ಸೂಫಿಪಂಥ ಇಸ್ಲಾಮ್ ಧರ್ಮದ ಒಂದು ತತ್ತ್ವ. ಇದಕ್ಕೆ ಸುಮಾರು ಮೂರು ಸಾವಿರ ವರ್ಷದ ಇತಿಹಾಸವಿದೆ. ಅರಬ್ಬೀ ಭಾಷೆಯಲ್ಲಿ ಉಣ್ಣೆಗೆ ಸೂಫ್ ಎಂದು ಹೆಸರು. ಈ ಪಂಥದವರು ಉಣ್ಣೆವಸ್ತ್ರ ಧರಿಸುತ್ತಿದ್ದುದರಿಂದಲೇ ಇವರಿಗೆ ಸೂಫಿಗಳು ಎಂದು ಹೆಸರಾಯಿತೆನ್ನಲಾಗಿದೆ. ಇವರೇ ಮುಂದೆ ಸೂಫಿಪಂಥದ ಉಗಮಕ್ಕೆ ಕಾರಣರಾದರು.
ಸೂಫಿ ತತ್ತ್ವ
ಭಗವಂತ ಹಾಗೂ ಮನುಷ್ಯ ಬೇರೆ ಬೇರೆ ಅಲ್ಲ ಎಂಬುದು ಈ ಸಿದ್ಧಾಂತದ ಸಾರ. ಮುಹಮ್ಮದ್ ಪೈಗಂಬರ್ ಮೆಕ್ಕಾದಿಂದ ಮದೀನಕ್ಕೆ ಹೋಗುವ ಮೊದಲೇ ಇದ್ದ ತತ್ತ್ವಜ್ಞಾನಿಗಳಾದ ಹಲವು ಮುಸ್ಲಿಮರು ಈ ಸಿದ್ಧಾಂತವನ್ನು ಬೆಳೆಸುತ್ತ ಬಂದರು. ಈ ಗುಂಪಿನಲ್ಲಿ ಮಹಿಳೆಯರೂ ಇದ್ದರೆಂದು ತಿಳಿದುಬರುತ್ತದೆ. ಮುಖ್ಯವಾಗಿ ಬಿಯಾ ಎಂಬ ಮಹಿಳೆ ಸೂಫಿ ಸಿದ್ಧಾಂತದ ಬಗ್ಗೆ ತುಂಬ ನಿಷ್ಠಾವಂತೆಯಾಗಿದ್ದಳಂತೆ. ಈ ಪಂಥದವರು ಈಕೆಯನ್ನು ಇಂದಿಗೂ ಪೂಜ್ಯಭಾವನೆಯಿಂದ ಕಾಣುತ್ತಾರೆ. ೭೫೨ರಲ್ಲಿ ಈಕೆ ನಿಧನಳಾದಳು. ಅತ್ತಾರ್ ಎಂಬ ಕವಿ ಈಕೆಯನ್ನು ಕುರಿತು ಪ್ರಶಂಸನೀಯ ಮಾತುಗಳನ್ನಾಡಿ, ಈಕೆಯ ದೈವಿಕ ಭಾವನೆಯ ಉದ್ಗಾರಗಳನ್ನೂ ಬರೆದಿಟ್ಟಿದ್ದಾನೆ. ಪರಮಾತ್ಮನ ಕಡೆ ಮುಖ ಹೊರಳಿಸುವುದೇ ಜಾಣತನದ ಫಲ ಎಂದು ಈಕೆ ಹೇಳಿರುವುದು ಸೂಫಿ ಸಿದ್ಧಾಂತದ ಪ್ರತಿಪಾದನೆಯಲ್ಲಿ ಸಾಹಸ ಮತ್ತು ಶ್ರದ್ಧೆಯ ಪ್ರಯತ್ನವೆಂದು ಹೇಳಬಹುದು. ಹೀಗೆ ಪುರುಷರೂ ಸ್ತ್ರೀಯರೂ ಸೂಫಿ ಪಂಥದ ಪ್ರಚಾರದಲ್ಲಿ ಕೈಜೋಡಿಸಿದ್ದರು.
ಈ ಪಂಥವನ್ನು ಮುಸ್ಲಿಮರು ತಸ್ವಫ್ ಎಂದು ಕರೆಯುವರು. ಬಾಗ್ದಾದಿನ ಅಲ್-ಜುನೈದ್ ಮತ್ತು ಬಿಸ್ತಾಂ ಪಟ್ಟಣದ ಅಲ್-ಬಾಯಜಿದ್ ಆ ಕಾಲಕ್ಕೆ ಇದರ ಪ್ರಚಾರದಲ್ಲಿ ಅತ್ಯಂತ ಪ್ರಭಾವಶಾಲಿ ಪರಿಣಾಮವನ್ನುಂಟುಮಾಡಿದ ವ್ಯಕ್ತಿಗಳಲ್ಲಿ ಮುಖ್ಯರಾದವರು. ಇವರು ೯ನೆಯ ಶತಮಾನದ ಕೊನೆಯ ಭಾಗದಲ್ಲಿ ಜೀವಿಸಿದ್ದರು. ಸೂಫಿತತ್ತ್ವದ ಬೋಧನೆಯಲ್ಲಿ ಅದರ ನಿಜವಾದ ಅಂಗವೋ ಎನ್ನುವಂತೆ ಅದ್ವೈತದ ಭಾವನೆಗಳನ್ನು ಇವರು ಹರಡುತ್ತಿದ್ದರು.
