ವೈದ್ಯಶಾಸ್ತ್ರದಲ್ಲಿ, ಕೆಮ್ಮು ಉಸಿರಾಟದ ದೊಡ್ಡ ಸಾಗುನಾಳಗಳನ್ನು ಹೆಚ್ಚುವರಿ ರಸಗಳು, ಉದ್ರೇಕಕಾರಿಗಳು, ಬಾಹ್ಯ ಕಣಗಳು ಮತ್ತು ಸೂಕ್ಷ್ಮಜೀವಿಗಳಿಂದ ಮುಕ್ತವಾಗಿಸಲು ನೆರವಾಗುವ ಒಂದು ಹಠಾತ್ ಮತ್ತು ಹಲವುವೇಳೆ ಪುನರಾವರ್ತಿಸುವ ರಕ್ಷಣಾ ನಿರಿಚ್ಛಾ ಪ್ರತಿಕ್ರಿಯೆ.
ಕೆಮ್ಮಿನ ನಿರಿಚ್ಛಾ ಪ್ರತಿಕ್ರಿಯೆಯು ಮೂರು ಹಂತಗಳನ್ನು ಒಳಗೊಳ್ಳುತ್ತದೆ: ಉಚ್ಛ್ವಾಸ, ಮುಚ್ಚಿದ ಕಂಠದ್ವಾರದ ವಿರುದ್ಧ ಬಲವಂತದ ನಿಶ್ವಾಸ, ಮತ್ತು ಕಂಠದ್ವಾರದ ತೆರೆಯುವಿಕೆಯ ತರುವಾಯ ಶ್ವಾಸಕೋಶಗಳಿಂದ ಗಾಳಿಯ ರಭಸದ ಬಿಡುಗಡೆ, ಸಾಮಾನ್ಯವಾಗಿ ವಿಶಿಷ್ಟವಾದ ಶಬ್ದದ ಸಹಿತ. ಕೆಮ್ಮು ಸ್ವಯಂಪ್ರೇರಿತವಾಗಿ ಅಥವಾ ಅನೈಚ್ಛಿಕವಾಗಿ ಆಗಬಹುದು, ಆದರೆ ಹಲವುವೇಳೆ ಅದು ಅನೈಚ್ಛಿಕವಾಗಿರುತ್ತದೆ.
ಶ್ವಾಸೇಂದ್ರಿಯ ಪ್ರದೇಶಕ್ಕೆ ರೋಗಾಣುಗಳು, ಹಾನಿಕರವಾದ ಕೊಳೆ, ಕೆಟ್ಟವಾಯು, ದೂಳು, ಪುಷ್ಪಪರಾಗಗಳು ಇತ್ಯಾದಿ ಬಾಹ್ಯ ಸೂಕ್ಷ್ಮವಸ್ತುಗಳು ಸೇರಿಕೊಂಡಾಗ ಆ ಪ್ರದೇಶ ಕೆರಳಿ ಉಂಟಾಗುವ ಒಂದು ನಿರಿಚ್ಛಾ ಪ್ರತಿಕ್ರಿಯೆ. ಇದು ಶ್ವಾಸೇಂದ್ರಿಯಗಳನ್ನು ಶುದ್ಧಗೊಳಿಸುವ ನೈಸರ್ಗಿಕ ವಿಧಾನ.
ಸಾಮಾನ್ಯವಾಗಿ ಕೆಮ್ಮು ರೋಗದ ಚಿಹ್ನೆ. ಹೊಗೆಸೊಪ್ಪಿನ ಅತಿಯಾದ ಸೇವನೆ, ಧ್ವನಿನಾಳಗಳನ್ನು ಸರಿಯಾಗಿ ಉಪಯೋಗಿಸದೆ ಇರುವುದು ಮುಂತಾದ ಕಾರಣಗಳಿಂದ ಕೆಮ್ಮು ಉಂಟಾಗುತ್ತದೆ. ಕಿರುನಾಲಗೆ ಮತ್ತು ಅಡಿನಾಯ್ಡ್ ಗ್ರಂಥಿಗಳ ಊತದಿಂದಲೂ ತೀವ್ರವಾದ ಶೀತದಿಂದಲೂ ಕೆಮ್ಮು ಕೆರಳುವುದುಂಟು.
