾದುದು ಯಾವುದೂ ಇಲ್ಲ" ಎಂದು ಚಾರ್ಲ್ಸ್ ಸಿಂಗರ್ ಅಭಿಪ್ರಾಯಪಡುತ್ತಾನೆ. ಅರಿಸ್ಟಾಟಲ್ನ ಹಿಸ್ಟರಿ ಆಫ್ ಅನಿಮಲ್ಸ್ ಕೃತಿಯು ಶ್ರೇಣಿ ವ್ಯವಸ್ಥೆಯ "ಜೀವನದ ಸೋಪಾನ"ವೊಂದಕ್ಕೆ (ಸ್ಕೇಲಾ ನ್ಯಾಚುರೇ ) ಸಂಬಂಧಿಸಿ ಜೀವಿಗಳನ್ನು ವರ್ಗೀಕರಿಸಿದ್ದು, ರಚನೆ ಹಾಗೂ ಕಾರ್ಯದ ಜಟಿಲತೆಯ ಅನುಸಾರ ಅವುಗಳಿಗೆ ಸ್ಥಾನವನ್ನು ಕಲ್ಪಿಸಿದೆ. ಹೀಗಾಗಿಯೇ ಉನ್ನತ ಜೀವಿಗಳು ಅತಿ ಹೆಚ್ಚಿನ ಹುರುಪು ಮತ್ತು ಚಲಿಸುವ ಸಾಮರ್ಥ್ಯವನ್ನು ತೋರಿಸಿವೆ. ಬೌದ್ಧಿಕ ಉದ್ದೇಶಗಳು, ಅಂದರೆ, ಔಪಚಾರಿಕ ಕಾರಣಗಳು ಎಲ್ಲಾ ಸ್ವಾಭಾವಿಕ ಪ್ರಕ್ರಿಯೆಗಳಿಗೂ ಮಾರ್ಗದರ್ಶನ ನೀಡಿವೆ ಎಂದು ಅರಿಸ್ಟಾಟಲ್ ನಂಬಿದ್ದ. ತನ್ನಿಂದ ವೀಕ್ಷಿಸಲ್ಪಟ್ಟ ದತ್ತಾಂಶವನ್ನು ಔಪಚಾರಿಕ ವಿನ್ಯಾಸದ ಒಂದು ಅಭಿವ್ಯಕ್ತಿಯಾಗಿ ಸಮರ್ಥಿಸಿಕೊಳ್ಳಲು ಇಂಥ ಒಂದು ಮೂಲಸಂಕಲ್ಪ ಸಿದ್ಧಾಂತದ ದೃಷ್ಟಿಕೋನವು ಅರಿಸ್ಟಾಟಲ್ಗೆ ಕಾರಣವನ್ನು ನೀಡಿತು. "ಯಾವುದೇ ಪ್ರಾಣಿಯೂ ಒಂದೇ ಬಾರಿಗೆ ದಂತಗಳು (ಆನೆಯ ಥರದ್ದು) ಹಾಗೂ ಕೊಂಬುಗಳನ್ನು ಹೊಂದಿಲ್ಲ" ಮತ್ತು "ಎರಡು ಕೊಂಬುಗಳನ್ನು ಹೊಂದಿದ ಏಕ-ಗೊರಸಿನ ಪ್ರಾಣಿಯನ್ನು ನಾನೆಂದೂ ನೋಡಿಲ್ಲ" ಎಂಬುದನ್ನು ಹೇಳುತ್ತಾ, ಯಾವುದೇ ಪ್ರಾಣಿಗೆ ಕೊಂಬುಗಳು ಹಾಗೂ ದಂತಗಳೆರಡನ್ನೂ ನೀಡದಿರುವ ಮೂಲಕ ಪ್ರಕೃತಿಯು ಮಿಥ್ಯಾಪ್ರದರ್ಶನ ಅಥವಾ ಹುರುಳಿಲ್ಲದಿರುವಿಕೆಗೆ ತಡೆಯೊಡ್ಡಿದೆ. ಜೀವಿಗಳಿಗೆ ಏನು ಅತ್ಯಗತ್ಯವಾಗಿದೆಯೋ ಅಷ್ಟರಮಟ್ಟಿಗಿನ ಸ್ವಾಭಾವಿಕ ಶಕ್ತಿಯನ್ನು ಮಾತ್ರವೇ ಪ್ರಕೃತಿಯು ನೀಡಿದೆ ಎಂಬುದು ಅರಿಸ್ಟಾಟಲ್ನ ಅಭಿಪ್ರಾಯವಾಗಿತ್ತು. ಮೆಲುಕು ಹಾಕುವ ಪ್ರಾಣಿಗಳು ಬಹು-ಜಠರ ಮತ್ತು ದುರ್ಬಲ ಹಲ್ಲುಗಳನ್ನು ಹೊಂದಿರುವುದನ್ನು ಸೂಚ್ಯವಾಗಿ ಹೇಳುತ್ತಾ, ಪ್ರಕೃತಿಯು ಒಂದು ರೀತಿಯ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ನಂತರದ ಸ್ಥಿತಿಯನ್ನು ಸರಿದೂಗಿಸಲು ಮೊದಲನೆಯ ಸ್ಥಿತಿ ಇದೆ ಎಂದು ಆತ ಅಂದುಕೊಂಡ. ಸಮಾನಸದೃಶ ಮಾದರಿಯೊಂದರಲ್ಲಿ, ಸಸ್ಯಗಳಿಂದ ಪ್ರಾರಂಭವಾಗಿ ಮನುಷ್ಯನವರೆಗೆ ಏರುತ್ತಾ ಪರಿಪೂರ್ಣತೆಯ ಶ್ರೇಣೀಕೃತ ಅಳತೆಗೋಲಿನಲ್ಲಿ ಜೀವಿಗಳು ವ್ಯವಸ್ಥೆಗೊಳಿಸಲ್ಪಟ್ಟಿದ್ದವು ಎಂದು ಅರಿಸ್ಟಾಟಲ್ ನಂಬಿದ್ದ. ಈ ಅಳತೆಗೋಲಿಗೆ ಸ್ಕೇಲಾ ನ್ಯಾಚುರೇ ಅಥವಾ ಇರುವಿಕೆಯ ಮಹಾನ್ ಸರಪಳಿ ಎಂದು ಆತ ಕರೆದಿದ್ದ. ಆತನ ವರ್ಗೀಕರಣ ವ್ಯವಸ್ಥೆಯು "ಸಾಮರ್ಥ್ಯದೊಂದಿಗಿನ ಹಂತ ಅಥವಾ ಮಜಲಿನ" ಅನುಸಾರವಾಗಿ ಜೋಡಣೆಗೊಂಡಿರುವ ಹನ್ನೊಂದು ಮಜಲುಗಳನ್ನು ಅಥವಾ ದರ್ಜೆಗಳನ್ನು ಹೊಂದಿದ್ದು, ಹುಟ್ಟುವಾಗಿನ ಅವುಗಳ ಸ್ವರೂಪದಲ್ಲಿ ಅಭಿವ್ಯಕ್ತಿಸಲ್ಪಟ್ಟಿವೆ. ಉನ್ನತ ವರ್ಗದ ಪ್ರಾಣಿಗಳು ಬೆಚ್ಚಗಿನ ಹಾಗೂ ಹಸಿಹಸಿಯಾದ ಜೀವಿಗಳಿಗೆ ಸಜೀವವಾದ ಜನ್ಮವಿತ್ತರೆ, ಕೆಳವರ್ಗದವು ಶೀತಲವಾದ, ಶುಷ್ಕವಾದ, ಮತ್ತು ದಪ್ಪಗಿನ ಮೊಟ್ಟೆಗಳ ಮೂಲಕ ತಮ್ಮ ಸಂತತಿಗೆ ಅಸ್ತಿತ್ವ ಕಾಣಿಸಿದವು. ಜೀವಿಯೊಂದರ ಪೂರ್ಣವಿಕಸನದ ಮಟ್ಟವು ಅದರ ಸ್ವರೂಪದಲ್ಲಿ ಪ್ರತಿಬಿಂಬಿಸಲ್ಪಟ್ಟಿದೆಯೇ ಹೊರತು ಆ ಸ್ವರೂಪದಿಂದ ಪೂರ್ವನಿಯಾಮಕವಾಗಿಸಲ್ಪಟ್ಟಿಲ್ಲ ಎಂಬ ಅಭಿಪ್ರಾಯಕ್ಕೂ ಸಹ ಅರಿಸ್ಟಾಟಲ್ ಭದ್ರವಾಗಿ ಅಂಟಿಕೊಂಡ. ಈ ಬಗೆಯ ಪರಿಕಲ್ಪನೆಗಳು, ಹಾಗೂ ಆತ್ಮಗಳ ಕುರಿತಾದ ಆತನ ಪರಿಕಲ್ಪನೆಗಳನ್ನು ಆಧುನಿಕ ಕಾಲದಲ್ಲಿ ವಿಜ್ಞಾನವೆಂದು ಪರಿಗಣಿಸಲಾಗಿಲ್ಲ. ಸಂತಾನೋತ್ಪತ್ತಿ ಹಾಗೂ ಬೆಳವಣಿಗೆಗೆ ಕಾರಣವಾಗಿರುವ ಒಂದು ಸಸ್ಯಕ ಆತ್ಮವನ್ನು ಸಸ್ಯಗಳು ಹೊಂದಿವೆ; ಚಲನಶೀಲತೆ ಮತ್ತು ಸಂವೇದನೆಗೆ ಕಾರಣವಾಗಿರುವ ಒಂದು ಸಸ್ಯಕ ಹಾಗೂ ಸಂವೇದನಾತ್ಮಕ ಆತ್ಮವನ್ನು ಪ್ರಾಣಿಗಳು ಹೊಂದಿವೆ; ಆಲೋಚನೆ ಹಾಗೂ ಪರ್ಯಾಲೋಚನೆಗಳ ಸಾಮರ್ಥ್ಯವನ್ನು ಹೊಂದಿರುವ ಒಂದು ಸಂವೇದನಾಶೀಲ, ಮತ್ತು ಒಂದು ವೈಚಾರಿಕವಾದ ಆತ್ಮವನ್ನು ಮನುಷ್ಯರು ಹೊಂದಿದ್ದಾರೆ ಎಂದು ದೃಢವಾಗಿ ಹೇಳುವ ಮೂಲಕ, ಜೀವಿಯೊಂದು ಹೊಂದಿರುವ ಆತ್ಮದ ಬಗೆ(ಗಳ) ಕುರಿತಾಗಿ ಆತ ಹೆಚ್ಚು ಒತ್ತು ನೀಡಿದ. ಮುಂಚಿನ ದಾರ್ಶನಿಕರಿಗೆ ತದ್ವಿರುದ್ಧವಾಗಿ, ಆದರೆ ಈಜಿಪ್ಟಿನವರಿಗೆ ಅನುಸಾರವಾಗಿ, ಅರಿಸ್ಟಾಟಲ್ ವೈಚಾರಿಕ ಆತ್ಮವನ್ನು ಮೆದುಳಿನಲ್ಲಿ ಇಡುವುದಕ್ಕೆ ಬದಲಾಗಿ ಹೃದಯದಲ್ಲಿಟ್ಟ. ಆಲ್ಕ್ಮಿಯಾನ್ನ್ನು ಹೊರತುಪಡಿಸಿದರೆ ಹಿಂದಿನ ಎಲ್ಲಾ ದಾರ್ಶನಿಕರ ಸಾರ್ವತ್ರಿಕ ಅಭಿಪ್ರಾಯಗಳಿಗೆ ವಿರುದ್ಧವಾಗಿ ಅರಿಸ್ಟಾಟಲ್ನು ಸಂವೇದನೆ ಮತ್ತು ಆಲೋಚನೆಯನ್ನು ಬೇರೆ ಬೇರೆಯಾಗಿ ವರ್ಗೀಕರಿಸಿದ್ದು ಗಮನಾರ್ಹ ಅಂಶವಾಗಿದೆ.
