ಝರತುಷ್ಟ್ರ ಮತ

ಝರತುಷ್ಟ್ರ ಮತ-ಪ್ರಾಚೀನ ಪರ್ಷಿಯನ್ ಸಾಮ್ರಾಜ್ಯರ ಸೌಭಾಗ್ಯದ ದಿನಗಳಲ್ಲಿ ಪಶ್ಚಿಮ ಏಷ್ಯದಲ್ಲಿ ಅತ್ಯಂತ ಪ್ರಬಲವಾಗಿದ್ದ ಮತ.

ಝರತುಷ್ಟ್ರ ಮತ
ಝರತುಷ್ಟ್ರ ಮತದ ಪ್ರಮುಖ ಸಂಕೇತಗಳಲ್ಲೊಂದು

ಇದು ಮಿತ್ರಾಯಿಸಂ ಎಂಬ ರೂಪದಲ್ಲಿ ರೋಮನ್ ಸಾಮ್ರಾಜ್ಯದ ವಿಶಾಲ ಪ್ರದೇಶಗಳಲ್ಲಲ್ಲದೆ ದೂರದ ಬ್ರಿಟನ್ನಿನವರೆಗೂ ಹಬ್ಬಿ ಹರಡಿತ್ತು. ಝರತುಷ್ಟ್ರ (ಝೊರೊ ಆಸ್ಟರ್) ಎಂಬಾತನಿಂದ ಪ್ರವೃತ್ತವಾದ ಈ ಮತವನ್ನು ಪಾಶ್ಚಾತ್ಯರು ಸಾಮಾನ್ಯವಾಗಿ ಝೊರೊ ಆಸ್ಟ್ರಿಯಾನಿಸಂ ಎನ್ನುತ್ತಾರಾದರೂ ಮಜ್ದಯಾಸ್ನಿಸಂ ಎಂದು ಇದನ್ನು ಸಂಬೋಧಿಸುವುದು ಹೆಚ್ಚು ಯುಕ್ತವೆನಿಸುತ್ತದೆ. ಹೀಗೆಂದರೆ ಅಹುರಮಜ್ದ ಎಂಬ ಏಕೈಕ ದೇವತೆಯ ಉಪಾಸನೆ ಎಂದು ಅರ್ಥ. ಝರತುಷ್ಟ್ರ ಮತವೆಂದರೆ ಅಗ್ನಿ ಪೂಜೆಯೆಂದು ಭಾವಿಸುವುದು ರೂಢಿಯಾದರೂ ಅದು ತಪ್ಪು ತಿಳಿವಳಿಕೆ. ಏಕೆಂದರೆ ಈ ಮತದವರು ಅಗ್ನಿಯನ್ನು, ಮುಖ್ಯವಾಗಿ ಅದು ಕಾಂತಿಯುಕ್ತವೂ ಪಾವನವೂ ಆಗಿರುವುದೆಂದು ಮಾತ್ರ ಅಹುರಮಜ್ದನ ಪ್ರತೀಕವಾಗಿ ಪೂಜಿಸುತ್ತಾರಷ್ಟೆ.

ಝರತುಷ್ಟ್ರನ ಕಾಲ

ಝರತುಷ್ಟ್ರ ಯಾವಾಗ ಜನ್ಮತಾಳಿದ ಎಂಬಂಶ ಇನ್ನೂ ಚರ್ಚೆಯಲ್ಲಿಯೇ ಇದೆ. ಜ್ಯಾಕ್ಸನ್ ಮತ್ತು ವೆಸ್ಟ್ ಮೊದಲಾದ ಪಾಶ್ಚಾತ್ಯ ವಿದ್ವಾಂಸರು ಅತ ಜನ್ಮವೆತ್ತಿದ್ದು ಕ್ರಿ.ಪೂ. 660ರಿಂದ 583ರ ಒಳಗೆ ಎನ್ನುತ್ತಾರೆ. ಅದರೆ ಈ ಕಾಲ ತುಂಬ ಇತ್ತೀಚಿನದು. ಏಕೆಂದರೆ ಪ್ರಾಚೀನ ರೋಮ್ ಸಾಮ್ರಾಜ್ಯದ ಪ್ಲಿನೀ ಎಂಬಾತ ಸಹ ಪ್ಲೇಟೋವಿನ ಮರಣಕ್ಕೆ ಅರು ಸಾವಿರ ವರ್ಷಗಳ ಹಿಂದೆ ಝರತುಷ್ಟ್ರ ಜೀವಿಸಿದ್ದನೆಂದೂ ನಂಬಿದ್ದ. ಹಿಂದೂಗಳ ವೇದಗಳಿಗೂ ಝರತುಷ್ಟ್ರನ ಗಾದೆಗಳಿಗೂ ಸಾವಿರ ವರ್ಷಗಳ ಹಿಂದೆ ಜೀವಿಸಿದ್ದನೆಂದು ಧಾರಾಳವಾಗಿ ಹೇಳಬಹುದು-ಹಿಂದೂ ವಿದ್ವಾಂಸರು ವೇದಗಳು ಇನ್ನೂ ಪ್ರಾಚೀನವೆಂದು ಹೇಳುತ್ತಾರಾದ್ದರಿಂದ.

ವೈದಿಕ ಹಿಂದೂ ಮತಕ್ಕೂ ಝರತುಷ್ಟ್ರ ಮತಕ್ಕೂ ಇರುವ ಸಂಬಂಧ

ವೈದಿಕ ಹಿಂದೂ ಮತಕ್ಕೂ ಝರತುಷ್ಟ್ರ ಮತಕ್ಕೂ ಇರುವ ಸಂಬಂಧ ಯೆಹೂದ್ಯ ಮತಕ್ಕೂ ಕ್ರೈಸ್ತಧರ್ಮಕ್ಕೂ ಇರುವ ಸಂಬಂಧಕ್ಕೆ ಸಮಾನವಾದದ್ದು. ಆರ್ಯರು ಭಾರತಕ್ಕೆ ಸ್ಥಳೀಯರಲ್ಲವೆಂಬುದೂ ಅವರು ಪುರಾತನ ಕಾಲದಲ್ಲಿ ಆ ದೇಶವನ್ನು ಆಕ್ರಮಿಸಿಕೊಂಡರೆಂಬುದೂ ಎಲ್ಲರೂ ಒಪ್ಪಿರುವ ವಿಷಯ. ಈ ಆಕ್ರಮಣಕ್ಕೆ ಅವರ ಆರ್ಥಿಕ ಪರಿಸ್ಥಿತಿ ಕಾರಣವಾಗಿರಬಹುದು. ಏಕೆಂದರೆ ಭಾರತದ ಫಲವತ್ತಾದ ಬಯಲುಗಳು ಹೊರನಾಡಿನ ವಿಜಿಗೀಷುಗಳನ್ನು ಯಾವಾಗಲೂ ಆಕರ್ಷಿಸುತ್ತಿವೆ. ಅಲ್ಲದೆ, ಮಧ್ಯ ಏಷ್ಯದ ಇರಾನೀ ಆರ್ಯರಿಗೂ ಭಾರತದಲ್ಲಿ ನೆಲೆಗೊಂಡ ಆರ್ಯರಿಗೂ ಮತದ ವಿಷಯದಲ್ಲಿ ಭೇದವುಂಟಾಗಿ ಅದೇ ಕಾರಣಕ್ಕಾಗಿ ಒಂದು ಗುಂಪಿನವರು ವಲಸೆ ಹೋಗಿರಲಿಕ್ಕೂ ಸಾಕು. ಇಬ್ಬರ ಪವಿತ್ರ ಗ್ರಂಥಗಳೂ ಇದನ್ನು ಹೇರಳವಾಗಿ ತೋರಿಕೊಡುತ್ತವೆ. ಇಂದ್ರ, ಮಿತ್ರ, ಅಗ್ನಿ, ಇತ್ಯಾದಿ ವೈದಿಕ ದೇವತೆಗಳು ಇರಾನೀ ದೇವತಾವರ್ಗದಲ್ಲೂ ಕಾಣಿಸಿಕೊಳ್ಳುತ್ತಾರೆ. ಸಂಸ್ಕೃತ ಶಬ್ದಗಳಿಗೂ ಅವೆಸ್ತದ ಶಬ್ದಗಳಿಗೂ ತುಂಬ ಹೋಲಿಕೆಯಿದೆ; ಅವುಗಳಲ್ಲಿ ಕೆಲವನ್ನು ಈ ಕೆಳಗೆ ಕಾಣಿಸಿದೆ: ಸಂಸ್ಕೃತ ಅವಸ್ತ