ಎಲ್ಲಾ ಸೂಫಿ ಆದೇಶಗಳು ಮುಹಮ್ಮದ್ ಅವರ ಮೂಲ ನಿಯಮಗಳನ್ನು ಅವರ ಸೋದರಸಂಬಂಧಿಯ ಉಪದೇಶದ ಮೂಲಕ ಸಂಪರ್ಕಿಸುತ್ತವೆ ಮತ್ತು , ಪ್ರ.ಮುಹಮ್ಮದ್ ಗೆ ಅವರ ಮೂಲ ಉಪದೇಶಗಳನ್ನು ತನ್ನ ಸಹಚರ ಮತ್ತು ಮಾವ ಅಬೂಬಕರ್ರವರ ನಕ್ಷ್ಬಂದಿ ಪಂಥವನ್ನು ಹೊರತುಪಡಿಸಿ, ಅಳಿಯ ಅಲಿ ಹೇಳಿಕೆ ಮೂಲಕ ಅರ್ಥೈಸುತ್ತಾರೆ.
ಕವಿಗಳು - ಪ್ರಚಾರಕರು
ಕವಿಗಳೂ ಸೂಫಿ ಪಂಥದ ಪ್ರಚಾರ ಕಾರ್ಯ ಕೈಗೊಂಡಿದ್ದರೆಂದು ತಿಳಿದುಬರುತ್ತದೆ. ಈ ಪೈಕಿ ಅಬು ಸಯೀದ್ ಗಣ್ಯನಾದವನು. ಇವನಿಗೆ ಹಲವಾರು ಶಿಷ್ಯರಿದ್ದರು. ಇವರೆಲ್ಲ ಉಣ್ಣೆವಸ್ತ್ರ ಧರಿಸುತ್ತಿದ್ದರು.
ಪುರಾತನಕಾಲದ ಸೂಫಿಗಳು, ತತ್ತ್ವಜ್ಞಾನಿಗಳಾಗಲೀ ಕವಿಗಳಾಗಲೀ ಕಟ್ಟಾ ಪ್ರಚಾರಕರಾಗಲೀ ಆಗಿರಲಿಲ್ಲವೆಂದು ತಿಳಿದುಬರುತ್ತದೆ. ಇವರು ಬೆಳಕಿಗೆ ಬಾರದೆ ತಮ್ಮ ಪಾಡಿಗೆ ತಾವು ಇದ್ದು ಬಿಡುತ್ತಿದ್ದರು. ಬಾಹ್ಯ ಪ್ರಪಂಚದ ಹವ್ಯಾಸವೇ ಇವರಿಗಿರಲಿಲ್ಲ. ಈ ಕಾರಣದಿಂದಲೋ ಅಥವಾ ಮತ್ತಾವ ಕಾರಣದಿಂದಲೋ ಅಂತೂ ಇವರನ್ನು ಮತಾನುಯಾಯಿಗಳು ಅನಾದರಣೆಯಿಂದ ನೋಡುತ್ತಿದ್ದರು. ಇವರನ್ನು ಧರ್ಮಭ್ರಷ್ಟರೆಂದು ಕರೆಯುತ್ತಿದ್ದರು. ಆದರೂ ಇವರ ಪ್ರಭಾವ ಅಳಿಯಲಿಲ್ಲ. ಸೂಫಿ ಪಂಥದ ಸಮರ್ಥಕನಾದ ಅಲ್-ಜುನೈದ್ನ ಪ್ರಖ್ಯಾತ ಶಿಷ್ಯ ಹುಸೇನ್ ಇಬೆನ್ ಮನ್ಸೂರ್. ಇವನಿಗೆ ಹಲ್ಲಾಜ್ ಎಂಬ ಹೆಸರೂ ಇತ್ತು. ಹಲ್ಲಾಜ್ ಎಂದರೆ ಉಣ್ಣೆ ಎಕ್ಕುವವ ಎಂದರ್ಥ. ಈತ ತನ್ನ ಪ್ರಚಾರ ಕಾರ್ಯದಿಂದ ಮತೀಯರ ಕೋಪತಾಪಕ್ಕೆ ಗುರಿಯಾಗಿ ಚಿತ್ರಹಿಂಸೆಗೆ ತುತ್ತಾಗಿ, 923ರಲ್ಲಿ ಕೊಲೆಯಾದ. ಸೂಫಿತತ್ತ್ವಕ್ಕೋಸ್ಕರ ಬಲಿಯಾಗಿ ಹುತಾತ್ಮನಾದ. ಸೂಫಿ ಪಂಥೀಯರು ಇಂದಿಗೂ ಇವನನ್ನು ಪೂಜ್ಯತೆಯಿಂದ ಕಾಣುವರು.
ಕನ್ನಡ ಕವಿ ಶಿಶುನಾಳ ಶರೀಫನೂ ಒಬ್ಬ ಸೂಫಿ ಸಂತನೆಂದು ಹೇಳಲಾಗುತ್ತದೆ. ಸೂಫಿಪಂಥವನ್ನು ಕುರಿತಂತೆ ಕನ್ನಡದಲ್ಲಿ ಅನೇಕ ಕೃತಿಗಳು ರಚಿತವಾಗಿವೆ.(ಎಮ್.ಎಸ್.ಜಿ.)
This article uses material from the Wikipedia ಕನ್ನಡ article ಸೂಫಿಪಂಥ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses. ®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.