ಲೈಸಿಯಂಗೆ ಸೇರಿದ, ಅರಿಸ್ಟಾಟಲ್ನ ಉತ್ತರಾಧಿಕಾರಿಯಾದ ಥಿಯೋಫ್ರಾಸ್ಟಸ್, ಸಸ್ಯಶಾಸ್ತ್ರದ ಕುರಿತಾಗಿ ಅನೇಕ ಪುಸ್ತಕಗಳನ್ನು ಬರೆದಿದ್ದು, ಅವುಗಳ ಪೈಕಿ ಹಿಸ್ಟರಿ ಆಫ್ ಪ್ಲಾಂಟ್ಸ್ ಎಂಬ ಪುಸ್ತಕವು ಸಸ್ಯಶಾಸ್ತ್ರಕ್ಕೆ ನೀಡಲಾದ ಅತಿ ಪ್ರಮುಖ ಪ್ರಾಚೀನತೆಯ ಕೊಡುಗೆಯಾಗಿ ಅಸ್ತಿತ್ವ ಕಾಯ್ದುಕೊಂಡಿದ್ದೇ ಅಲ್ಲದೇ, ಅದು ಮಧ್ಯಯುಗಗಳವರೆಗೂ ಮುಂದುವರೆಯಿತು. ಥಿಯೋಫ್ರಾಸ್ಟಸ್ನಿಂದ ಸೂಚಿಸಲ್ಪಟ್ಟ ಹೆಸರುಗಳ ಪೈಕಿ ಅನೇಕ ಹೆಸರುಗಳು ಆಧುನಿಕ ಕಾಲದಲ್ಲೂ ಚಾಲ್ತಿಯಲ್ಲಿವೆ. ಹಣ್ಣಿಗೆ ಕಾರ್ಪೋಸ್ ಎಂಬ ಹೆಸರು, ಬೀಜಕೋಶಕ್ಕೆ ಪೆರಿಕಾರ್ಪಿಯಾನ್ ಎಂಬ ಹೆಸರು ಅಂಥ ಒಂದೆರಡು ಉದಾಹರಣೆಗಳು. ಅರಿಸ್ಟಾಟಲ್ ಮಾಡಿದಂತೆ ಔಪಚಾರಿಕ ಕಾರಣಗಳಿಗೆ ಗಮನ ನೀಡುವ ಬದಲು ಯಾಂತ್ರಿಕಸಿದ್ಧಾಂತಕ್ಕೆ ಅನುಗುಣವಾದ ಒಂದು ಯೋಜನೆ ಅಥವಾ ರೂಪರೇಖೆಯನ್ನು ಥಿಯೋಫ್ರಾಸ್ಟಸ್ ಸೂಚಿಸಿದ. ಸ್ವಾಭಾವಿಕ ಮತ್ತು ಕೃತಕ ಪ್ರಕ್ರಿಯೆಗಳ ನಡುವೆಯಿರುವ ಹೋಲಿಕೆಯನ್ನು ನಿರೂಪಿಸುವ ಮೂಲಕ, ಮತ್ತು ಅರಿಸ್ಟಾಟಲ್ನಪರಿಣಾಮಕಾರಿ ಕಾರಣದ ಪರಿಕಲ್ಪನೆಯನ್ನು ಆಧರಿಸಿ ಈ ಯೋಜನೆಯನ್ನು ಆತ ಸೂಚಿಸಿದ. ಉನ್ನತವರ್ಗದ ಕೆಲವೊಂದು ಸಸ್ಯಗಳ ಸಂತಾನೋತ್ಪತ್ತಿ ಕ್ರಿಯೆಯಲ್ಲಿನ ಲೈಂಗಿಕತೆಯ ಪಾತ್ರವನ್ನು ಆತ ಗುರುತಿಸಿದನಾದರೂ, ಈ ಆವಿಷ್ಕಾರವು ನಂತರದ ಕಾಲಗಳಲ್ಲಿ ಕಳೆದುಹೋಯಿತು.
ಥಿಯೋಫ್ರಾಸ್ಟಸ್ ನಂತರ, ಯಾವುದೇ ಮೂಲ ಕೃತಿಯನ್ನು ಹೊರಹೊಮ್ಮಿಸುವಲ್ಲಿ ಲೈಸಿಯಂ ವಿಫಲಗೊಂಡಿತು. ಅರಿಸ್ಟಾಟಲ್ನ ಪರಿಕಲ್ಪನೆಗಳಲ್ಲಿನ ಆಸಕ್ತಿಯು ಉಳಿದುಕೊಂಡು ಬಂದಿತಾದರೂ ಅವುಗಳನ್ನು ಬಹುಮಟ್ಟಿಗೆ ಪ್ರಶ್ನಾತೀತವಾಗಿ ಸ್ವೀಕರಿಸಲಾಯಿತು. ಟೋಲೆಮೀಸ್ನ ನಿಯಂತ್ರಣದ ಅಡಿಯಲ್ಲಿ ಅಲೆಕ್ಸಾಂಡ್ರಿಯಾವು ಬರುವವರೆಗೂ ಜೀವಶಾಸ್ತ್ರ ಕ್ಷೇತ್ರದಲ್ಲಿ ಮತ್ತೆ ಪ್ರಗತಿಗಳು ಕಂಡುಬರಲಿಲ್ಲ. ಅಲೆಕ್ಸಾಂಡ್ರಿಯಾದ ಚಾಲ್ಸೆಡಾನ್ನ ಹೆರೋಫಿಲಸ್ ಎಂಬ ಮೊಟ್ಟಮೊದಲ ವೈದ್ಯಕೀಯ ಶಿಕ್ಷಕ ಬುದ್ಧಿಮತ್ತೆಯನ್ನು ಮೆದುಳಿನಲ್ಲಿರಿಸಿ, ಚಲನೆ ಮತ್ತು ಸಂವೇದನೆಯೊಂದಿಗೆ ನರಮಂಡಲದ ಸಂಬಂಧವನ್ನು ಕಲ್ಪಿಸುವ ಮೂಲಕ ಅರಿಸ್ಟಾಟಲ್ನ ತಪ್ಪುಗ್ರಹಿಕೆಗಳನ್ನು ಸರಿಪಡಿಸಿದ. ಅಪಧಮನಿಗಳು ಮಿಡಿಯುತ್ತವೆ ಆದರೆ ಅಭಿಧಮನಿಗಳು ಮಿಡಿಯುವುದಿಲ್ಲ ಎಂಬುದನ್ನು ಕಂಡುಕೊಂಡ ಹೆರೋಫಿಲಸ್, ಅವೆರಡರ ನಡುವಿನ ಭೇದವನ್ನೂ ಗುರುತಿಸಿದ. ಲೂಕ್ರೆಟಿಸ್ನಂತಹ ಕೆಲವೊಂದು ಪರಮಾಣು ಸಿದ್ಧಾಂತಿಗಳು ಜೀವನದ ಕುರಿತಾದ ಅರಿಸ್ಟಾಟಲ್ನ ಪರಿಕಲ್ಪನೆಗಳ ಮೂಲಸಂಕಲ್ಪ ಸಿದ್ಧಾಂತದ ದೃಷ್ಟಿಕೋನಕ್ಕೆ ಸವಾಲೆಸೆದರಾದರೂ, ಮೂಲಸಂಕಲ್ಪ ಸಿದ್ಧಾಂತವು (ಮತ್ತು ಕ್ರೈಸ್ತಮತದ ಉದಯವಾದ ನಂತರ, ಪ್ರಾಕೃತ ದೇವತಾಶಾಸ್ತ್ರ) 18ನೇ ಮತ್ತು 19ನೇ ಶತಮಾನಗಳವರೆಗೂ ಜೀವವಿಜ್ಞಾನದ ಚಿಂತನೆಯ ಕೇಂದ್ರಬಿಂದುವಾಗಿಯೇ ಉಳಿಯಿತು. "ಲೂಕ್ರೆಟಿಸ್ ಮತ್ತು ಗೇಲನ್ರ ನಂತರ, ನವೋದಯದವರೆಗೂ ಜೀವಶಾಸ್ತ್ರ ಕ್ಷೇತ್ರದಲ್ಲಿ ಯಾವುದೇ ನಿಜವಾದ ಮಹತ್ತರವಾದ ಕೊಡುಗೆಗಳು ಕಂಡುಬರಲಿಲ್ಲ" ಎಂದು ಅರ್ನ್ಸ್ಟ್ ಮೇಯ್ರ್ ಎಂಬುವವ ವಾದಿಸಿದ್ದಾನೆ. ಪ್ರಕೃತಿ ಚರಿತ್ರೆ ಹಾಗೂ ಔಷಧ ಶಾಸ್ತ್ರದ ಕುರಿತಾದ ಅರಿಸ್ಟಾಟಲ್ನ ಪರಿಕಲ್ಪನೆಗಳು ಉಳಿದುಕೊಂಡು ಬಂದರೂ ಸಹ, ಅವುಗಳನ್ನು ಬಹುಮಟ್ಟಿಗೆ ಪ್ರಶ್ನಾತೀತವಾಗಿ ಸ್ವೀಕರಿಸಲಾಯಿತು.