ವೇದ (ಜ್ಞಾನ)ಅ-ವೆಸ್ತ (ಜ್ಞಾನ)

ಸೋಮ (ಮಾದಕ ರಸ)ಹೋಮ

ಯಜ್ಞ (ಬಲಿದಾನ)ಯಾಸ್ನ (ಪೂಜೆ, ಮೊರೆ)

ಗಾಥಾ (ಹಾಡು) ಗಾಥಾ

ಅಥರ್ವನ್ (ಅಗ್ನಿಪುರೋಹಿತ)ಆಥ್ರವನ್

ವೈದಿಕ ಆರ್ಯರ ಸೋಮಪಾನಕ್ಕೂ ಇರಾನಿಗಳ ಹೋಮಕ್ಕೂ ಸಾಮ್ಯವಿರುವುದು ತುಂಬ ಕುತೂಹಲಜನಕವಾಗಿದೆ. ಇದಕ್ಕಿಂತ ಸ್ವಾರಸ್ಯವಾದ ಅಂಶವೇನೆಂದರೆ, ವೇದದ ಉತ್ತರ ಭಾಗಗಳಲ್ಲಿ ಅಸುರರು ಎಂಬ ಪದ ದೈತ್ಯರೆಂಬರ್ಥದಲ್ಲಿಯೂ ಪ್ರಯುಕ್ತವಾಗಿವೆ. ಅದರೆ ಅವೆಸ್ತದಲ್ಲಿ ದೇವರು ಎಂದರೆ ದೈತ್ಯರೆಂದೇ ಅರ್ಥ ಮತ್ತು ಅಹುರ ಎಂಬುದು ಸರ್ವಶಕ್ತನಾದ ದೇವರ ಹೆಸರು. ವೈದಿಕ ಸಂಪ್ರದಾಯಗಳನ್ನು ಬಿಟ್ಟು ಬೇರೆ ದಾರಿ ಹಿಡಿದು ಹೊಸ ಮತವೊಂದು ಹೊರಟಿರುವುದಕ್ಕೆ ಇದೊಂದು ಹೆಗ್ಗುರುತು. ಮತ್ತು ಇಂಥ ಭಿನ್ನ ಮಾರ್ಗಾನುಸರಣ ಪ್ರಾಯಶಃ ಝರತುಷ್ಟ್ರ ವಿಗ್ರಹಾರಾಧನೆಯನ್ನೂ ಯಜ್ಞಗಳನ್ನೂ ವಿರೋಧಿಸಿದಂದಿನಿಂದ ಪ್ರಾರಂಭವಾಯಿತೆನ್ನಬೇಕು. ಯಾಸ್ನ 32, 12, ಮತ್ತು 14ರಲ್ಲಿ ಝರತುಷ್ಟ್ರ ಹರ್ಷೋದ್ಗಾರಗಳಿಂದ ಎತ್ತನ್ನು ಕೊಲ್ಲುವವರ ವಿರುದ್ಧವಾಗಿ ಎತ್ತಿಯಾಡಿದ್ದಾನೆ. ಮಾರ್‍ಖಾಮ್ ಎಂಬ ವಿದ್ವಾಂಸ ಹೇಳಿರುವ ಹಾಗೆ, ತನ್ನ ಇತಿಹಾಸದಲ್ಲಿ ಯಾವ ಕಾಲದಲ್ಲಾಗಲಿ ಎಂದಿಗೂ ಎಂಥ ವಿಗ್ರಹವನ್ನೂ ಪೂಜಿಸದಿರುವ ಒಂದೇ ಒಂದು ದೇಶವೆಂದರೆ ಪರ್ಷಿಯವೇ. ಒಂದು ಮಾತಿನಲ್ಲಿ ಹೇಳಬಹುದಾದರೆ, ಝರತುಷ್ಟ್ರ ವಿಗ್ರಹರಾಧನೆ, ಯಜ್ಞಾದಿಗಳಲ್ಲಿ ವಿಶೇಷಾಭಿಮಾನ ಮತ್ತು ಪೌರೋಹಿತ್ಯಗಳ ವಿರುದ್ಧವಾಗಿ ಕ್ರಾಂತಿಕಾರಕವಾದ ಬದಲಾವಣೆಗಳನ್ನು ತಂದು ಏಕದೈವೋಪಾಸನೆಯನ್ನು ಪ್ರಚುರಗೊಳಿಸಿ, ಉನ್ನತ ನೈತಿಕ ಜೀವನವನ್ನು ಉಪದೇಶಿಸುವ ಹೊಣೆ ಹೊತ್ತ. ತನ್ನ ಗಾಥೆಗಳಲ್ಲಿ ಕರ್‍ಪಾನ್‍ಗಳ ಮತ್ತು ಕವಿಗಳ ವಿಷಯದಲ್ಲಿ ವ್ಯಕ್ತಪಡಿಸಿರುವ ಖಂಡನೆಗಳಿಂದ ಈ ವಿರೋಧ ವಿಶದವಾಗುತ್ತದೆ. ಕರಪಾನ್ ಎಂಬ ಶಬ್ದ ಸಂಸ್ಕೃತದ ಕಲ್ಪ ಎಂಬುದಕ್ಕೆ ಸಂಬಂಧಿಸಿದ ಎಂದು ವಿದ್ವಾಂಸರು ಅಭಿಪ್ರಾಯ. ಈ ಪ್ರಕಾರ ಕರ್‍ಪಾನ್ ಎಂಬ ಶಬ್ದದಿಂದ ಯಜ್ಞಾದಿವಿಧಿಗಳಿಗೂ ವ್ರತಗಳಿಗೂ ಅಂಟಿಕೊಂಡಿರುವ ಮಾಟಗಾರ ಎಂಬ ಅರ್ಥ ಹೊರಡುವಂತಿದೆ. ಕವಿ ಎಂಬ ಶಬ್ದಕ್ಕೆ ಅದು ಕವಿಗಳಿಗೂ ರಾಜರಿಗೂ ಅನ್ವಯವಾಗುವಾಗ, ಕೆಟ್ಟರ್ಥವಿಲ್ಲ. ಅದರೆ ಈ ಶಬ್ದವನ್ನು ಪುರೋಹಿತನಿಗೂ ಅನ್ವಯಿಸುತ್ತಿದ್ದರು. ಅ ಕಾರಣದಿಂದ ಝರತುಷ್ಟ್ರನಿಗೆ ಅದು ರುಚಿಸಲಿಲ್ಲ. ಗಾಥೆಗಳು ಮಾತ್ರ ಅತನ ಸ್ವಂತ ಕೃತಿ ಎಂದು ಹೇಳಲಾಗಿದೆ. ಅವುಗಳಲ್ಲಿ ಅತನ ಆಶಾಭಂಗಗಳು, ಧರ್ಮ ಪ್ರಚಾರ ಕಾರ್ಯಗಳು ಮತ್ತು ಆ ಕಾಲದ ಸಮಾಜ-ಇವುಗಳ ವಿಶದವಾದ ಚಿತ್ರಗಳಿವೆ.