ದೀರ್ಘವಾಗಿ ಉಸಿರನ್ನು ತೆಗೆದುಕೊಂಡ ತರುವಾಯ ಧ್ವನಿತಂತುಗಳು ಇದ್ದಕ್ಕಿದ್ದಂತೆ ತೆರೆದುಕೊಂಡು ಶ್ವಾಸಕೋಶಗಳಿಂದ ಗಾಳಿ ಬಲವಂತವಾಗಿ ಹೊರದೂಡಲ್ಪಡುತ್ತದೆ; ಆಗ ಅದು ಧ್ವನಿಪೆಟ್ಟಿಗೆ ಅಥವಾ ಕೆಳವಾಯುನಾಳಗಳಲ್ಲಿ ಸೇರಿಕೊಂಡಿದ್ದ ಕೆರಳಿಕೆ ಉಂಟು ಮಾಡುವ ವಸ್ತುಗಳನ್ನು ತನ್ನ ಜೊತೆಯಲ್ಲೇ ಒಯ್ಯುತ್ತದೆ; ಇದರಿಂದ ಕೆಮ್ಮು ಉಂಟಾಗುತ್ತದೆ. ದೇಹದ ಯಾವುದಾದರೂ ಒಂದು ಭಾಗದಲ್ಲಿ ಕೆರಳಿಕೆ ಆದಾಗ ಕೆಮ್ಮು ಉಂಟಾಗುವುದರಿಂದ ಇದೊಂದು ನಿರಿಚ್ಛಾ ಪ್ರತಿಕ್ರಿಯೆ. ಕೆರಳಿಕೆ ಮಿದುಳು ಅಥವಾ ಬೆನ್ನುಹುರಿಯಲ್ಲಿ ಒಂದು ನರದ ಕೇಂದ್ರಕ್ಕೆ ನರದ ಪ್ರೇರಣೆಯನ್ನು ಒಯ್ಯುವಂತೆ ಮಾಡಿ ಆ ಕೇಂದ್ರದಲ್ಲಿ ನರಗಳ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಆ ಶಕ್ತಿ ಬೇರೆ ನರಗಳ ಮೂಲಕ ಹಾದು, ಸ್ನಾಯುಗಳ ಸಂಕೋಚನೆಗೆ, ಗ್ರಂಥಿಯ ಚಟುವಟಿಕೆಗೆ ಕಾರಣವಾಗುತ್ತದೆ. ಕೆಮ್ಮಿನ ನರದ ಕೇಂದ್ರ ಮಿದುಳಿನ ಅತ್ಯಂತ ಕೆಳಭಾಗವಾದ ಮಿಡುಲ್ಲ ಅಬ್ಲಾಂಗೇಟದಲ್ಲಿದೆ.
ಕೆರಳಿಕೆ ಸಾಮಾನ್ಯವಾಗಿ ಉಂಟಾಗುವುದು ಧ್ವನಿಪೆಟ್ಟಿಗೆ ಅಥವಾ ಅದರ ಕೆಳಗಿನ ವಾಯು ನಾಳಗಳಲ್ಲಿ. ತಪ್ಪು ದಾರಿಯಲ್ಲಿ ಹೋದ ಆಹಾರದ ಚೂರು ಬಲವಂತವಾಗಿ ಹೊರದೂಡಲ್ಪಡುತ್ತದೆ. ಕೆಮ್ಮು ಹೇಗೆ ಉಪಯೋಗಕರವಾಗಿ ಪರಿಣಮಿಸಬಹುದು ಎಂಬುದಕ್ಕೆ ಇದು ನಿದರ್ಶನ. ರಕ್ತಸ್ರಾವ ಅಥವಾ ಯಾವುದೇ ಹೊರಗಿನ ವಸ್ತು ಕೆರಳಿಕೆಯನ್ನು ಉಂಟುಮಾಡಬಹುದು. ಆಗ ಇದೇ ವಿಧಾನದಿಂದ ಅದು ಹೊರ ಹಾಕಲ್ಪಡುತ್ತದೆ. ಇಂಥ ಸಂದರ್ಭಗಳಲ್ಲೆಲ್ಲ ಕೆಮ್ಮನ್ನು ನಿಲ್ಲಿಸುವುದು ಸರಿಯಲ್ಲ. ಬೇಕಾದರೆ ಅಂಥ ಕೆರಳಿಕೆಯ ವಸ್ತುವನ್ನು ಹೊರಹಾಕಲು ಸುಲಭವಾಗುವಂಥ ಬೇರೆ ಯಾವುದಾದರೂ ವಿಧಾನವನ್ನು ಅನುಸರಿಸಬಹುದು.
ಕೆಮ್ಮು ಈ ಮುಂದಿನ ಅನೇಕ ರೋಗಗಳಲ್ಲಿ ಕಾಣಿಸಿಕೊಳ್ಳುತ್ತದೆ: ನೆಗಡಿ, ಗಂಟಲುನೋವು, ಎದೆಯ ಕ್ಷಯ, ನ್ಯುಮೋನಿಯ, ದಡಾರ, ಸಿಡುಬು, ನಾಯಿ ಕೆಮ್ಮು, ಪ್ಲೂರಸಿ, ಬ್ರಾಂಕೈಟಿಸ್, ಬ್ರಾಂಕಿಯೆಕ್ಟೇಸಿಸ್ ಉಸಿರುನಾಳ ಗಂತಿ ಮುಂತಾದವು. ಸಾಮಾನ್ಯವಾಗಿ ಕೆಮ್ಮಿನ ಲಕ್ಷಣಗಳನ್ನು ಗಮನಿಸಿ ಕಾಯಿಲೆಯ ಸ್ವರೂಪವನ್ನು ನಿರ್ಧರಿಸಬಹುದು.