ನೀತಿಶಾಸ್ತ್ರ ಕೇವಲ ಸೈದ್ಧಾಂತಿಕ ಅಧ್ಯಯನಕ್ಕೆ ಮಾತ್ರವೇ ಮೀಸಲಾಗಿರದೆ ಒಂದು ಪ್ರಾಯೋಗಿಕ ಅಥವಾ ಕಾರ್ಯಸಾಧ್ಯ ಆಯ್ಕೆಯ ರೀತಿಯಲ್ಲಿ, ಅಂದರೆ, ಒಳ್ಳೆಯದಕ್ಕಾಗಿಯೇ ಒಳ್ಳೆಯದನ್ನು ಅರಿಯುವ ಬದಲು ಒಳ್ಳೆಯದನ್ನು ಮಾಡುವುದರ ಕಡೆಗೆ ಗುರಿಯಿಡುವ ರೀತಿಯಲ್ಲಿರಬೇಕು ಎಂದು ಅರಿಸ್ಟಾಟಲ್ ಪರಿಗಣಿಸಿದ. ನೀತಿಶಾಸ್ತ್ರದ ಕುರಿತಾಗಿ ಅತ ಹಲವಾರು ಪ್ರಕರಣ ಗ್ರಂಥಗಳನ್ನು ಬರೆದಿದ್ದು, ನಿಕೋಮೇಕಿಯನ್ ಎಥಿಕ್ಸ್ ಎಂಬ ಅತಿ ಗಮನಾರ್ಹವಾದ ಕೃತಿಯೂ ಅದರಲ್ಲಿ ಸೇರಿದೆ. ಒಂದು ವಿಷಯ ಅಥವಾ ವಸ್ತುವು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕೆಂದರೆ (ಎರ್ಗಾನ್ ), ಅದರಲ್ಲಿ ಸಾಮರ್ಥ್ಯ ಪಾತ್ರ ಬಹಳ ಇರುತ್ತದೆ ಎಂದು ಅರಿಸ್ಟಾಟಲ್ ಬೋಧಿಸಿದ. ಒಂದು ಕಣ್ಣು ನೋಡಬಲ್ಲುದಾದ್ದರಿಂದ ಅಷ್ಟರ ಮಟ್ಟಿಗೆ ಮಾತ್ರವೇ ಒಂದು ಒಳ್ಳೆಯ ಕಣ್ಣಾಗಿದೆ, ಏಕೆಂದರೆ ದೃಷ್ಟಿಯೇ ಕಣ್ಣೊಂದರ ಸೂಕ್ತವಾದ ಕಾರ್ಯ. ಮಾನವರಿಗೆ ವಿಶಿಷ್ಟವಾಗಿರುವ ಕಾರ್ಯವೊಂದನ್ನು ಮಾನವರು ಹೊಂದಿರಬೇಕು, ಮತ್ತು ಈ ಕಾರ್ಯವು ವಿವೇಚನೆಯ ಅನುಸಾರವಾಗಿ ಸೂಚೆ ಯ (psuchē) (ಸಾಮಾನ್ಯವಾಗಿ ಇದನ್ನು ಆತ್ಮ ಎಂಬುದಾಗಿ ಭಾಷಾಂತರಿಸಲಾಗುತ್ತದೆ) ಒಂದು ಚಟುವಟಿಕೆಯಾಗಿರಬೇಕು (ಲೋಗಸ್ ) ಎಂದು ಅರಿಸ್ಟಾಟಲ್ ಪ್ರತಿಪಾದಿಸಿದ. ಆತ್ಮದ ಇಂಥ ಒಂದು ಗರಿಷ್ಟ ಮಟ್ಟದ ಚಟುವಟಿಕೆಯು ಮಾನವನ ಎಲ್ಲಾ ಉದ್ದೇಶಪೂರ್ವಕ ಕ್ರಿಯೆಯ ಗುರಿಯ ರೂಪದಲ್ಲಿ ಅರಿಸ್ಟಾಟಲ್ ಗುರುತಿಸಿದ. ಯುಡೈಮೋನಿಯಾ ಎಂದು ಹೇಳಲಾಗುವ ಈ ಕ್ರಿಯೆಯನ್ನು ಸಾಮಾನ್ಯವಾಗಿ "ಸಂತೋಷ" ಎಂಬುದಾಗಿ ಅಥವಾ ಕೆಲವೊಮ್ಮೆ "ಯೋಗಕ್ಷೇಮ" ಎಂಬುದಾಗಿ ಭಾಷಾಂತರಿಸಲಾಗುತ್ತದೆ. ಈ ರೀತಿಯಾಗಿ ಎಲ್ಲ ಸಮಯದಲ್ಲಿಯೂ ಸಂತೋಷವಾಗಿರುವ ಸಾಮರ್ಥ್ಯವನ್ನು ಹೊಂದಬೇಕೆಂದರೆ, ಅದಕ್ಕೆ ಒಂದು ಉತ್ತಮವಾದ ನಡತೆ ಅತ್ಯವಶ್ಯವಾಗಿ ಬೇಕು. ಇದನ್ನು ಎಥಿಕೆ ಅರೆಟೆ ಎಂದು ಕರೆಯಲಾಗಿದ್ದು, ನಡತೆಯ (ಅಥವಾ ನೈತಿಕ) ಸದ್ಗುಣ (ಅಥವಾ ಉತ್ಕೃಷ್ಟತೆ) ಎಂಬುದು ಇದರ ಭಾವಾರ್ಥವಾಗಿದೆ. ಸದ್ಗುಣಶೀಲ ಮತ್ತು ಶಕ್ತಿಯಿಂದೊಡಗೂಡಿದ ಸಂತೋಷದ ಸ್ವಭಾವವನ್ನು ಸಾಧಿಸಬೇಕೆಂದರೆ, ಸುಯೋಗವನ್ನು ಹೊಂದುವ ಒಂದು ಮೊದಲ ಹಂತವನ್ನು ರೂಢಿಸಿಕೊಳ್ಳುವ ಅಗತ್ಯವಿರುತ್ತದೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡುವುದರ ಬದಲು, ಶಿಕ್ಷಕರಿಂದ, ಮತ್ತು ಅನುಭವದಿಂದ ರೂಢಿಸಿಕೊಳ್ಳಬೇಕಾಗುತ್ತದೆ. ಇದು ಅತ್ಯುತ್ತಮವಾದ ಕೆಲಸಗಳನ್ನೇ ಮಾಡಲು ಪ್ರಜ್ಞಾಪೂರ್ವಕವಾಗಿ ಆರಿಸುವ ಮಟ್ಟಿಗಿನ ಹಂತಕ್ಕೆ ಓರ್ವನನ್ನು ಕೊಂಡೊಯ್ಯುತ್ತದೆ ಎಂಬುದನ್ನು ಅರಿಸ್ಟಾಟಲ್ ಬೋಧಿಸಿದ. ಅತ್ಯುತ್ತಮವಾದ ಜನರು ಈ ರೀತಿಯಲ್ಲಿ ತಮ್ಮ ಜೀವನವನ್ನು ನಡೆಸಲು ಮುಂದಾದಾಗ, ಅವರ ಪ್ರಾಯೋಗಿಕ ಜಾಣ್ಮೆ (ಫ್ರೋನೆಸಿಸ್ ) ಮತ್ತು ಅವರ ಬುದ್ಧಿಶಕ್ತಿ (ನೌಸ್ ) ಪರಸ್ಪರ ಬೆಳೆಯುವುದಲ್ಲದೆ, ಜಾಣ್ಮೆಯ ಅತ್ಯುನ್ನತ ನೈತಿಕ ಸದ್ಗುಣದ ಕಡೆಗೆ ಕೊಂಡೊಯ್ಯುತ್ತದೆ.
ವ್ಯಕ್ತಿಗತವಾಗಿ ಉದ್ದೇಶಿಸಿ ರೂಪಿಸಲಾದ ನೀತಿಶಾಸ್ತ್ರದ ಕುರಿತಾದ ತನ್ನ ಕೃತಿಗಳ ಜೊತೆಗೆ, ಅರಿಸ್ಟಾಟಲ್ ತನ್ನ ಪಾಲಿಟಿಕ್ಸ್ ಕೃತಿಯಲ್ಲಿ ನಗರವನ್ನು ಉದ್ದೇಶಿಸಿ ಬರೆದಿದ್ದಾನೆ. ಅರಿಸ್ಟಾಟಲ್ನ ನಗರದ ಕಲ್ಪನೆಯು ವ್ಯವಸ್ಥಿತ ಅಂಗಗಳಿಂದ ರಚಿತವಾದ ಅಥವಾ ಸುಸಂಘಟಿತ ಸ್ವರೂಪವನ್ನು ಹೊಂದಿದ್ದು, ಈ ರೀತಿಯಲ್ಲಿ ನಗರವನ್ನು ಮೊಟ್ಟಮೊದಲಿಗೆ ಗ್ರಹಿಸಿದವರಲ್ಲಿ ಆತನೂ ಒಬ್ಬ ಎಂದು ಪರಿಗಣಿಸಲಾಗಿದೆ. ನಗರವು ಒಂದು ಸ್ವಾಭಾವಿಕ ಸಮುದಾಯದ ಸ್ವರೂಪದಲ್ಲಿರಬೇಕು ಎಂಬುದು ಅರಿಸ್ಟಾಟಲ್ನ ಪರಿಗಣನೆಯಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ, ವ್ಯಕ್ತಿಗಿಂತ ಕುಟುಂಬ, ಕುಟುಂಬಕ್ಕಿಂತ ನಗರಕ್ಕೆ ಆದ್ಯತೆ ಸಿಗಬೇಕು ಎಂಬುದು ಆತನ ಪರಿಗಣನೆಯಾಗಿತ್ತು. ಅಂದರೆ, ರೂಪುಗೊಳ್ಳುವಿಕೆಯ ಅನುಕ್ರಮದಲ್ಲಿ ನಗರಕ್ಕೆ ಕೊನೆಯ ಸ್ಥಾನ ಸಿಗಬೇಕು, ಇರುವಿಕೆಯ ಅನುಕ್ರಮದಲ್ಲಿ ಅದು ಮೊದಲ ಸ್ಥಾನದಲ್ಲಿರಬೇಕು ಎಂಬುದು ಅರಿಸ್ಟಾಟಲ್ನ ಚಿಂತನೆಯಾಗಿತ್ತು. "ಸ್ವಭಾವಸಿದ್ಧವಾಗಿ ಮನುಷ್ಯ ಒಂದು ರಾಜಕೀಯ ಪ್ರಾಣಿ" ಎಂಬ ತನ್ನ ಹೇಳಿಕೆಗೂ ಆತ ಪ್ರಸಿದ್ಧಿ ಪಡೆದಿದ್ದಾನೆ. ಅರಿಸ್ಟಾಟಲ್ನ ಗ್ರಹಿಕೆಯಲ್ಲಿ ರಾಜಕಾರಣವೆಂದರೆ ಒಂದು ಯಂತ್ರದ ರೀತಿಯಲ್ಲಿ ಇರದೆ, ಸಮಷ್ಟಿಯ ರೀತಿಯಲ್ಲಿ, ಮತ್ತು ಪರಸ್ಪರಾವಲಂಬಿಗಳಾದ ಭಾಗಗಳನ್ನುಳ್ಳ ಒಂದು ಸಂಗ್ರಹಣೆಯ ರೂಪದಲ್ಲಿ ಇರುವುದಾಗಿದೆ. ರಾಜಕೀಯ ಸಮುದಾಯವೊಂದರ ಆಧುನಿಕ ಗ್ರಹಿಕೆಯು ರಾಜ್ಯಕ್ಕೆ ಸಂಬಂಧಿಸಿದಂತೆ ಇರುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕು. ಆದರೂ, ರಾಜ್ಯ ಎಂಬುದು ಅರಿಸ್ಟಾಟಲ್ಗೆ ಪರಕೀಯವಾಗಿತ್ತು. ಆತ ನಗರಗಳನ್ನು ರಾಜಕೀಯ ಸಮುದಾಯಗಳೊಂದಿಗೆ ಸಮೀಕರಿಸಿದ. ನಗರವೊಂದನ್ನು ಒಂದು ರಾಜಕೀಯ "ಪಾಲುದಾರಿಕೆ"ಯಂತೆ ಅರಿಸ್ಟಾಟಲ್ ಅರ್ಥೈಸಿಕೊಂಡಿದ್ದ. ತರುವಾಯ, ನಗರವೊಂದು ಸೃಷ್ಟಿಯಾಯಿತು. ಈ ಸೃಷ್ಟಿಯು ಅನ್ಯಾಯವನ್ನು ತಡೆವುದಕ್ಕಾಗಿಯಾಗಲೀ ಅಥವಾ ಆರ್ಥಿಕ ಸ್ಥಿರತೆಗಾಗಿಯಾಗಲೀ ಆಗಲಿಲ್ಲ, ಬದಲಿಗೆ ಒಂದು ಉತ್ತಮ ಜೀವನವನ್ನು ಸಾಗಿಸುವ ಉದ್ದೇಶದಿಂದ ಆಯಿತು: "ಆದ್ದರಿಂದ, ರಾಜಕೀಯ ಪಾಲುದಾರಿಕೆಯನ್ನು ಉದಾತ್ತವಾದ ಕ್ರಿಯೆಗಳಿಗಾಗಿ ಬದುಕುವ ವ್ಯವಸ್ಥೆಯಂತೆ ಪರಿಗಣಿಸಬೇಕೇ ಹೊರತು, ಒಟ್ಟಾಗಿ ಜೀವಿಸುವುದರ ಸಲುವಾಗಿ ಪರಿಗಣಿಸಬಾರದು" ಇದನ್ನು ಸಾಮಾಜಿಕ ಒಪ್ಪಂದದ ಸಿದ್ಧಾಂತದಿಂದ ಪ್ರತ್ಯೇಕಿಸಬಹುದು. "ಹಿಂಸಾತ್ಮಕ ಸಾವಿನ ಭಯ" ಅಥವಾ ಇದರ "ಅನನುಕೂಲತೆಗಳ" ಕಾರಣದಿಂದಾಗಿ ವ್ಯಕ್ತಿಗಳು ಈ ಸಿದ್ಧಾಂತದ ಸ್ವರೂಪದ ಸ್ಥಿತಿಯನ್ನು ಬಿಟ್ಟುಬಿಡುತ್ತಾರೆ.