ಹೀಗೆ ವೈದಿಕ ಹಿಂದೂ ಮತಕ್ಕೂ ಝರತುಷ್ಟ್ರ ಮತಕ್ಕೂ ಸಾವಿರಾರು ವರ್ಷಗಳ ಸಂಬಂಧವಿದೆ. ಮುಸ್ಲಿಮರು ಪರ್ಷಿಯವನ್ನು ಜಯಿಸಿದ ಬಳಿಕ ಝರತುಷ್ಟ್ರ ಮತದ ಕೆಲವರು ತಮ್ಮ ತಾಯಿನಾಡನ್ನು ತ್ಯಜಿಸಿ ಗುಜರಾತಿನ ನೆಲದಲ್ಲಿ ಅಶ್ರಯವನ್ನು ಪಡೆದುದರ ಪರಿಣಾಮವಾಗಿ ಈ ಹಳೆಯ ಸಂಬಂಧ ಕೆಲವು ಶತಮಾನಗಳ ಅನಂತರ (ಕ್ರಿ.ಶ.ಸು. 717) ಪುನರುಜ್ಜೀವನಗೊಂಡಿತು.

ತತ್ವಗಳು

ಸಂನ್ಯಾಸವನ್ನು ಬೋಧಿಸದ ಮಹಾಮತಗಳಲ್ಲಿ ಝರತುಷ್ಟ್ರ ಮತ ಪ್ರಮುಖವಾದುದು. ಅದು ಅಜೀವ ಬ್ರಹ್ಮಚರ್ಯವನ್ನು ಉಪದೇಶಿಸುವುದಿಲ್ಲ. ಬಹು ಪತ್ನೀತ್ವಕ್ಕೆ ಅಲ್ಲಿ ಅವಕಾಶವುಂಟು. ಝರತುಷ್ಟ್ರನೇ ಮೂರುಸಲ ಮದುವೆ ಯಾದನೆಂದು ಸಂಪ್ರದಾಯ ತಿಳಿಸುತ್ತದೆ. ಸಂತಾನವಿಲ್ಲದ ವಿಧವೆ ತನ್ನ ಗಂಡನ ತಮ್ಮನನ್ನು ಮದುವೆಯಾಗುವುದು ಸಾಮಾನ್ಯವಾದ ವಾಡಿಕೆಯಾಗಿತ್ತು. ವೆಂಡೀಡಾಡ್ ಎಂಬ ಝರತುಷ್ಟ್ರ ಮತದ ಅರ್ವಾಚೀನ ಪವಿತ್ರ ಗ್ರಂಥ ಸಂನ್ಯಾಸವನ್ನು ವಿರೋಧಿಸುವ ವಾದವನ್ನು ತುಂಬ ಸಮರ್ಥವಾಗಿ ಎತ್ತಿ ಹಿಡಿದಿದೆ :

ಸತ್ಯವಾಗಿ ನಿನಗೆ ನಾನು ಹೇಳುವುದಿಷ್ಟು. ಹೆಂಡತಿಯೊಂದಿಗಿರುವವ ಮದುವೆಯಿಲ್ಲದ ಬ್ರಹ್ಮಚಾರಿಗಿಂತ ತುಂಬ ಮೇಲು. ಮನೆಯಿಲ್ಲದವನಿಗಿಂತ ಮನೆಯುಳ್ಳವ ತುಂಬ ಲೇಸು. ಮಕ್ಕಳಿದ್ದವ ಮಕ್ಕಳಿಲ್ಲದವನಿಗಿಂತ ತುಂಬ ಉತ್ತಮ. ಐಶ್ವರ್ಯವಂತ ನಿರ್ಗತಿಕನಿಗಿಂತ ತುಂಬ ಶ್ರೇಷ್ಠ.

ಇಬ್ಬರಲ್ಲಿ ಯಾವನೊಬ್ಬನಿಗೆ ತುಂಬ ದನದ ಕೊಟ್ಟಿಗೆಗಳಿವೆಯೋ ಅವನು ತನ್ನ ವೋಹು ಮನೋವಿಗೆ (ಎಂದರೆ ಸನ್ಮನಸ್ಸಿಗೆ) ಇನ್ನೊಬ್ಬನಿಗಿಂತ ಹೆಚ್ಚು ಆಸ್ಪದವಾಗುತ್ತಾನೆ. ಮತ್ತೊಬ್ಬ ಸತ್ತವನಂತೆಯೇ ಸರಿ; ಮುಂಚಿನವನು ಇವನಿಗಿಂತ ಒಂದು ಆಸ್ಪರಾನಾದಷ್ಟು (ಎಂದರೆ ಒಂದು ದಿರ್ ಹೀನ್ ಎಂಬ ಪರ್ಷಿಯದ ನಾಣ್ಯದಷ್ಟು) ಬೆಲೆಯಲ್ಲಿ ಉತ್ತಮ, ಒಂದು ಕುರಿಯ ಬೆಲೆಯಷ್ಟು, ಒಂದು ಎತ್ತಿನ ಬೆಲೆಯಷ್ಟು, ಒಬ್ಬ ಮನುಷ್ಯನ ಬೆಲೆಯಷ್ಟು ಶ್ರೇಷ್ಠ. ಈ ಮನುಷ್ಯ ಅಸ್ಟೋ-ವಿಧೋತುವಿನೊಡನೆ (ಮೃತ್ಯುದೇವತೆ) ಹೋರಾಡಬಲ್ಲ. ಗರಿಗೂಡಿದ ಅಂಬಿನ ಇದಿರು ಸ್ಪರ್ಧಿಸಬಲ್ಲ. ಒಂದು ತೆಳ್ಳನೆಯ ಬಟ್ಟೆಯನ್ನು ಹೊದೆದು ಚಳಿಗಾಲದ ದೆವ್ವದೊಡನೆ ಸೆಣಸಬಲ್ಲ; ಕೆಟ್ಟ ಪ್ರಜಾಪೀಡಕ ಅಪರಾಜನ ವಿರುದ್ಧ ಎದ್ದು ನಿಂತು ಅವನ ತಲೆಯ ಮೇಲೆ ಹೊಡೆಯಬಲ್ಲ. ಅಷೆಮಓಗ ಎಂಬ ಉಪವಾಸದ ದುರ್ದೈವದೊಡನೆ ಕಾಳಗವೆಸಗಬಲ್ಲ.