ನಾಯಿಕೆಮ್ಮು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ತಿಂಗಳುಗಟ್ಟಲೆ ಕಾಡುತ್ತದೆ. ಒಂದೇ ಸಮನೆ ಕೆಮ್ಮು ಬಂದು ಉಸಿರು ಕಟ್ಟುವಂತೆ ಮಾಡುತ್ತದೆ. ಪ್ರಾರಂಭದಲ್ಲಿ ಸ್ವಲ್ಪ ನೆಗಡಿ, ಜ್ವರ, ಕೆಮ್ಮು ಇರುತ್ತವೆ. ರಾತ್ರಿ ಹೊತ್ತು ಕೆಮ್ಮು ಉಲ್ಭಣವಾಗುತ್ತದೆ. ಉಸಿರನ್ನು ಎಳೆದುಕೊಳ್ಳುವುದಕ್ಕೆ ಆಗುವುದೇ ಇಲ್ಲ. ಕೆಮ್ಮು ನಿಂತು ಉಸಿರು ತೆಗೆದುಕೊಂಡಾಗ ವಿಕಾರವಾದ ಧ್ವನಿ ಹೊರಡುತ್ತದೆ. ಕೆಮ್ಮು ಹೆಚ್ಚಿದಾಗ ವಾಂತಿಯಾಗುತ್ತದೆ. ಇದರ ಕಫದಿಂದ ಸೋಂಕು ಹರಡುತ್ತದೆ. (ನೋಡಿ- ನಾಯಿಕೆಮ್ಮು) ನ್ಯುಮೋನಿಯದ ಕೆಮ್ಮಾದರೆ ಎದೆ ನೋಯುತ್ತದೆ. ಕಫ ಸ್ವಲ್ಪ ಕೆಂಪು ಅಥವಾ ಹಳದಿ ಬಣ್ಣದ್ದಾಗಿರಬಹುದು. ಈ ಕೆಮ್ಮಿನ ಜೊತೆ ಜ್ವರವೂ ಇರುತ್ತದೆ. ಉಸಿರು ಬೇಗ ಬೇಗ ಕಷ್ಟದಿಂದ ಬರುತ್ತಿರುತ್ತದೆ.
ದೀರ್ಘಕಾಲ ಉಳಿಯುವ ಕೆಮ್ಮು ಕ್ಷಯದ ಲಕ್ಷಣಗಳಲ್ಲಿ ಒಂದು. ನಿಡುಗಾಲದ ಬ್ರಾಕೇಂಕೈಟಿಸ್ ಕೆಮ್ಮು, ಕಫವನ್ನು ಉಂಟುಮಾಡುತ್ತದೆ. ಕೆಲವರಲ್ಲಿ ಕೆಮ್ಮು ಪ್ರಾತಃಕಾಲದಲ್ಲಿ ಬರುವುದು. ಕೆಲವರಲ್ಲಿ ರಾತ್ರಿ ಕಾಲದಲ್ಲಿ ಮಾತ್ರ ಕೆಮ್ಮು ಕಾಣಿಸಿಕೊಳ್ಳುವುದುಂಟು. ಇನ್ನು ಕೆಲವರಲ್ಲಿ ಕುಕ್ಕಲು ಕೆಮ್ಮಿನ ಹಾಗೆ ಬಂದು ವಾಂತಿಯಾಗುವವರೆಗೂ ನಿಲ್ಲುವುದಿಲ್ಲ. ರೋಗ ಪ್ರಬಲವಾಗುತ್ತ ಬಂದಾಗ ಕೆಮ್ಮು ಸರಾಗವಾಗಿ ಜೊತೆಗೆ ಶ್ಲೇಷ್ಮ ಸಹ ಬರುವುದಕ್ಕೆ ಪ್ರಾರಂಭವಾಗುತ್ತದೆ. ಶ್ಲೇಷ್ಮದಲ್ಲಿ ರಕ್ತವೂ ಇರಬಹುದು. ಎಡಬಿಡದ ಕೆಮ್ಮು ಗಂಟಲಿನ ಏಡಿಗಂತಿಯನ್ನು ಸೂಚಿಸುತ್ತದೆ. ಕೆಮ್ಮಿಗೆ ಚಿಕಿತ್ಸೆ ಆಯಾ ರೋಗವನ್ನು ಅವಲಂಬಿಸಿದೆ.
This article uses material from the Wikipedia ಕನ್ನಡ article ಕೆಮ್ಮು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.