ಮಹಾಕಾವ್ಯದ ಕವಿತೆ, ದುರಂತ ನಾಟಕ, ಹಾಸ್ಯ ನಾಟಕ, ಆವೇಶಭಾವದ ಕವಿತೆ ಮತ್ತು ಸಂಗೀತ ಇದೇ ಮೊದಲಾದವು ಅನುಕರಣಾತ್ಮಕವಾಗಿರಬೇಕು; ಮತ್ತು ಮಾಧ್ಯಮ, ಗುರಿ, ಹಾಗೂ ಸ್ವರೂಪದಲ್ಲಿ ಪ್ರತಿಯೊಂದೂ ಭಿನ್ನವಾಗಿರಬೇಕು ಎಂದು ಅರಿಸ್ಟಾಟಲ್ ಪರಿಗಣಿಸಿದ್ದ. ಉದಾಹರಣೆಗೆ, ತಾಳ ಮತ್ತು ಸ್ವರಮೇಳದ ಮಾಧ್ಯಮಗಳನ್ನು ಸಂಗೀತವು ಅನುಕರಿಸುತ್ತದೆ. ಅದೇ ರೀತಿಯಲ್ಲಿ ನೃತ್ಯವು ತಾಳವನ್ನು ಏಕಾಕಿಯಾಗಿಯೂ, ಮತ್ತು ಕವಿತೆಯನ್ನು ಭಾಷೆಯೊಂದಿಗೂ ಅನುಕರಿಸುತ್ತದೆ. ಸ್ವರೂಪಗಳು ಸಹ ತಮ್ಮ ಅನುಕರಣೆಯ ಗುರಿಯಲ್ಲಿ ಭಿನ್ನವಾಗಿರುತ್ತವೆ. ಉದಾಹರಣೆಗೆ ಹಾಸ್ಯ ನಾಟಕವನ್ನು ತೆಗೆದುಕೊಂಡರೆ, ಸಾಮಾನ್ಯ ಮಟ್ಟಕ್ಕಿಂತ ಕಳಪೆಯಾಗಿರುವ ಮನುಷ್ಯರ ನಾಟಕೀಯ ಅನುಕರಣೆಯೇ ಹಾಸ್ಯವಾಗಿರುತ್ತದೆ; ಆದರೆ ದುರಂತ ನಾಟಕವು ಸಾಮಾನ್ಯ ಮಟ್ಟಕ್ಕಿಂತ ಕೊಂಚ ಉತ್ತಮವಾಗಿರುವ ಮನುಷ್ಯರನ್ನು ಅನುಕರಿಸುತ್ತದೆ. ಕೊನೆಯದಾಗಿ, ಸ್ವರೂಪಗಳು ತಮ್ಮ ಅನುಕರಣೆಯ ವಿಧಾನದಲ್ಲಿ ಭಿನ್ನವಾಗಿರುತ್ತವೆ. ಅನುಕರಣೆಯ ವಿಧಾನವು ಕಥನರೂಪದಲ್ಲಿರಬಹುದು ಅಥವಾ ಪಾತ್ರದ ರೂಪದಲ್ಲಿರಬಹುದು, ಬದಲಾವಣೆಯ ಮೂಲಕವಿರಬಹುದು ಅಥವಾ ಬದಲಾವಣೆ ಇಲ್ಲದೆಯೇ ಇರಬಹುದು ಮತ್ತು ನಾಟಕದ ರೂಪದಲ್ಲಿರಬಹುದು ಅಥವಾ ನಾಟಕವಿಲ್ಲದೆಯೇ ಇರಬಹುದು. ಅನುಕರಣೆ ಎಂಬುದು ಮಾನವಕುಲಕ್ಕೆ ಸಹಜವಾದ ಅಭ್ಯಾಸ ಮತ್ತು ಪ್ರಾಣಿಗಳಿಗಿಂತ ಮೇಲ್ಮಟ್ಟದಲ್ಲಿ ನಿಲ್ಲುವಲ್ಲಿ ಮಾನವಕುಲದೊಂದಿಗೆ ಇರುವ ಪ್ರಯೋಜನಗಳಲ್ಲಿ ಅದೂ ಒಂದು ಎಂಬುದನ್ನು ಅರಿಸ್ಟಾಟಲ್ ನಂಬಿದ್ದ. ಅರಿಸ್ಟಾಟಲ್ನ ಪೊಯೆಟಿಕ್ಸ್ ಪ್ರಕರಣ ಗ್ರಂಥವು ಎರಡು ಪುಸ್ತಕಗಳನ್ನು ಒಳಗೊಂಡಿದೆ ಎಂದು ನಂಬಲಾಗಿದ್ದು, ಅವುಗಳಲ್ಲೊಂದು ಹಾಸ್ಯ ನಾಟಕಕ್ಕೆ ಸಂಬಂಧಿಸಿದ್ದರೆ, ಮತ್ತೊಂದು ದುರಂತ ನಾಟಕಕ್ಕೆ ಸಂಬಂಧಿಸಿದ ಕೃತಿಯಾಗಿದೆ. ಆದರೆ, ದುರಂತ ನಾಟಕದ ವಿಷಯವನ್ನೊಳಗೊಂಡ ಭಾಗ ಮಾತ್ರವೇ ಉಳಿದುಕೊಂಡಿದೆ. ಕಥಾವಸ್ತುವಿನ-ಸ್ವರೂಪ, ಪಾತ್ರ, ಶೈಲಿ, ದೃಶ್ಯ, ಹಾಗೂ ಹಾಡುವಂಥ ಕವಿತೆ ಎಂಬ ಆರು ಘಟಕಗಳನ್ನು ದುರಂತ ನಾಟಕವು ಒಳಗೊಂಡಿದೆ ಎಂಬುದನ್ನು ಅರಿಸ್ಟಾಟಲ್ ಬೋಧಿಸಿದ. ದುರಂತ ನಾಟಕವೊಂದರಲ್ಲಿನ ಪಾತ್ರಗಳು ಕೇವಲ ಕಥೆಯನ್ನು ಮುಂದಕ್ಕೆ ಸಾಗಿಸುವ ಒಂದು ಸಾಧನವಾಗಿರುತ್ತವೆ ಮತ್ತು ದುರಂತ ನಾಟಕದಲ್ಲಿ ಕಥಾವಸ್ತುವು ಮುಖ್ಯ ಕೇಂದ್ರಬಿಂದುವಾಗಿರುತ್ತದೆಯೇ ವಿನಃ, ಪಾತ್ರಗಳಲ್ಲ. ದುರಂತ ನಾಟಕವೆಂಬುದು ಕರುಣೆ ಮತ್ತು ಭಯವನ್ನು ಉಂಟುಮಾಡುವ ಕ್ರಿಯೆಯ ಅನುಕರಣೆಯಾಗಿದೆ, ಮತ್ತು ಅದೇ ಭಾವಗಳ ಹೊರಹಾಕುವಿಕೆಯ ಮೇಲೆ ಪರಿಣಾಮ ಬೀರುವ ಉದ್ದೇಶವುಳ್ಳದ್ದಾಗಿದೆ. ಮಹಾಕಾವ್ಯ ಅಥವಾ ದುರಂತ ನಾಟಕದ ರೂಪಸಾದೃಶ್ಯದಲ್ಲಿ ಯಾವುದು ಶ್ರೇಷ್ಟ ಎಂಬ ಚರ್ಚೆಯೊಂದಿಗೆ ಪೊಯೆಟಿಕ್ಸ್ ಪ್ರಕರಣ ಗ್ರಂಥವನ್ನು ಅರಿಸ್ಟಾಟಲ್ ಸಮಾಪ್ತಗೊಳಿಸುತ್ತಾನೆ. ಮಹಾಕಾವ್ಯವೊಂದರ ಎಲ್ಲಾ ವಿಶೇಷಣಗಳನ್ನೂ, ಇನ್ನೂ ಸರಿಯಾಗಿ ಹೇಳಬೇಕೆಂದರೆ ದೃಶ್ಯ ಮತ್ತು ಸಂಗೀತದಂಥ ಹೆಚ್ಚುವರಿ ವಿಶೇಷಣಗಳನ್ನು ದುರಂತ ನಾಟಕವು ಒಳಗೊಂಡಿರುತ್ತದೆಯಾದ್ದರಿಂದ, ಅದು ಹೆಚ್ಚು ಏಕಪ್ರಕಾರವಾದದ್ದಾಗಿರುತ್ತದೆ. ಜೊತೆಗೆ, ಅದರ ರೂಪಸಾದೃಶ್ಯದ ಗುರಿಯನ್ನು ಲಭ್ಯವಿರುವ ಅಲ್ಪವ್ಯಾಪ್ತಿಯಲ್ಲೇ ಸಾಧಿಸುತ್ತದೆಯಾದ್ದರಿಂದ, ಅದು ಮಹಾಕಾವ್ಯಕ್ಕೂ ಮೇಲ್ಮಟ್ಟದಲ್ಲಿದೆ ಎಂದು ಪರಿಗಣಿಸಬಹುದು ಎಂದು ಆತ ಹೇಳುತ್ತಾನೆ. ಅರಿಸ್ಟಾಟಲ್, ಒಗಟುಗಳು, ಜನಶ್ರುತಿ, ಮತ್ತು ನಾಣ್ಣುಡಿಗಳ ಓರ್ವ ತೀವ್ರಾಸಕ್ತ ಸುವ್ಯವಸ್ಥಿತ ಸಂಗ್ರಾಹಕನಾಗಿದ್ದ; ಆತನಿಗೆ ಮತ್ತು ಆತನ ಶಾಲೆಗೆ ಭವಿಷ್ಯವಾಣಿಯ ಪ್ರಶ್ನಸ್ಥಾನದ ಒಗಟುಗಳಲ್ಲಿ ಒಂದು ವಿಶೇಷವಾದ ಆಸಕ್ತಿಯಿತ್ತು. ಈಸೋಪನ ಕಲ್ಪಿತಕಥೆಗಳನ್ನೂ ಆತ ಅಧ್ಯಯನ ಮಾಡಿದ.