ಝರತುಷ್ಟ್ರ ಮತ ಉಪವಾಸವನ್ನು ಬೋಧಿಸುವುದಿಲ್ಲ. ಮತಪ್ರಕ್ರಿಯೆಗಳಲ್ಲಿ ಸಹ ಮದ್ಯಪಾನವುಂಟು. ಆತನ ನೀತಿಬೋಧೆಯನ್ನು ಸೂಕ್ಷ್ಮವಾಗಿ ಮೂರು ಮಾತುಗಳಲ್ಲಿ ಹೇಳಬಹುದು. ಹೂಮ್ತ, (ಒಳ್ಳೆ ಭಾವನೆಗಳು). ಹೂಕ್ತ (ಒಳ್ಳೆ ಮಾತುಗಳು), ಹೂವೆರೆಪ್ತ (ಒಳ್ಳೆ ಕ್ರಿಯೆಗಳು). ಝರತುಷ್ಟ್ರ ಮತದವರ ಮತ್ತೊಂದು ಪವಿತ್ರ ಗ್ರಂಥ ದಿನ್‍ಕಾರ್ತ್ ಎಂಬುದು ಏನು ಹೇಳುತ್ತದೆಯೆಂದರೆ, ಮನುಷ್ಯರು ಒಬ್ಬರನ್ನೊಬ್ಬರು ತಮ್ಮ ಶಕ್ತಿ ಸಾಮಥ್ರ್ಯಗಳಿದ್ದಷ್ಟೂ ಪ್ರೀತಿಸುತ್ತ ಉಪಕರಿಸುತ್ತಿದ್ದರೆ ಅವರಿಗೆ ತುಂಬ ಸುಖವುಂಟಾಗುತ್ತದೆ ಎಂದು. ಈ ನಿರ್ದೇಶವೇ ದಾನಧರ್ಮಗಳಿಗೆ ತಳಹದಿಯಾಗಿದೆ. ಪಾರ್ಸಿಗಳೆಂದರೆ ದಾನಿಗಳು ಎಂಬಷ್ಟರಮಟ್ಟಿಗೆ ಆಗಲು ಇದೇ ಕಾರಣ. ಭಾರತದಲ್ಲಿನ ಅನೇಕ ಪಾರ್ಸಿಗಳಲ್ಲಿ ಈ ಗುಣದ ಉತ್ಕರ್ಷವನ್ನು ಇಂದಿಗೂ ಕಾಣಬಹುದಾಗಿದೆ.

ಆರ್‍ದ್ವಿರಾಫ್‍ನಾಮೆ ಹೇಳುತ್ತದೆ: ಇರುವುದು ಒಂದೇ ಒಂದು ಮಾರ್ಗ; ಅದಾವುದೆಂದರೆ ಸದ್ವರ್ತನೆ. ನೈರ್ಮಲ್ಯ ಅತ್ಯಂತ ಮುಖ್ಯವಾದುದೆಂದು ಒತ್ತಿ ಒತ್ತಿ ಹೇಳಲಾಗಿದೆ. ಝರತುಷ್ಟ್ರನಾಚೆಗಿನ ವೆಂಡೀಡಾಡ್ ಎಂಬುದು ಹೀಗೆ ಹೇಳುತ್ತದೆ: ಪ್ರಾಣದ ಬಳಿಕ ಮನುಷ್ಯರಿಗೆ ಅತ್ಯಂತ ಹಿತವಾದುದು ಯಾವುದೆಂದರೆ ನೈರ್ಮಲ್ಯ. ಓ ಝರತುಷ್ಟ್ರ, ಮರ್‍ಜ್ಡನ ಮತದಲ್ಲಿರುವ ಪಾವನತ್ವ ಯಾರಿಗೆ ಲಭಿಸುತ್ತದೆ ಎಂದರೆ, ಸತ್ಕರ್ಮಗಳಿಂದ, ಸದ್‍ವಾಕ್ಯಗಳಿಂದ ಮತ್ತು ಸತ್‍ಕಾರ್ಯಗಳಿಂದ ಯಾವನು ತನ್ನನ್ನು ಶುದ್ಧಿಸಿಕೊಳ್ಳುತ್ತಾನೋ ಅಂಥವನಿಗೆ ಝರತುಷ್ಟ್ರನ ಗಾಥೆಗಳು ಭೂವ್ಯವಸಾಯವನ್ನು ಶ್ರದ್ಧೆಯಿಂದಲೂ ಮಮತೆಯಿಂದಲೂ ಕಾಣುತ್ತಿದ್ದ ಸಮಾಜದ ಸ್ಥಿತಿಗತಿಗಳ ಚಿತ್ರವನ್ನು ಕೊಡುತ್ತವೆ.

ಮನುಷ್ಯ ಪಾಲಿತವಾದ ಸಾಧುಪ್ರಾಣಿಗಳ ಹಿಂಡುಗಳೊಂದಿಗೂ ಮಂದೆಗಳೊಂದಿಗೂ ಅದರ ಸಂಪರ್ಕ ತೀರ ಹತ್ತಿರದ್ದು. ಹಸುವಿನ ವಿಷಯದಲ್ಲಿ ಅ ಜನಕ್ಕಿರುವ ಪೂಜ್ಯ ಭಾವನೆಗೆ ಇದು ಕಾರಣವಾಯಿತು. ಬೆಹ್ರಾಂ ಯೆಸ್ತ್ ಎಂಬ ಪವಿತ್ರ ಗ್ರಂಥದಲ್ಲಿ ಈ ವಾಕ್ಯವಿದೆ: ಹಸುವಿನ ಬಲ ವರ್ಧಿಸಲಿ, ಒಳ್ಳೆ ಹಾರೈಕೆಗಳು ಅದಕ್ಕೆ ಸಲ್ಲಲಿ. ಶೋಭನವಾದ ನುಡಿಗಳು ಅದಕ್ಕೆ ಲಭಿಸಲಿ, ಒಳ್ಳೆ ಹೊದಿಕೆ ಅದಕ್ಕಿರಲಿ. ಈ ಭಾವನೆ ಹಿಂದುಗಳ ಗೋಪೂಜೆಗೂ ಝರತುಷ್ಟ್ರ ಮತಕ್ಕೂ ನಿಕಟ ಸಂಬಂಧವಿರುವುದರ ಮತ್ತೊಂದು ನಿದರ್ಶನ.

ಒಳ್ಳೆಯ ಆತ್ಮಕ್ಕೂ ಕೆಟ್ಟ ಆತ್ಮಕ್ಕೂ ಇರುವ ದ್ವೈತವನ್ನು ಝರತುಷ್ಟ್ರನ ಮತ ಎತ್ತಿಹಿಡಿಯುತ್ತದೆ ಎಂದು ಅನೇಕ ವೇಳೆ ಹೇಳುವುದುಂಟು. ಕೇಡಿನ ಪ್ರಶ್ನೆಗಿಂತ ತೊಡಕಾದ ಪ್ರಶ್ನೆ ಬೇರೊಂದಿಲ್ಲ: ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಪ್ರಶ್ನೆಗೆ ಉತ್ತರ ಕೊಡಲು ಪ್ರಯತ್ನಿಸಿದವ ಝರತುಷ್ಟ್ರ. ಅರ್ವಾಚೀನ ಝರತುಷ್ಟ್ರ ಮತದಲ್ಲಿ ಮುಖ್ಯವಾಗಿ ವೆಂಡೀಡಾಡ್ ಎಂಬುದರಲ್ಲಿ ಈ ದ್ವೈತ ಜಗತ್ತಿನಲ್ಲಿ ಎಲ್ಲೆಡೆಯಲ್ಲೂ ಹಬ್ಬಿದೆ ಎಂದೂ ಇಲ್ಲಿರುವುದೆಲ್ಲ ಸ್ಪೆಂಟಾಮನ್ಯು ಎಂದರೆ ಸತ್‍ದೈವ, ಇಲ್ಲವೆ, ಆಂಗ್ರಮನ್ಯು ಎಂದರೆ ದುಷ್ಟದೈವ ಇವೆರಡರ ಸೃಷ್ಟಿಯೆಂದೂ ನಿರೂಪಣೆಯಿದೆ. ಆದರೆ ದಾರ್ಶನಿಕ ದೃಷ್ಟಿಯಲ್ಲಿ ಇದನ್ನು ಸಮರ್ಥಿಸುವುದು ಕಷ್ಟ. ಏಕೆಂದರೆ ಪ್ರಕೃತಿಯ ವಿತರಣೆಯಲ್ಲಿ ಯಾವುದೊಂದೂ ತೀರ ಆಪ್ರಯೋಜಕ ಅಥವಾ ಕೆಟ್ಟದು ಎನಿಸದು. ಪ್ರತಿಯೊಂದು ಗಿಡ, ಪ್ರತಿಯೊಂದು ಪ್ರಾಣಿ, ಪ್ರತಿಯೊಂದು ಕೀಟಕ್ಕೂ ಅದರದರ ಉಪಯೋಗತೆ ಅದಕ್ಕೆ ಉಂಟೇ ಉಂಟು, ನಿರ್ವಹಿಸತಕ್ಕ ಕಾರ್ಯವುಂಟು. ಝರತುಷ್ಟ್ರ ತನ್ನ ಗಾಥೆಗಳಲ್ಲಿ ಬೋಧಿಸಿದ ದ್ವೈತ ನಿಜವಾಗಿ ದಾರ್ಶನಿಕ ದೃಷ್ಟಿಯಿಂದ ಸಿದ್ಧಾಂತಿಸಿದುದಲ್ಲ ; ನೈತಿಕ ದೃಷ್ಟಿಯಿಂದ ಪ್ರತಿಷ್ಠಾಪಿಸಿದುದು. ಆತ ಒತ್ತಿ ಹೇಳಬಯಸಿದುದು, ಸದ್ಭಾವನೆಯಿಂದ ಪ್ರೇರಿತನಾದ ಮನುಷ್ಯನ ಕರ್ಮಗಳಿಗೂ ದುರ್ಭಾವನೆಯಿಂದ ಪ್ರೇರಿತನಾದ ಮನುಷ್ಯನ ಕರ್ಮಗಳಿಗೂ ಇರುವ ಅಂತರವನ್ನು ಕುರಿತು. ಮನೋವಾಕ್ಕರ್ಮಗಳಲ್ಲಿ ವಿರುದ್ಧವಾಗಿರುವವನಿಗೆ ಸತ್ಕರ್ಮ ಪ್ರೇರಣೆ, ಮಾನವ ಸಮಾಜ ಸುಖದಿಂದ ಬಾಳುವಂತಾಗಲು ಮನುಷ್ಯರನ್ನು ಉತ್ತಮಗೊಳಿಸುವ ಪ್ರೇರಣೆ, ಇದ್ದೇ ಇರುತ್ತದೆ. ಈ ಪ್ರೇರಣೆಯಿಂದ ಪ್ರಭಾವಿತವಾಗದಿರುವ ಯಾವುದೂ ಕೇಡಿಗಳಿಯುವ ಸಂಭವವುಂಟು. ಇದೀಗ ಝರತುಷ್ಟ್ರನ ದ್ವೈತದ ತಿರುಳು. ಕೆಲವು ಕ್ರಿಶ್ಚನ್ ಗ್ರಂಥಕರ್ತರು ಝರತುಷ್ಟ್ರ ಮತದ ಈ ದ್ವೈತ ಏಕದೈವತ್ವ ತತ್ತ್ವವನ್ನು ನಿರಾಕರಿಸುತ್ತದೆ ಎಂದು ವಾದಿಸಲು ಹವಣಿಸಿದ್ದಾರೆ, ಮತ್ತು ಕೆಲವು ಪಾರ್ಸಿ ವಿದ್ವಾಂಸರು ಈ ವಿಮರ್ಶೆಯಿಂದ ಪ್ರಭಾವಿತರಾಗಿ ಝರತುಷ್ಟ್ರ ಮತದಲ್ಲಿನ ಈ ದ್ವೈತ ಅದರ ಕೊನೆಯ ನಿಲುವಲ್ಲ ಎಂದು ತೋರಿಸಲು ಯತ್ನಿಸಿದ್ದಾರೆ. ವಸ್ತುತಃ ಈ ವಿದ್ವಾಂಸರು ಈ ದ್ವೈತದ ಅಂತರಾರ್ಧವನ್ನು ಕಂಡುಕೊಳ್ಳಲು ಹೇಗೆ ಅಸಮರ್ಥರಾಗಿದ್ದಾರೆ ಎಂಬುದನ್ನು ಇದು ತೋರಿಕೊಡುತ್ತದೆ. ದೈವ ಒಳ್ಳೆಯದೆಂದು ಭಾವಿಸುವ ಯಾವ ಏಕದೈವ ಮತದಲ್ಲೂ ಸಹ ಕೇಡಿನ ಸಮಸ್ಯೆ ಬೃಹದಾಕಾರವಾಗಿ ತಲೆದೋರುತ್ತದೆ. ಏಕೆಂದರೆ ಅಲ್ಲಿ ಅನಿವಾರ್ಯವಾಗಿ ಈ ಪ್ರಶ್ನೆ ಏಳುತ್ತದೆ : ದೇವರು ಒಳ್ಳೆಯವನಾದರೆ ಕೇಡನ್ನೇತಕ್ಕೆ ನಿರ್ಮಿಸಿದ ? ದೇವರ ಒಳ್ಳೆಯತನವನ್ನು ಕಾಪಿಸುವುದಕ್ಕಾಗಿ, ಕೆಡುಕಿನ ಪ್ರಾದುರ್ಭಾವಕ್ಕೆ ಮತ್ತೊಂದು ದೈವವಿರುದ್ಧ ಶಕ್ತಿ ಕಾರಣವೆಂದು ನಿರೂಪಿಸಲಾಗಿದೆ. ಯಾವ ಏಕದೈವಮತವಾಗಲಿ ಇದರಿಂದ ಮುಕ್ತವಾಗಿಲ್ಲ. ಕ್ರೈಸ್ತ ಮತ, ತನ್ನ ತ್ರಯೈಕ್ಯ ತತ್ತ್ವದಿಂದ ಉದ್ಭವಿಸಿರುವ ದೈವಶಾಸ್ತ್ರದ ತೊಡಕುಗಳ ಜೊತೆಗೆ, ಝರತುಷ್ಟ್ರ ಮತದ ಅಂಗ್ರಮನ್ಯುವಿಗೆ ಸರಿದೂಗುವ ಸೈತಾನ್ ಎಂಬುವನ ಶಕ್ತಿಯನ್ನು ವಸ್ತುತಃ ಗಣನೆಗೆ ತಂದುಕೊಳ್ಳಬೇಕಾಗಿದೆ. ಹಾಗೆಯೆ ಏಕದೈವ ಪ್ರತಿಪಾದಕವಾದ ಎಂಥ ಮತದೊಡನೆಯೂ ಸರಿತೂಗಬಲ್ಲ ಇಸ್ಲಾಂ ಮತವೂ ಇಬ್ಲಿಸ್ ಎಂಬವನ ಶಕ್ತಿಯನ್ನು ಗಣನೆಗೆ ತಂದು ಕೊಳ್ಳುತ್ತದೆ. ಆಂಗ್ರಮನ್ಯುವಾಗಲಿ, ಸೈತಾನನಾಗಲಿ, ಇಬ್ಲಿಸ್ ಆಗಲಿ ಸ್ವತಃ ಶಕ್ತಿಶಾಲಿಗಳಲ್ಲ. ಸನ್ಮಾರ್ಗವನ್ನು ಬಿಟ್ಟು ಹೋಗಲು ಮಾನವನ ಆತ್ಮದಲ್ಲಿರುವ ದುಷ್ಟ ಪ್ರೇರಣೆಯನ್ನು ಈ ಪ್ರತಿದೈವಗಳು ಒಂದೊಂದೂ ಪ್ರತಿನಿಧಿಸುತ್ತವೆ. ಆಲ್‍ಬರ್ಟ್ ಷ್ವೈಟ್ಸರ್ ಹೇಳುವಂತೆ `ಪ್ರತಿಯೊಂದು ಯುಕ್ತಿನಿಷ್ಠಮತವೂ ಇವೆರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕು. ಇಲ್ಲ ಅದು ನೀತಿಯನ್ನೇ ಆಧಾರವಾಗಿ ಉಳ್ಳ ಮತವಾಗಿರಬೇಕು ಅಥವಾ ಈ ಸೃಷ್ಟಿಯನ್ನು ವಿಶದೀಕರಿಸುವ ಮತವಾಗಿರಬೇಕು. ಹೆಚ್ಚು ಬೆಲೆಯುಳ್ಳದ್ದೆಂದು ಕ್ರೈಸ್ತ ಮತದವರಾದ ನಾವು ಮೊದಲನೆಯದನ್ನು ಅರಿಸಿಕೊಂಡೆವು. ಅತ್ಯಂತ ಶ್ರೇಷ್ಠವಾದ ಏಕದೈವನಿಷ್ಠ ಮತಗಳಲ್ಲಿಯೂ ಈ ದ್ವೈತ ನೈತಿಕವಾದದ್ದೇ ಹೊರತು ಬೇರೆಯಲ್ಲ. ಯಾರು ಒಳತನ್ನು ಇಚ್ಚಿಸುತ್ತಾನೋ ಆತನ ಇಚ್ಛೆ ದೈವೇಚ್ಛೆಯೊಂದಿಗೆ ಮಿಲಿತವಾಗಿದೆ. ಕೆಟ್ಟದ್ದನ್ನು ಇಚ್ಛಿಸುವುದು ದೈವೇಚ್ಛೆಯನ್ನು ನಿರಾಕರಿಸುತ್ತಾನೆ ಮತ್ತು ಅಲಂಕಾರಿಕವಾಗಿ ಹೇಳಬಹುದಾದರೆ, ಕೇಡಿನ ಸತ್ತ್ವದ ಹಾದಿಯನ್ನು ಹಿಡಿಯುತ್ತಾನೆ, ಕೇಡಿನ ಸಮಸ್ಯೆಗೆ ಸದುತ್ತರವನ್ನು ಝರತುಷ್ಟ್ರ ಮತ ಕೊಟ್ಟಿದೆಯೆಂದು ಧಾರಾಳವಾಗಿ ಹೇಳಬಹುದು. ಇದನ್ನು ಎತ್ತಿ ಹಿಡಿಯುವವರು ಇಪ್ಪತ್ತನೆಯ ಶತಮಾನದಲ್ಲಿಯೂ ಇದ್ದಾರೆ. ವಿಲಿಯಂ ಜೇಮ್ಸನ ದರ್ಶನದಲ್ಲಿಯೂ ಇದರ ಹೊಳವಿದೆ.