ಅರಿಸ್ಟಾಟಲ್ನೊಂದಿಗೇ ಹುಟ್ಟಿಕೊಳ್ಳುವ ಒಂದು ವೈಲಕ್ಷಣ್ಯದ ಅನುಸಾರ, ಅವನ ಬರಹಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಅವೆಂದರೆ, "ಸರ್ವಗ್ರಾಹ್ಯ" ಸ್ವರೂಪದವು ಮತ್ತು "ರಹಸ್ಯಾರ್ಥದ" ಸ್ವರೂಪದವು. ಸಾರ್ವಜನಿಕರಿಗಾಗಿ ಮೀಸಲಾದ (ಸರ್ವಗ್ರಾಹ್ಯ) ಕೃತಿಗಳು, ಹಾಗೂ ಹೆಚ್ಚು ತಾಂತ್ರಿಕ ಸ್ವರೂಪದ (ರಹಸ್ಯಾರ್ಥದ) ಕೃತಿಗಳ ನಡುವಿನ ಒಂದು ವೈಲಕ್ಷಣ್ಯವಾಗಿ ಇದನ್ನು ಅನೇಕ ವಿದ್ವಾಂಸರು ಗುರುತಿಸಿದ್ದಾರೆ. ಪ್ಲೇಟೋವಿನ ಮತ್ತು ಅರಿಸ್ಟಾಟಲ್ನ ಪಂಥಗಳಿಗೆ ವಿಶಿಷ್ಟವಾಗಿರುವ ಪರಿಭಾಷೆ ಹಾಗೂ ಚರ್ಚಾವಿಷಯಗಳ ನಿಕಟ ಪರಿಚಯವನ್ನು ಹೊಂದಿರುವ ಅರಿಸ್ಟಾಟಲ್ನ ವಿದ್ಯಾರ್ಥಿಗಳು ಹಾಗೂ ಇತರ ದಾರ್ಶನಿಕರನ್ನು ಒಳಗೊಂಡ ಪರಿಮಿತ ಕೇಳುಗರನ್ನು ಉದ್ದೇಶಿಸಿ ರಹಸ್ಯಾರ್ಥದ ಅಥವಾ ಹೆಚ್ಚು ತಾಂತ್ರಿಕ ಸ್ವರೂಪದ ಕೃತಿಗಳನ್ನು ಆತ ಮೀಸಲಿರಿಸಿದ್ದ ಎಂಬುದು ಈ ವಿದ್ವಾಂಸರ ಅಭಿಪ್ರಾಯ. ಆತನ ಸರ್ವಗ್ರಾಹ್ಯ ಕೃತಿಗಳ ಪೈಕಿ ಯಾವುದೂ ಈಗ ಅಸ್ತಿತ್ವದಲ್ಲಿ ಇಲ್ಲ; ಅಸ್ತಿತ್ವದಲ್ಲಿರುವ ಅರಿಸ್ಟಾಟಲ್ನ ಬರಹಗಳೆಲ್ಲವೂ ರಹಸ್ಯಾರ್ಥದ ಸ್ವರೂಪವನ್ನು ಹೊಂದಿವೆ ಎಂಬುದು ಚಾಲ್ತಿಯಲ್ಲಿರುವ ಮತ್ತೊಂದು ಸಾಮಾನ್ಯ ಕಲ್ಪನೆ. ನಿಖರವಾಗಿ ಸರ್ವಗ್ರಾಹ್ಯ ಬರಹಗಳಂತಿದ್ದವು ಎಂದು ಹೇಳಲಾದವುಗಳ ಕುರಿತಾದ ಸದ್ಯದ ಅರಿವು ಅರೆಕೊರೆ ಮತ್ತು ಅಸ್ಪಷ್ಟವಾಗಿದ್ದರೂ, ಅವುಗಳಲ್ಲಿ ಅನೇಕ ಬರಹಗಳು ಸಂಭಾಷಣೆಯ ಸ್ವರೂಪದಲ್ಲಿವೆ. (ಅರಿಸ್ಟಾಟಲ್ನ ಸಂಭಾಷಣೆಗಳ ಒಂದಷ್ಟು ಅವಶಿಷ್ಟ ಭಾಗಗಳು ಉಳಿದುಕೊಂಡಿವೆ.) ಅರಿಸ್ಟಾಟಲ್ನ ಬರವಣಿಗೆಯ ಶೈಲಿಯನ್ನು "ಬಂಗಾರದ ಒಂದು ನದಿ" ಎಂದು ಸಿಸೆರೊ ಸೂಚಿಸಿರುವುದು ಪ್ರಾಯಶಃ ಈ ಕೃತಿಗಳಿಗೆ ಸಂಬಂಧಿಸಿದಂತೆಯೇ ಇರಬೇಕು; ಪ್ರಸ್ತುತ ನಮಗೆ ಲಭ್ಯವಿರುವ ಆ ಕೃತಿಗಳ ಶೈಲಿಯನ್ನು ಒಬ್ಬರು ಅಷ್ಟು ಗಂಭೀರವಾಗಿ ಹೊಗಳುತ್ತಾರೆಂಬುದು ಅನೇಕ ಆಧುನಿಕ ಓದುಗರಿಗೆ ಅರಗಿಸಿಕೊಳ್ಳಲಾಗದ ವಿಷಯವಾಗಿದೆ. ಆದಾಗ್ಯೂ, ಸಿಸೆರೋನ ಹೊಗಳಿಕೆಗಳು ನಿರ್ದಿಷ್ಟವಾಗಿ ಸರ್ವಗ್ರಾಹ್ಯ ಕೃತಿಗಳಿಗಷ್ಟೇ ಮೀಸಲಾಗಿವೆಯೇ ಎಂಬುದನ್ನು ನಾವು ಖಚಿತವಾಗಿ ತಿಳಿಯಲು ಸಾಧ್ಯವಿಲ್ಲ ಎಂದು ಕೆಲವೊಂದು ಆಧುನಿಕ ವಿದ್ವಾಂಸರು ಎಚ್ಚರಿಸಿದ್ದಾರೆ; ಅರಿಸ್ಟಾಟಲ್ನ ಲಭ್ಯವಿರುವ ಕೃತಿಗಳಲ್ಲಿ ಕಂಡುಬಂದಿರುವ ಸಂಕ್ಷಿಪ್ತರೂಪದ ಬರವಣಿಗೆಯ ಶೈಲಿಯ ಕುರಿತು ಕೆಲವೇ ಕೆಲವು ಆಧುನಿಕ ವಿದ್ವಾಂಸರು ವಾಸ್ತವವಾಗಿ ಮೆಚ್ಚುಗೆ ಸೂಚಿಸಿದ್ದಾರೆ. ಎಲ್ಲಾ ಸರ್ವಗ್ರಾಹ್ಯ ಬರಹಗಳೂ ಕಳೆದುಹೋದದ್ದು ಹೇಗೆ, ಮತ್ತು ಈಗ ನಮ್ಮ ಬಳಿಯಿರುವ ಬರಹಗಳು ನಮಗೆ ಬಂದದ್ದು ಹೇಗೆ? ಎಂಬುದೇ ಅರಿಸ್ಟಾಟಲ್ನ ಕೃತಿಗಳ ಇತಿಹಾಸಕ್ಕೆ ಸಂಬಂಧಿಸಿ ಆಗ ಉದ್ಭವಿಸುವ ಒಂದು ಪ್ರಮುಖ ಪ್ರಶ್ನೆ. ರಹಸ್ಯಾರ್ಥದ ಪ್ರಕರಣ ಗ್ರಂಥಗಳ ಮೂಲ ಹಸ್ತಪ್ರತಿಗಳ ವೃತ್ತಾಂತವನ್ನು ಸ್ಟ್ರಾಬೋ ತನ್ನ ಜಿಯಾಗ್ರಫಿ ಕೃತಿಯಲ್ಲಿ ಮತ್ತು ಪ್ಲುಟಾರ್ಕ್ ತನ್ನ ಪ್ಯಾರಲಲ್ ಲೈವ್ಸ್ ವಿವರಿಸಿದ್ದಾರೆ. ಈ ಹಸ್ತಪ್ರತಿಗಳನ್ನು ಅರಿಸ್ಟಾಟಲ್ ತನ್ನ ಉತ್ತರಾಧಿಕಾರಿ ಥಿಯೋಫ್ರಾಸ್ಟಸ್ಗೆ ಬಿಟ್ಟುಹೋದರೆ, ಆತ ಅವನ್ನು ಸ್ಕೆಪ್ಸಿಸ್ನ ನೆಲಿಯಸ್ಗೆ ಉಯಿಲು ಮಾಡಿಟ್ಟು ಹೋದ. ಎಣಿಕೆಯ ಪ್ರಕಾರ, ನೆಲಿಯಸ್ ಈ ಬರಹಗಳನ್ನು ಅಥೆನ್ಸ್ನಿಂದ ಸ್ಕೆಪ್ಸಿಸ್ಗೆ ತೆಗೆದುಕೊಂಡು ಹೋದ. ಅಲ್ಲಿ ಅವನ ವಾರಸುದಾರರು ನೆಲಮಾಳಿಗೆಯೊಂದರಲ್ಲಿ ಅವನ್ನು ದುಸ್ಥಿತಿಯಲ್ಲಿರಿಸಿದರು. ಮೊದಲನೇ ಶತಮಾನದ BCಯ ಹೊತ್ತಿಗೆ ಟಿಯೋಸ್ನ ಅಪೆಲ್ಲಿಕಾನ್ ಹಸ್ತಪ್ರತಿಗಳನ್ನು ಪತ್ತೆಹಚ್ಚಿ ಖರೀದಿಸಿ ಅಥೆನ್ಸ್ಗೆ ಮರಳಿ ತಂದ. ವೃತ್ತಾಂತದ ಪ್ರಕಾರ, ನೆಲಮಾಳಿಗೆಯಲ್ಲಿ ಇದ್ದ ಅವಧಿಯಲ್ಲಿ ಹಸ್ತಪ್ರತಿಗಳಿಗೆ ಆದ ಹಾನಿಯನ್ನು ದುರಸ್ತಿ ಮಾಡಲು ಅಪೆಲ್ಲಿಕಾನ್ ಪ್ರಯತ್ನಿಸಿದ್ದರಿಂದ ಅಸಂಖ್ಯಾತ ತಪ್ಪುಗಳು ಮೂಲಪಾಠದಲ್ಲಿ ನುಸುಳುವಂತಾಯಿತು. 