ಝರತುಷ್ಟ್ರ ಮತ ತನ್ನ ದ್ವೈತ ತತ್ತ್ವದಿಂದ ಮನುಷ್ಯನ ಚರಮಗತಿಯ ಸಿದ್ಧಾಂತವನ್ನು ಬೆಳೆಸುತ್ತದೆ. ವಸ್ತುತಃ ಆತ್ಮ ಅಮೃತವೆಂದು ಮೊದಲ ಬಾರಿಗೆ ನುಡಿದವ ಝರತುಷ್ಟ್ರನೆಂದರೆ ತಪ್ಪಾಗಲಾರದು. ಒಳ್ಳೆಯವರ ಆತ್ಮಗಳು ಸ್ವರ್ಗಕ್ಕೆ ಹೋಗುತ್ತವೆ. ಕೆಡುಕರವು ನರಕಕ್ಕಿಳಿಯುತ್ತವೆ. ಯಹೂದ್ಯರು ಬ್ಯಾಬಿಲೋನಿಯದಲ್ಲಿ ಸೆರೆ ಸಿಕ್ಕಿದಾಗ ಈ ನಂಬಿಕೆಯನ್ನು ಪರ್ಷಿಯನ್ನರಿಂದ ಪಡೆದುಕೊಂಡರು. ಕೋಟಿಗಟ್ಟಲೆ ಮುಸ್ಲಿಮರಿಂದಲೂ ಕ್ರಿಶ್ಚನ್ನರಿಂದಲೂ ಪರಿಗ್ರಹೀತವಾದ ನಂಬಿಕೆ ಇದು. ಝರತುಷ್ಟ್ರ ಮತದವರ ಸಾಹಿತ್ಯ ಮುಖ್ಯವಾಗಿ ಆ ತತ್ತ್ವದ ವಿಚಾರದಲ್ಲಿ ತುಂಬ ಸಂಪನ್ನವಾಗಿದೆ. ದದಿಸ್ತಾನ್-ಇ-ದಿನಿಕ್, ಮಿನೊ-ಖೆರಾದ್ ಮತ್ತು ಆರ್‍ದ್ವಿರಾಫ್ ನಾಮೆ ಎಂಬವು ಸ್ವರ್ಗ ಮತ್ತು ನರಕಗಳ ಸುಸ್ಪಷ್ಟ ವರ್ಣನೆಯನ್ನುಕೊಡುತ್ತವೆ. ಸತ್ತ ನಾಲ್ಕನೆಯ ದಿನ ಒಳ್ಳೆಯವನ ಆತ್ಮವನ್ನು ಆತನ ಪುಣ್ಯಕರ್ಮಸ್ವರೂಪಿಣಿಯಾದ ಸುಂದರ ದೇವತೆಯೊಬ್ಬಳು ಇದಿರುಗೊಳ್ಳುತ್ತಾಳೆ. ಇದೇ ರೀತಿಯಲ್ಲಿ ಕೇಡಿಗನ ಆತ್ಮವನ್ನು ಇದಿರುಗೊಳ್ಳುವವಳು ಆತನ ಪಾಪಿಷ್ಠ ಜೀವನದ ಪ್ರತೀಕವೆಂದು ಹೇಳಲಾಗಿರುವ ಕುರೂಪಿ ವೃದ್ಧೆಯೊಬ್ಬಳು.