86 BCಯಲ್ಲಿ ಲೂಸಿಯಸ್ ಕಾರ್ನೇಲಿಯಸ್ ಸುಲ್ಲಾ ಅಥೆನ್ಸ್ನ್ನು ಆಕ್ರಮಿಸಿದಾಗ, ಅಪೆಲ್ಲಿಕಾನ್ನ ಗ್ರಂಥಾಲಯವನ್ನು ರೋಮ್ಗೆ ಆತ ಹೊತ್ತುಕೊಂಡು ಹೋದ. ಅಲ್ಲಿ, 60 BCಯಲ್ಲಿ ಮೊದಲು ಅಮಿಸಸ್ನ ಟೈರಾನ್ನಿಯನ್ ಎಂಬ ಭಾಷಾಪಂಡಿತನಿಂದ ಮತ್ತು ನಂತರ ರೋಡ್ಸ್ನ ಆಂಡ್ರೋನಿಕಸ್ ಎಂಬ ದಾರ್ಶನಿಕನಿಂದ ಅವು ಪ್ರಕಟಗೊಂಡಿದ್ದವು.[ಸೂಕ್ತ ಉಲ್ಲೇಖನ ಬೇಕು] "ಮೂರನೇ ಶತಮಾನದ ಮಧ್ಯದ ಅವಧಿಯ ನಂತರ ಅರಿಸ್ಟಾಟಲ್ ಸಿದ್ಧಾಂತದ ಶಾಲೆಯ ಕ್ಷಿಪ್ರ ಕಳೆಗುಂದುವಿಕೆಗೆ, ಮತ್ತು ಅಲೆಕ್ಸಾಂಡರನ ಕಾಲದ ನಂತರದ ಅವಧಿಯಾದ್ಯಂತ ಅರಿಸ್ಟಾಟಲ್ನ ವಿಶೇಷೀಕರಿಸಿದ ಪ್ರಕರಣ ಗ್ರಂಥಗಳ ವ್ಯಾಪಕ ಜ್ಞಾನವು ಇಲ್ಲದಿರುವುದಕ್ಕಷ್ಟೇ ಅಲ್ಲದೇ, ಮೊದಲನೇ ಶತಮಾನದ B.C.ಯ ಅವಧಿಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಅರಿಸ್ಟಾಟಲ್ ಸಿದ್ಧಾಂತವೊಂದರ ಹಠಾತ್ ಪುನರ್ದರ್ಶನಕ್ಕೆ ಇದು ಅತ್ಯಂತ ಸಮಂಜಸವೆಂದು ತೋರುವ ವಿವರಣೆಯನ್ನು" ಒದಗಿಸುತ್ತದೆ ಎಂಬ ಅಂಶವು ಈ ವೃತ್ತಾಂತದಲ್ಲಿನ ಜನಪ್ರಿಯ ನಂಬಿಕೆಗೆ ಕಾರಣ ಎಂದು ಕಾರ್ನೆಸ್ ಲಾರ್ಡ್ ಹೇಳುತ್ತಾನೆ. ಆದಾಗ್ಯೂ, ಈ ವೃತ್ತಾಂತಕ್ಕೆ ಸಂಬಂಧಿಸಿದಂತಿರುವ ಅಸಂಖ್ಯಾತ ವಿನಾಯಿತಿಗಳನ್ನು ಲಾರ್ಡ್ ಪ್ರಸ್ತಾವಿಸುತ್ತಾನೆ. ಮೊದಲಿಗೆ, ಗಣನೀಯ ಪ್ರಮಾಣದಲ್ಲಿ ಹಾನಿಗೊಳಗಾಗಿ ನಂತರ ಅದರ ದುರಸ್ತಿಗೆ ಸಂಬಂಧಿಸಿದ ಅಪೆಲ್ಲಿಕಾನ್ನ ಕುಶಲತೆಯಿಲ್ಲದ ಪ್ರಯತ್ನದ ನಂತರವೂ ಮೂಲಪಾಠಗಳ ಸ್ಥಿತಿಯು ಹೆಚ್ಚು ಉತ್ತಮವಾಗಿದೆ. ಎರಡನೆಯದಾಗಿ, ಲಾರ್ಡ್ ಹೇಳುವ ಪ್ರಕಾರ, ಸ್ಕೆಪ್ಸಿಸ್ನಲ್ಲಿನ ನೆಲಮಾಳಿಗೆಯಲ್ಲಿ ಅವುಗಳನ್ನು ಬಂಧಿಸಿಡಲಾಗಿತ್ತು ಎಂದು ಸ್ಟ್ರಾಬೋ ಮತ್ತು ಪ್ಲುಟಾರ್ಕ್ ಸೂಚಿಸುವ ಸಮಯದ ಅವಧಿಯಲ್ಲಿ ಆ ಪ್ರಕರಣ ಗ್ರಂಥಗಳು ಚಲನೆ ಅಥವಾ ಪ್ರಸರಣದಲ್ಲಿದ್ದವು ಎಂಬುದಕ್ಕೆ "ನಿರ್ವಿವಾದವಾದ ಸಾಕ್ಷ್ಯ"ವಿದೆ. ಮೂರನೆಯದಾಗಿ, ಆಂಡ್ರೋನಿಕಸ್ನು ತನ್ನ ಮೂಲಪಾಠಗಳನ್ನು ಸಂಕಲಿಸಿದ ಎಂದು ಸಾಮಾನ್ಯವಾಗಿ ಭಾವಿಸಿರುವುದಕ್ಕೆ ಸುಮಾರು ಐವತ್ತು ವರ್ಷಗಳ ಹಿಂದೆಯೇ ಅರಿಸ್ಟಾಟಲ್ನ ಮೂಲಪಾಠಗಳ ವಿಶ್ವಾಸಾರ್ಹ ಆವೃತ್ತಿಗಳು ಅಥೆನ್ಸ್ನಲ್ಲಿ ರೂಪುಗೊಂಡಿರುವಂತೆ ತೋರುತ್ತವೆ. ಮತ್ತು ನಾಲ್ಕನೆಯದಾಗಿ, ಆಂಡ್ರೋನಿಕಸ್ನ ಹಸ್ತಕ್ಷೇಪಕ್ಕೆ ಹಿಂದಿನ ತಾರೀಖಿನ ಪ್ರಾಚೀನ ಗ್ರಂಥಾಲಯದ ಅನುಕ್ರಮಣಿಕೆಗಳು ಪ್ರಸ್ತುತ ನಾವು ಈಗ ಹೊಂದಿರುವ ಆವೃತ್ತಿಯನ್ನು ಹೋಲುವ ಅರಿಸ್ಟಾಟಲ್ನ ಮೂಲದ್ರವ್ಯವನ್ನು ಪಟ್ಟಿಯಲ್ಲಿ ಸೇರಿಸುತ್ತವೆ. ಉದಾಹರಣೆಗೆ, ಪಾಲಿಟಿಕ್ಸ್ ಕೃತಿಯಲ್ಲಿ ಅರಿಸ್ಟಾಟಲ್ನ ತರುವಾಯ ಸೇರ್ಪಡೆಯಾದ ಅಸಂಖ್ಯಾತ ಪ್ರಕ್ಷೇಪಣಗಳನ್ನು (ಅಂದರೆ, ಸುಳ್ಳು ಮಾಹಿತಿಗಳ ಸೇರ್ಪಡೆಯನ್ನು) ಲಾರ್ಡ್ ಕಾಣುತ್ತಾನಾದರೂ, ಸದರಿ ಕೃತಿಯು ಸಾಕಷ್ಟು ಅಖಂಡವಾಗಿರುವ ಸ್ಥಿತಿಯಲ್ಲಿ ನಮಗೆ ದೊರೆತಿದೆ ಎಂದು ಬಹುಮಟ್ಟಿಗೆ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತಾನೆ. ಆಂಶಿಕವಾಗಿ ಕ್ರೆಮೋನಾದ ಗೆರಾರ್ಡ್ನ ಭಾಷಾಂತರದ ಮತ್ತು ಅವೆರೊ ಸಿದ್ಧಾಂತದ ಹಬ್ಬುವಿಕೆಯ ಕಾರಣದಿಂದಾಗಿ ಫಾಲ್ಸಫಾ [clarification needed] ಕೃತಿಯ ಪ್ರಭಾವವು ಪಶ್ಚಿಮದಲ್ಲಿ ಬೆಳೆದಂತೆ ಅರಿಸ್ಟಾಟಲ್ನ ಕೃತಿಗಳ ಬೇಡಿಕೆಯೂ ಬೆಳೆಯಿತು. ಮೋರ್ಬೀಕ್ನ ವಿಲಿಯಂ ಅವುಗಳ ಪೈಕಿ ಬಹಳಷ್ಟನ್ನು ಲ್ಯಾಟಿನ್ಗೆ ಭಾಷಾಂತರಿಸಿದ. ಮೋರ್ಬೀಕ್ನ ಭಾಷಾಂತರಗಳಿಂದ ಪ್ರೇರಿತನಾಗಿ ದೇವತಾಶಾಸ್ತ್ರದ ಕುರಿತಾದ ಕೃತಿಯನ್ನು ಥಾಮಸ್ ಆಕ್ವಿನಾಸ್ ಬರೆದಾಗ, ಅರಿಸ್ಟಾಟಲ್ನ ಬರಹಗಳಿಗೆ ಬೇಡಿಕೆ ಹೆಚ್ಚಾಯಿತು ಮತ್ತು ಗ್ರೀಕ್ ಹಸ್ತಪ್ರತಿಗಳು ಪಶ್ಚಿಮಕ್ಕೆ ಹಿಂದಿರುಗಿದವು. ಇದರಿಂದಾಗಿ ಯುರೋಪ್ನಲ್ಲಿ ಅರಿಸ್ಟಾಟಲ್ ಸಿದ್ಧಾಂತದ ಒಂದು ಪುನರುಜ್ಜೀವನಕ್ಕೆ ಪ್ರಚೋದನೆ ಸಿಕ್ಕಿತು. ಅಂತಿಮವಾಗಿ ನವೋದಯದ ಕೆಂಡಕ್ಕೆ ಗಾಳಿಹಾಕುವುದಕ್ಕಾಗಿ, ಸ್ಪೇನ್ನಲ್ಲಿನ ಮುಸ್ಲಿಂ ಪ್ರಭಾವದ ಮೂಲಕ ಇದು ಐರೋಪ್ಯ ಚಿಂತನೆಗೆ ಹೊಸ ಚೈತನ್ಯವನ್ನು ನೀಡಿತು.[ಸೂಕ್ತ ಉಲ್ಲೇಖನ ಬೇಕು]
ಆತನ ಮರಣದ ಇಪ್ಪತ್ತ್ಮೂರು ವರ್ಷಗಳ ನಂತರವೂ, ಅರಿಸ್ಟಾಟಲ್ ಎಂದೆಂದಿಗೂ ಇರುವ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪೈಕಿ ಒಬ್ಬನಾಗಿ ಉಳಿದಿದ್ದಾನೆ. ಆತ ಔಪಚಾರಿಕ ತರ್ಕಶಾಸ್ತ್ರದ ಸಂಸ್ಥಾಪಕನಾಗಿದ್ದ, ಜೀವಶಾಸ್ತ್ರದ ಅಧ್ಯಯನದ ಪಥನಿರ್ಮಾಪಕನಾಗಿದ್ದ. ಅಷ್ಟೇ ಅಲ್ಲ, ವೈಜ್ಞಾನಿಕ ವಿಧಾನಕ್ಕೆ ತಾನು ನೀಡಿದ ಕೊಡುಗೆಗಳ ಮೂಲಕ, ಭವಿಷ್ಯದ ಪ್ರತಿಯೊಬ್ಬ ವಿಜ್ಞಾನಿ ಮತ್ತು ದಾರ್ಶನಿಕನೂ ತನಗೆ ಋಣಿಯಾಗಿರುವಂತೆ ಮಾಡಿದ ಮಹೋನ್ನತ ಸಾಧನೆ ಅವನದು. ಈ ಗೌರವಗಳ ಹೊರತಾಗಿಯೂ, ಅರಿಸ್ಟಾಟಲ್ನ ಅನೇಕ ತಪ್ಪುಗಳು ವಿಜ್ಞಾನವನ್ನು ಗಣನೀಯ ಪ್ರಮಾಣದಲ್ಲಿ ವಿಜ್ಞಾನವನ್ನು ಹಿಂದೆ ಸೆಳೆದಿವೆ. ಹೆಚ್ಚೂಕಮ್ಮಿ ಪ್ರತಿಯೊಂದು ಗಂಭೀರ ಸ್ವರೂಪದ ಬೌದ್ಧಿಕ ಪ್ರಗತಿಯೂ ಅರಿಸ್ಟಾಟಲ್ನ ಕೆಲವೊಂದು ಸಿದ್ಧಾಂತದ ಮೇಲಿನ ಒಂದು ಆಕ್ರಮಣದೊಂದಿಗೇ ಪ್ರಾರಂಭವಾಗಬೇಕಾಗಿ ಬರುತ್ತಿತ್ತು" ಎಂಬ ಅಂಶವನ್ನು ಬರ್ಟ್ರಾಂಡ್ ರಸ್ಸೆಲ್ ತಿಳಿಸಿದ್ದಾನೆ. ರಸ್ಸೆಲ್ ತನ್ನ ಅಭಿಪ್ರಾಯಸರಣಿಯನ್ನು ಮುಂದುವರಿಸುತ್ತಾ, ಅರಿಸ್ಟಾಟಲ್ನ ನೀತಿಶಾಸ್ತ್ರವನ್ನು "ವಿಕರ್ಷಕ" ಸ್ವರೂಪದ್ದೆಂದೂ, ಮತ್ತು ಆತನ ತರ್ಕಶಾಸ್ತ್ರವನ್ನು "ಟಾಲೆಮಿಯ ಸಿದ್ಧಾಂತದ ಖಗೋಳ ವಿಜ್ಞಾನದಂತೆ ಖಚಿತವಾಗಿ ಬಳಕೆಯಲ್ಲಿಲ್ಲದ ಅಥವಾ ಓಬೀರಾಯನ ಕಾಲದ ಶಾಸ್ತ್ರವೆಂಬಂತೆಯೂ" ಕರೆದಿದ್ದಾನೆ. ತನ್ನೆಲ್ಲಾ ಪೂರ್ವವರ್ತಿಗಳು ಕೈಗೊಂಡ ಕೆಲಸದ ಮೇಲೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಅರಿಸ್ಟಾಟಲ್ ಪ್ರಗತಿಯನ್ನು ಸಾಧಿಸಿದ ಎಂಬುದನ್ನು ಯಾರಾದರೂ ಅರ್ಥಮಾಡಿಕೊಳ್ಳುವವರೆಗೆ, ಅರಿಸ್ಟಾಟಲ್ಗೆ ಐತಿಹಾಸಿಕವಾಗಿ ನ್ಯಾಯಸಲ್ಲಿಸುವಲ್ಲಿ ಈ ತಪ್ಪುಗಳು ತೊಡಕಾಗಿ ಪರಿಣಮಿಸುತ್ತವೆ ಎಂದು ರಸ್ಸೆಲ್ ಸೂಚಿಸುತ್ತಾನೆ. ಅರಿಸ್ಟಾಟಲ್ಗೆ ಅಳತೆಮೀರಿದ ನಿಷ್ಠೆಯನ್ನು ತೋರುವ ಸಮಸ್ಯೆಯು, ಸ್ವಾಭಾವಿಕವಾಗಿ ನಂತರದ ಶತಮಾನಗಳಲ್ಲಿ ಬಂದವರ ಒಂದು ದೊಡ್ಡ ಸಮಸ್ಯೆಯಾಗಿದೆಯೇ ವಿನಃ, ಅದು ಸ್ವತಃ ಅರಿಸ್ಟಾಟಲ್ನದಲ್ಲ.
ಅರಿಸ್ಟಾಟಲ್ ಸಿದ್ಧಾಂತದ ಪಂಥ ಅಥವಾ ಶಾಲೆಯಾಗಿ ಲೈಸಿಯಂ ಬೆಳೆದು ನಿಂತಾಗ ಅರಿಸ್ಟಾಟಲ್ನ ಕೃತಿಯ ನಿಕಟ ಅಥವಾ ಪ್ರತ್ಯಕ್ಷ ಪ್ರಭಾವದ ಅರಿವುಮೂಡಿತು. ಅರಿಸ್ಟಾಟಲ್ನ ಗಮನಾರ್ಹ ವಿದ್ಯಾರ್ಥಿಗಳಲ್ಲಿ ಅರಿಸ್ಟೋಕ್ಸೀನಸ್, ಡಿಕೇಯಾರ್ಕಸ್, ಫ್ಯಾಲೆರಮ್ನ ಡೆಮಿಟ್ರಿಯಸ್, ರೋಡ್ಸ್ನ ಯುಡಿಮಾಸ್, ಹಾರ್ಪ್ಯಾಲಸ್, ಹೆಫೆಸ್ಟಿಯಾನ್, ಮೆನೊ, ಫೋಸಿಸ್ನ ನ್ಯಾಸನ್, ನಿಕೊಮ್ಯಾಕಸ್, ಮತ್ತು ಥಿಯೋಫ್ರಾಸ್ಟಸ್ ಮೊದಲಾದವರು ಸೇರಿದ್ದರು. ಅಲೆಕ್ಸಾಂಡರ್ ತನ್ನ ದಂಡಯಾತ್ರೆಯ ಸಮಯದಲ್ಲಿ ಪ್ರಾಣಿಶಾಸ್ತ್ರಜ್ಞರು, ಸಸ್ಯಶಾಸ್ತ್ರಜ್ಞರು, ಮತ್ತು ಸಂಶೋಧಕರ ತನ್ನೊಂದಿಗೆ ಸಮೂಹವನ್ನು ಕರೆತಂದಿದ್ದನ್ನು ಗಮನಿಸಿದರೆ ಆತನ ಮೇಲೆ ಅರಿಸ್ಟಾಟಲ್ ಎಷ್ಟೊಂದು ಪ್ರಭಾವ ಬೀರಿದ್ದ ಎಂಬುದನ್ನು ಕಾಣಬಹುದು. ಪರ್ಷಿಯಾ ದೇಶದ ರೂಢಿಗತ ಆಚರಣೆಗಳು ಹಾಗೂ ಸಂಪ್ರದಾಯಗಳ ಕುರಿತಾಗಿಯೂ ಸಹ ಆತ ತನ್ನ ಗುರುವಿನಿಂದ ಹೆಚ್ಚು ಪ್ರಮಾಣದಲ್ಲಿ ತಿಳಿದುಕೊಂಡಿದ್ದ. ಆತನು ಕೈಗೊಂಡ ಪ್ರವಾಸಗಳ ಕಾರಣದಿಂದಾಗಿ ಅರಿಸ್ಟಾಟಲ್ನ ಗ್ರಹಿಕೆಯ ಭೂಗೋಳವು ನಿಚ್ಚಳವಾದ ತಪ್ಪುಗ್ರಹಿಕೆಯಾಗಿತ್ತು ಎಂದು ಅಲೆಕ್ಸಾಂಡರ್ಗೆ ಸ್ಪಷ್ಟವಾಗಿ ಅರ್ಥವಾದಾಗ, ಅರಿಸ್ಟಾಟಲ್ನೆಡೆಗಿನ ಆತನ ಗೌರವವು ಕ್ಷೀಣಿಸಿತ್ತಾದರೂ, ತನ್ನ ಕೃತಿಗಳನ್ನು ಅರಿಸ್ಟಾಟಲ್ ಜನಸಾಮಾನ್ಯರಿಗೆ ಬಿಡುಗಡೆ ಮಾಡಿದಾಗ, ಅಲೆಕ್ಸಾಂಡರ್, "ನಿಮ್ಮ ರಹಸ್ಯಾರ್ಥದ ಸಿದ್ಧಾಂತಗಳನ್ನು ಪ್ರಕಟಪಡಿಸುವ ಮೂಲಕ ನೀವೇನೂ ಉತ್ತಮವಾದ ಕೆಲಸ ಮಾಡಿಲ್ಲ; ನನಗೆ ತರಬೇತಿ ನೀಡಿದ ಸಿದ್ಧಾಂತಗಳು ಎಲ್ಲಾ ಜನರ ಸಾಮಾನ್ಯ ಆಸ್ತಿಯಾಗುವುದಾದರೆ ನಾನು ಇತರರನ್ನು ಮೀರಿಸಿ ಮೈಲುಗೈ ಸಾಧಿಸುವುದಾದರೂ ಹೇಗೆ?" ಎಂದು ಆರೋಪಿಸಿದ.