ಆಚರಣೆಗಳು

ಪಾರ್ಸಿಗಳ ಅಚರಣೆಗಳು ಹಿಂದೂಗಳ ಆಚಾರಗಳಿಂದ ತುಂಬ ಪ್ರಭಾವಿತವಾಗಿವೆ. ಮದುವೆಯ ಶಾಸ್ತ್ರಗಳಲ್ಲಿ ಅವೆಸ್ತದಲ್ಲಿನ ಸ್ತೋತ್ರಗಳ ಜೊತೆಗೆ ಸಂಸ್ಕೃತದ ಸ್ತೋತ್ರಗಳನ್ನೂ ಪಠಿಸುತ್ತಾರೆ. ಯಜ್ಞೋಪವೀತಧಾರಣೆ ಗಂಡಸರಿಗೂ ಹೆಂಗಸರಿಗೂ ಉಂಟು. ಸಾಮಾನ್ಯವಾಗಿ ಅವರು ವಯಸ್ಸಿಗೆ ಬರುವ ಮುಂಚೆ ಈ ಕರ್ಮ ನಡೆಯುತ್ತದೆ. ಆದರೆ ಮೃತದೇಹದ ಚರಮ ಸಂಸ್ಕಾರ ಕ್ರಮ ಮಾತ್ರ ಪಾರ್ಸಿಗಳಿಗೇ ವಿಶಿಷ್ಟವಾದದ್ದು. ಮೃತದೇಹಗಳನ್ನವರು ಹೂಳುವುದೂ ಇಲ್ಲ, ಸುಡುವುದೂ ಇಲ್ಲ. ಎತ್ತರದ ಸ್ಥಳಗಳಲ್ಲಿ ಅವನ್ನು ಗಾಳಿಗೊಡ್ಡಿ ಬಿಡುತ್ತಾರೆ. ಒಂದು ಕ್ಷಣದಲ್ಲಿ ಅವನ್ನು ರಣ ಹದ್ದುಗಳು ತಿಂದುಹಾಕುತ್ತವೆ. ಅಗ್ನಿಯಾಗಲಿ ಭೂಮಿಯಾಗಲಿ ಅಪವಿತ್ರವಾಗಬಾರದೆಂಬ ಭಾವನೆ ಈ ಪದ್ಧತಿಯಲ್ಲಿ ಅಡಗಿದೆಯೆನ್ನಲಾಗಿದೆ. ಇದಲ್ಲದೆ ಮೃತದೇಹಗಳನ್ನು ಬೇಗನೆ ಸಂಸ್ಕರಿಸಲು ಈ ಮಾರ್ಗ ಸಮೀಚೀನವೆಂಬ ವಾದವೂ ಉಂಟು. ಬೆಟ್ಟದ ಮೇಲೆ ಹೆಣಗಳನ್ನು ಬಯಲಿಗೊಡ್ಡುವ ಇರಾನಿನ ಪ್ರಾಚೀನಾಚಾರ ಇದಕ್ಕೆ ಮೂಲ ಎಂದು ತೋರುತ್ತದೆ.

ಝರತುಷ್ಟ್ರ ಮತೀಯರ ಸಂಖ್ಯೆ

ಆಧುನಿಕ ಕಾಲದಲ್ಲಿ, ಲೆಕ್ಕಹಾಕಿದರೆ, ಪ್ರಪಂಚದಲ್ಲೆಲ್ಲ ನೂರ ಹತ್ತು ಸಾವಿರಕ್ಕೆ ಸ್ವಲ್ಪ ಮಿಗಿಲಾಗಿದ್ದಾರೆ, ಝರತುಷ್ಟ್ರ ಅನುಯಾಯಿಗಳು. ಪರ್ಷಿಯದಲ್ಲುಳಿದಿರುವ ಸುಮಾರು ಹತ್ತು ಸಾವಿರ ಮಂದಿಯನ್ನು ಬಿಟ್ಟರೆ, ಮಿಕ್ಕವರೆಲ್ಲ ಭಾರತದಲ್ಲಿದ್ದಾರೆ. ಮತ್ತು ಇವರ ಪೈಕಿ ಹೆಚ್ಚು ಮಂದಿ ಮುಂಬಯಿ ಪಟ್ಟಣದಲ್ಲೇ ಇದ್ದಾರೆ, ಝರತುಷ್ಟ್ರ ಮತದ ದೇವಸ್ಥಾನಗಳು ಅಗ್ನಿದೇವತಾ ಮಂದಿರಗಳಂತಿವೆ. ಅವುಗಳಲ್ಲಿ ಮೂರು ದರ್ಜೆಗಳುಂಟು-ಅತಾಷ್ ಬೆಹ್ರಾಂಗಳು, ಆಗಿಯಾರಿಗಳು, ದಾದ್‍ಗಾಗಳು ಎಂದು. ಅತಾಷ್ ಬೆಹ್ರಾಂಗಳ ಸಂಖ್ಯೆ ಕೇವಲ ಎಂಟು; ಉದ್‍ವಾಡದಲ್ಲಿ ಒಂದು, ನವಸಾರಿಯಲ್ಲಿ ಒಂದು, ಸೂರತ್ತಿನಲ್ಲಿ ಎರಡು, ಮುಂಬಯಿಯಲ್ಲಿ ನಾಲ್ಕು. ಇವುಗಳ ಪೈಕಿ ಅತ್ಯಂತ ಪ್ರಾಚೀನವಾದುದು ಇರಾನ್‍ಷ ಎಂಬ ಹೆಸರಾದಂಥ ಅಗ್ನಿ. ಇದು ಸಾವಿರದ ಮುನ್ನೂರ ವರ್ಷಗಳಿಂದ ಜಾಜ್ವಲ್ಯ ಮಾನವಾಗಿ ಉರಿಯುತ್ತಿದೆ. ಮಾನವನ ಚರಿತ್ರೆಯಲ್ಲೇ ಇದು ಅಸಾಧಾರಣವಾದ ವಿಷಯ. ಪವಿತ್ರಾಗ್ನಿ ಪ್ರತಿಷ್ಠಾಪಿತವಾದ ಕೂಡಲೆ ಅದನ್ನು ಗಂಟೆ ಗಂಟೆಗೂ ದಿನ ದಿನಕ್ಕೂ ಮಾಸ ಮಾಸಕ್ಕೂ ವರ್ಷ ವರ್ಷಕ್ಕೂ ಶತಮಾನದಿಂದ ಶತಮಾನದ ಪರ್ಯಂತವೂ ಜ್ವಲಂತವಾಗಿರಿಸಬೇಕು. ಅದು ಆಕಾಂಕ್ಷೆಯ ಸಂಕೇತ, ಪಾವನತ್ವದ ಸಂಕೇತ. ಏಕೆಂದರೆ ಪಾವನಗೊಳಿಸುವುದೇ ಅಗ್ನಿಯ ಕರ್ಮ.

ಈಗಲೂ ಪಾಶ್ಚಾತ್ಯ ವಿದ್ಯಾಪ್ರಭಾವದಿಂದ ಅವರ ಲೌಕಿಕಾಸಕ್ತಿ ಬೆಳೆದಿದ್ದರೂ ಪಾರ್ಸಿಗಳಲ್ಲಿ ಅನೇಕ ಮಂದಿ ತುಂಬ ಮತಶ್ರದ್ಧೆಯುಳ್ಳವರಾಗಿದ್ದಾರೆ.