ಥಾಮಸ್ ಆಕ್ವಿನಾಸ್ನಂತಹ ವಿದ್ವತ್ಪೂರ್ಣ ಚಿಂತನಶೀಲರು ಅರಿಸ್ಟಾಟಲ್ನನ್ನು "ಅನನ್ಯ ದಾರ್ಶನಿಕ" ಎಂದು ಉಲ್ಲೇಖಿಸಿದ್ದಾರೆ. ಸುಮ್ಮಾ ಥಿಯೋಲಾಜಿಕಾ , ಭಾಗ I, ಪ್ರಶ್ನೆ 3, ಇತ್ಯಾದಿಯನ್ನು ನೋಡಿ. ಈ ಚಿಂತಕರು ಅರಿಸ್ಟಾಟಲ್ನ ತತ್ತ್ವಶಾಸ್ತ್ರವನ್ನು ಕ್ರೈಸ್ತಧರ್ಮದೊಂದಿಗೆ ಹದವಾಗಿ ಬೆರೆಸಿ ಪ್ರಾಚೀನ ಗ್ರೀಸ್ನ ಚಿಂತನೆಯನ್ನು ಮಧ್ಯಯುಗಗಳಿಗೆ ತಂದರು. ಆಧುನಿಕ ವೈಜ್ಞಾನಿಕ ಸೂತ್ರಗಳು ಮತ್ತು ಪ್ರಯೋಗಾತ್ಮಕ ವಿಧಾನಗಳ ಆವಿಷ್ಕಾರಕ್ಕಾಗಿ ವಿಜ್ಞಾನದ ಶಾಖೆಗಳು ಹಾಗೂ ಕಲೆಗಳು ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳುವುದಕ್ಕಾಗಿ, ಅರಿಸ್ಟಾಟಲ್ನ ಕೆಲವೊಂದು ತತ್ತ್ವಗಳ ಒಂದು ನಿರಾಕರಣೆಯನ್ನು ಕೈಗೊಳ್ಳುವುದು ಅಗತ್ಯವಾಗಿತ್ತು. ಮಧ್ಯಯುಗದ ಆಂಗ್ಲಕವಿ ಚೇಸರ್, ಈ ಕೆಳಗಿನ ಸಾಲುಗಳನ್ನು ಹೊಂದುವ ಮೂಲಕ ತನ್ನ ವಿದ್ಯಾರ್ಥಿಯು ಸಂತೋಷವಾಗಿರುವುದನ್ನು ವಿವರಿಸುತ್ತಾನೆ:
ದಿ ಫಸ್ಟ್ ಸರ್ಕಲ್ಸ್ ಆಫ್ ಹೆಲ್ ಎಂಬ ಕೃತಿಯಲ್ಲಿ ಇಟಲಿಯ ಕವಿ ಡಾಂಟೆ ಅರಿಸ್ಟಾಟಲ್ನ ಕುರಿತು ಹೀಗೆ ಹೇಳುತ್ತಾನೆ,
ಮಹಿಳೆಯರು ಮುರುಷರಿಗಿಂತ ಶಾಂತಸ್ವಭಾವವನ್ನು ಹೊಂದಿರುತ್ತಾರಾದ್ದರಿಂದ, ಅವರು ಜೀವನದ ಒಂದು ಕೆಳವರ್ಗದ ಸ್ವರೂಪವನ್ನು ಪ್ರತಿನಿಧಿಸುತ್ತಾರೆ ಎಂಬುದು ಅವನ ನಂಬಿಕೆಯಾಗಿತ್ತು. ಅವನ ಗ್ರಹಿಕೆಯು ಅಪರೀಕ್ಷಿತ ಸ್ವರೂಪದಲ್ಲಿಯೇ ಮುಂದುವರಿದು, ಗೇಲನ್ ಮತ್ತು ಇತರರನ್ನು ತಲುಪಿದ್ದೇ ಅಲ್ಲದೇ, ಹದಿನಾರನೇ ಶತಮಾನದವರೆಗೂ ಸುಮಾರು ಎರಡು ಸಾವಿರ ವರ್ಷಗಳವರೆಗೆ ಮುಂದುವರಿದುಕೊಂಡು ಬಂದವು. ಮಹಿಳೆಯರು ಸಂಪೂರ್ಣವಾಗಿ ಮಾನವ ಸ್ವಭಾವ ಹೊಂದುವುದು ಸಾಧ್ಯವಿಲ್ಲ ಎಂಬುದೂ ಅವನ ನಂಬಿಕೆಯಾಗಿತ್ತು. ಸಂತಾನೋತ್ಪಾದನೆಯ ಕುರಿತಾದ ಆತನ ವೀಶ್ಲೇಷಣೆಯು ಆಗಿಂದಾಗ್ಗೆ ಟೀಕೆಗೆ ಒಳಗಾಗುತ್ತಲೇ ಬಂದಿದೆ. ನಿಷ್ಕ್ರಿಯವಾದ, ಅಪ್ರವರ್ತಕವಾದ, ದಡ್ಡ ಕೆಳವರ್ಗಕ್ಕೆ ಸಂಬಂಧಿಸಿದ ಸ್ತ್ರೀ ಅಂಶವೊಂದಕ್ಕೆ ಒಂದು ಕ್ರಿಯಾಶೀಲ, ಪುರುಷ ಜಾತಿಯ ಅಂಶವು ಜೀವವನ್ನು ತುಂಬುವ ಕುರಿತಾದ ಪೂರ್ವಕಲ್ಪನೆಯನ್ನು ಇದು ಒಳಗೊಳ್ಳುವುದರ ಕಾರಣ ಟೀಕೆಗೆ ಒಳಗಾಗುತ್ತಿದೆ. ಈ ಕಾರಣದಿಂದಲೇ ಕೆಲವೊಂದು ಸ್ತ್ರೀಸಮಾನತಾವಾದಿ ವಿಮರ್ಶಕರು ಅರಿಸ್ಟಾಟಲ್ ಓರ್ವ ಸ್ತ್ರೀದ್ವೇಷಿಯಾಗಿದ್ದ ಎಂದು ಪರಿಗಣಿಸಿದ್ದಾರೆ. ಮತ್ತೊಂದೆಡೆ, ಪುರುಷರಿಗೆ ನೀಡಿದಂತೆಯೇ ಮಹಿಳೆಯರ ಸಂತೋಷದ ಕಡೆಗೂ ಅರಿಸ್ಟಾಟಲ್ ಸಮಾನವಾದ ಒತ್ತು ನೀಡಿದ್ದಾನೆ. ಮಹಿಳೆಯರು ಸಂತೋಷವಾಗಿರದ ಹೊರತು ಒಂದು ಸಮಾಜವು ಸಂತೋಷದಿಂದಿರಲು ಸಾಧ್ಯವಿಲ್ಲ ಎಂದು ಆತ ತನ್ನ ಭಾಷಣಶಾಸ್ತ್ರದಲ್ಲಿ ವ್ಯಾಖ್ಯಾನಿಸಿದ್ದಾನೆ. ಬಹಳಷ್ಟು ಮಹಿಳೆಯರ ಸ್ಥಿತಿ ಕೆಟ್ಟದಾಗಿರುವ, ಸ್ಪಾರ್ಟಾದಂಥ ಪ್ರದೇಶಗಳಲ್ಲಿನ ಸಮಾಜದಲ್ಲಿ ಕೇವಲ ಅರೆ-ಸಂತೋಷವನ್ನು ಕಾಣಲು ಸಾಧ್ಯ. (ನೋಡಿ: ಭಾಷಣಶಾಸ್ತ್ರ 1.5.6)
ಜರ್ಮನ್ ದಾರ್ಶನಿಕ ಫ್ರೆಡ್ರಿಕ್ ನೀಟ್ಜ್ಸ್ಚೆಯು ಸರಿಸುಮಾರು ತನ್ನೆಲ್ಲಾ ರಾಜಕೀಯ ತತ್ತ್ವಶಾಸ್ತ್ರದ ಹುರುಳನ್ನೂ ಅರಿಸ್ಟಾಟಲ್ನಿಂದ ಪಡೆದಿದ್ದಾನೆ ಎಂದು ಹೇಳಲಾಗುತ್ತದೆ. ಅದೆಷ್ಟೇ ಅಸಂಭಾವ್ಯವಾಗಿದ್ದರೂ, ಕ್ರಿಯೆಯನ್ನು ಉತ್ಪಾದನೆಯಿಂದ ಕಟ್ಟುನಿಟ್ಟಾಗಿ ಪ್ರತ್ಯೇಕಿಸುವ ಅರಿಸ್ಟಾಟಲ್ನ ನಡವಳಿಕೆಯನ್ನು ಇದು ನಿಸ್ಸಂಶಯವಾಗಿ ತೋರಿಸುತ್ತದೆ. ಕುಲೀನವರ್ಗದ ಮಾದರಿಯ ಕೆಲವೇ ಸಮರ್ಥಿಸಲ್ಪಟ್ಟವುಗಳ ಸದ್ಗುಣಕ್ಕೆ- ಅಥವಾ ಬೆನ್ನೇಣಿಗೆ - ಗುಲಾಮರು ಮತ್ತು ಇತರರ ದಾಸ್ಯಮನೋಭಾವದ ಕುರಿತಾದ ಆತನ ಸಮರ್ಥನೆಯನ್ನೂ ಸಹ ಇದು ತೋರಿಸುತ್ತದೆ. ನೀಟ್ಜ್ಸ್ಚೆಯ ಬದಲಿಗೆ ಮಾರ್ಟಿನ್ ಹೀಡೆಗ್ಗರ್ ಅರಿಸ್ಟಾಟಲ್ನ ಕುರಿತಾದ ಒಂದು ಹೊಸ ವ್ಯಾಖ್ಯಾನವನ್ನು ವಿಶದೀಕರಿಸಿದ್ದು, ವಿದ್ವತ್ಪೂರ್ಣ ಮತ್ತು ತಾತ್ತ್ವಿಕ ಸಂಪ್ರದಾಯದ ಕುರಿತಾದ ತನ್ನ ಅರ್ಥವೈಲಕ್ಷಣ್ಯವನ್ನು ಪ್ರಮಾಣೀಕರಿಸುವ ಉದ್ದೇಶವನ್ನು ಅದು ಹೊಂದಿದೆ. ತೀರಾ ಇತ್ತೀಚೆಗೆ, ಅರಿಸ್ಟಾಟಲ್ನ ಸಂಪ್ರದಾಯ ಎಂದು ತಾನು ಕರೆಯುವ ಪರಿಕಲ್ಪನೆಯನ್ನು ಸುಧಾರಣೆ ಮಾಡಲು ಅಲಾಸ್ಡೈರ್ ಮ್ಯಾಕ್ಇಂಟೈರ್ ಪ್ರಯತ್ನಿಸಿದ್ದಾನೆ. ಗಣ್ಯರ ನಾಯಕತ್ವವಾದಿಗಳ ವಿರೋಧಿಯಾಗಿರುವ ಮತ್ತು ಪ್ರಗತಿಪರರು ಹಾಗೂ ನೀಟ್ಜ್ಸ್ಚೆಯ ಅನುಯಾಯಿಗಳಿಬ್ಬರ ಸಮರ್ಥನೆಗಳನ್ನು ಚರ್ಚಿಸುವ ವಿಧಾನವನ್ನು ಆತ ಇದಕ್ಕಾಗಿ ಬಳಸಿದ್ದಾನೆ. == ಕೃತಿಗಳ ಪಟ್ಟಿ
ಅರಿಸ್ಟಾಟಲ್ ಕುರಿತಾದ ದ್ವಿತೀಯಕ ಸಾಹಿತ್ಯವು ಅಗಾಧವಾಗಿದೆ. ಈ ಕೆಳಗಿನ ಉಲ್ಲೇಖಗಳು ಕೇವಲ ಒಂದು ಪುಟ್ಟ ಆಯ್ಕೆ ಮಾತ್ರ.
Find more about ಅರಿಸ್ಟಾಟಲ್ at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
ಕೃತಿಗಳ ಸಂಗ್ರಹಗಳು
ಇತರೆ
Aristotle at PlanetMath
This article uses material from the Wikipedia ಕನ್ನಡ article ಅರಿಸ್ಟಾಟಲ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.