ತಾನು ಉಬ್ಬಿ ಹುಬ್ಬುತ್ತಿದ್ದ ಎರಡುಸಾವಿರ ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಝರತುಷ್ಟ್ರ ಮತ ಇರಾನಿನ ಪೂರ್ವ ಮತ್ತು ಪಶ್ಚಿಮ ದಿಗ್ಭಾಗಗಳ ಕೋಟ್ಯಂತರ ಪ್ರಜೆಗಳ ಸಚೇತನ ಸಂಪರ್ಕವನ್ನು ಹೊಂದಿತು ಮತ್ತು ಈ ಅವಧಿಯಲ್ಲಿ ಇತರ ಜನಾಂಗಗಳಿಗೂ ತನ್ನ ನೈತಿಕ ಹಾಗೂ ಆಧ್ಯಾತ್ಮಿಕ ಸ್ಫೂರ್ತಿಯನ್ನು ಬೀರಿತು. ಹೀಬ್ರೂಗಳೂ ಕ್ರಿಶ್ಚನರೂ ಮುಸಲ್ಮಾನರೂ ತಾವು ಇಚ್ಛಿಸಿಯೋ ಇಚ್ಛಿಸದೆಯೋ ಈ ಮತದ ಸತ್ತ್ವವನ್ನು ತಮ್ಮದನ್ನಾಗಿಸಿಕೊಂಡಿದ್ದಾರೆ. ಅದರಂತೆ ಕಾಲಕಾಲಕ್ಕೆ ಝರತುಷ್ಟ್ರ ಮತವೂ ಬೇರೆಯವರಿಂದ ಒಳಿತನ್ನು ಪಡೆದುಕೊಂಡಿದೆ. ಅಲ್ಲದೆ ಇದರಲ್ಲಿ ಯಾವುದು ಶ್ರೇಷ್ಠತಮವೋ ಅದು ಇತರ ಮತಗಳ ಶ್ರೇಷ್ಠತಮಾಂಶಗಳಲ್ಲಿ ನೆಲೆಗೊಂಡುಬಿಟ್ಟಿದೆ.

ಝರತುಷ್ಟ್ರ ಮತ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಝರತುಷ್ಟ್ರ ಮತ ಝರತುಷ್ಟ್ರನ ಕಾಲಝರತುಷ್ಟ್ರ ಮತ ವೈದಿಕ ಹಿಂದೂ ಮತಕ್ಕೂ ಕ್ಕೂ ಇರುವ ಸಂಬಂಧಝರತುಷ್ಟ್ರ ಮತ ತತ್ವಗಳುಝರತುಷ್ಟ್ರ ಮತ ಆಚರಣೆಗಳುಝರತುಷ್ಟ್ರ ಮತ ೀಯರ ಸಂಖ್ಯೆಝರತುಷ್ಟ್ರ ಮತ

🔥 Trending searches on Wiki ಕನ್ನಡ:

ವಿಜಯನಗರಕನ್ನಡ ಸಂಧಿಬಾಳೆ ಹಣ್ಣುಸಂಚಿ ಹೊನ್ನಮ್ಮಜವಾಹರ‌ಲಾಲ್ ನೆಹರುಪಿ.ಲಂಕೇಶ್ಜೈನ ಧರ್ಮಕನ್ನಡದಲ್ಲಿ ಸಣ್ಣ ಕಥೆಗಳುಜೋಳಸಾವಿತ್ರಿಬಾಯಿ ಫುಲೆಕ್ರೈಸ್ತ ಧರ್ಮನವ್ಯಕರ್ನಾಟಕದ ಇತಿಹಾಸಪಶ್ಚಿಮ ಘಟ್ಟಗಳುಭಾರತದ ಇತಿಹಾಸಸೀತೆಶರಣಬಸವೇಶ್ವರ ದೇವಸ್ಥಾನ ಕಲಬುರಗಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಬಹುವ್ರೀಹಿ ಸಮಾಸಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಸಜ್ಜೆಆರೋಗ್ಯಶನಿ (ಗ್ರಹ)ಪ್ರವಾಹಶಾತವಾಹನರುಅಕ್ಷಾಂಶ ಮತ್ತು ರೇಖಾಂಶಜಾಹೀರಾತುಕಾಲಾಯ ತಸ್ಮೈ ನಮಃ (ಚಲನಚಿತ್ರ)ಬೆಸಗರಹಳ್ಳಿ ರಾಮಣ್ಣಇಮ್ಮಡಿ ಪುಲಕೇಶಿಭಾರತದ ರಾಷ್ಟ್ರೀಯ ಚಿಹ್ನೆಸಾಂಚಿಯ ಬೌದ್ಧ ಸ್ಮಾರಕಗಳುಆಮದು ಮತ್ತು ರಫ್ತುಕಾಮಸೂತ್ರವಿ. ಕೃ. ಗೋಕಾಕಕನ್ನಡದಲ್ಲಿ ನವ್ಯಕಾವ್ಯಶ್ವೇತ ಪತ್ರನೈಸರ್ಗಿಕ ಸಂಪನ್ಮೂಲಭಾರತೀಯ ಅಂಚೆ ಸೇವೆಬಾದಾಮಿರಾಷ್ಟ್ರೀಯತೆಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಸಾರಾ ಅಬೂಬಕ್ಕರ್ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ವಿಕ್ರಮಾರ್ಜುನ ವಿಜಯದಲಿತಸರ್ವಜ್ಞಕರ್ನಾಟಕ ಸರ್ಕಾರದ ಮುಂಗಡ ಪತ್ರ ೨೦೨೧-೨೨ರಾಮಾಯಣಕಾಟೇರಕರಗಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಹಳೇಬೀಡುಗೋದಾವರಿಅತೀ ಹೆಚ್ಚು ಹಣ ಗಳಿಸಿದ ಕನ್ನಡ ಚಲನಚಿತ್ರಗಳ ಪಟ್ಟಿಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲಭಾರತದ ತ್ರಿವರ್ಣ ಧ್ವಜಮಡಿವಾಳ ಮಾಚಿದೇವಭಾರತದ ಸರ್ವೋಚ್ಛ ನ್ಯಾಯಾಲಯಲಕ್ಷ್ಮೀಶಗಿರೀಶ್ ಕಾರ್ನಾಡ್ಚಂದ್ರ (ದೇವತೆ)ಸೌಂದರ್ಯ (ಚಿತ್ರನಟಿ)ಅಕ್ಬರ್ದೇವರ/ಜೇಡರ ದಾಸಿಮಯ್ಯಮಾರುಕಟ್ಟೆಪುನೀತ್ ರಾಜ್‍ಕುಮಾರ್ಚಂದ್ರಗುಪ್ತ ಮೌರ್ಯಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕೆ. ಎಸ್. ನರಸಿಂಹಸ್ವಾಮಿಭಾರತದ ಸಂಯುಕ್ತ ಪದ್ಧತಿಹಲ್ಮಿಡಿ ಶಾಸನಸಂಶೋಧನೆಝಾನ್ಸಿಭೋವಿಭೀಮಸೇನಟೊಮೇಟೊಭಾರತೀಯ ಸ್ಟೇಟ್ ಬ್ಯಾಂಕ್ಶ್ರೀ ರಾಮ ನವಮಿ🡆 More